ಗಾಂಧಾರಿ-375 ತಂಡದವರ ಆನಂದಕ್ಕೆ ಪಾರವೇ ಇಲ್ಲ
Team Udayavani, May 26, 2017, 2:27 PM IST
ಕಿರುತೆರೆಯ ಮತ್ತೂಂದು ಜನಪ್ರಿಯ ಮುಖ ಇದೀಗ ಹಿರಿತೆರೆಗೆ ಜಂಪ್ ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಗಾಂಧಾರಿ’ ಧಾರಾವಾಹಿಯ ನಾಯಕಿ ಕಾವ್ಯ ಗೌಡ, ಇದೀಗ ರವಿಚಂದ್ರನ್ ಅಭಿನಯದ “ಬಕಾಸುರ’ ಚಿತ್ರಕ್ಕೆ ನಾಯಕಿಯಾಗಿ
ಆಯ್ಕೆಯಾಗಿದ್ದಾರೆ. ಹಾಗೆ ಆಯ್ಕೆಯಾಗುವುದಕ್ಕೆ ಕಾರಣವೇನು ಗೊತ್ತಾ, “ಗಾಂಧಾರಿ’. ಆ ಧಾರಾವಾಹಿಯಲ್ಲಿ ಕಾವ್ಯದು ಡಬ್ಬಲ್ ರೋಲ್. ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವುದು ನೋಡಿದ, ಚಿತ್ರತಂಡದವರು, ನಾಯಕಿಯ ಪಾತ್ರವನ್ನು ಕಾವ್ಯಗೆ ಕೊಟ್ಟಿದ್ದಾರೆ. “ಗಾಂಧಾರಿ’ ಜೊತೆಜೊತೆಗೆ “ಬಕಾಸುರ’ ಚಿತ್ರದಲ್ಲೂ ಕಾವ್ಯ ನಟಿಸಬೇಕಿದೆ. ಹಾಗಾಗಿ ಅವರಗೆ ತ್ರಿಪಾತ್ರ ಎಂದರೆ ತಪ್ಪಿಲ್ಲ.
ಅಂದಹಾಗೆ, ಕಾವ್ಯ ತಮಗೆ “ಬಕಾಸುರ’ ಚಿತ್ರದಲ್ಲಿ ಅವಕಾಶ ಸಿಕ್ಕ ಬಗ್ಗೆ ಹೇಳಿಕೊಂಡಿದ್ದು, “ಗಾಂಧಾರಿ’ ಧಾರಾವಾಹಿಯ ಪತ್ರಿಕಾಗೋಷ್ಠಿಯಲ್ಲಿ. ಸುಮಾರು 19 ತಿಂಗಳ ಹಿಂದೆ ಪ್ರಾರಂಭವಾದ ಈ ಧಾರಾವಾಹಿ 350 ಕಂತುಗಳನ್ನು ಮುಗಿಸಿ, ಮುಂದಿನ ವಾರ 375ಕ್ಕೆ ಕಾಲಿಡಲಿದೆಯಂತೆ. ಅದೇ ಕಾರಣಕ್ಕೆ ತಂಡದವರು ತಮ್ಮ ಪ್ರಯಾಣದ ಬಗ್ಗೆ ಒಂದು ಪತ್ರಿಕಾಗೋಷ್ಠಿ ಮಾಡಿ ವಿಷಯ ಹಂಚಿಕೊಂಡರು. ಈ ಚಿತ್ರವನ್ನು ಲೋಕೇಶ್ ಕೃಷ್ಣ ನಿರ್ದೇಶಿಸಿದರೆ, ಆನಂದ್ ಆಡಿಯೋದ ಶ್ಯಾಮ್ ಮತ್ತು ಆನಂದ್ ನಿರ್ಮಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಕಾವ್ಯ ಗೌಡ ಜೊತೆಗೆ ಜಗನ್, ಜಯಲಕ್ಷ್ಮೀ, ಭವ್ಯಶ್ರೀ ರೈ, ಕಿರಣ್ ವಟಿ ಮುಂತಾದವರು ನಟಿಸುತ್ತಿದ್ದಾರೆ.
ಈ ಸಂಭ್ರಮವನ್ನು ನೋಡಿದ್ದರೆ, ಆನಂದ್ ಆಡಿಯೋದ ಮೋಹನ್ ತುಂಬಾ ಖುಷಿಪಡುತ್ತಿದ್ದರು ಎಂದರು ಲೋಕೇಶ್. “ಈ ಸಂಭ್ರಮಕ್ಕೆ ಅವರೇ ಕಾರಣ . ಅವರಿಗೆ ಇನ್ನಷ್ಟು ಧಾರಾವಾಹಿಗಳನ್ನು ನಿರ್ಮಿಸುವುದಕ್ಕೆ ಆಸೆ ಇತ್ತು. ಆದರೆ, ಈಗ ಅವರಿಲ್ಲ. ಅವರಿದ್ದಿದ್ದರೆ ಬಹಳ
ಖುಷಿಪಡುತ್ತಿದ್ದರು’ ಎಂದರು ಲೋಕೇಶ್. ಇನ್ನು ನಾಯಕ ಜಗನ್ಗೆ ಈ ಧಾರಾವಾಹಿ ಎಲ್ಲವನ್ನೂ ಕೊಟ್ಟಿದೆಯಂತೆ.
“ಧಾರಾವಾಹಿಯ ಬಗ್ಗೆ ಎಲ್ಲಾ ಕಡೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ವೈಯಕ್ತಿಕವಾಗಿ ನನಗೆ ಈ ಧಾರಾವಾಹಿ ತುಂಬಾ ಹೆಸರು ತಂದುಕೊಟ್ಟಿದೆ. ಇಲ್ಲಿ ನಾನು ಅಂಧನಾಗಿ ನಟಿಸಿದ್ದೀನಿ. ನಾನು ನಿಜಕ್ಕೂ ಅಂಧ ಅಂತ ಆಂಟಿಯೊಬ್ಬರು ಸಹಾಯ ಮಾಡುವುದಕ್ಕೆ ಬಂದಿದ್ದರು. ಈ ಧಾರಾವಾಹಿಯಿಂದ ನನಗೆ ಪ್ರೀತಿ, ಖುಷಿ ಎಲ್ಲವೂ ಸಿಕ್ಕಿದೆ’ ಎಂದರು.