ಕೊಡೆ ಹಿಡಿದು ನಡೆ!
Team Udayavani, Jun 23, 2019, 5:00 AM IST
ಇನ್ಮುಂದೆ ಏನಿದ್ರೂ ನಂದೇ ಹವಾ’ ಎಂದು ಬೇಸಿಗೆ ಅಂತ್ಯದಲ್ಲಿ ಆಗೊಮ್ಮೆ ಈಗೊಮ್ಮೆ ನೆನಪಿಸಿ ಹೋದ ಮಳೆರಾಯನ ಅಧಿಕೃತ ಆಗಮನಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ ಎನ್ನುವಂತೆ ಅಮ್ಮನ ಹಪ್ಪಳ, ಸಂಡಿಗೆಗಳು “ತಣಸು’ ಆಡದಂತೆ ಡಬ್ಬಿಯೊಳಗೆ, ಉಪ್ಪಿನಕಾಯಿ, ಭರಣಿಯೊಳಗೆ ಕೂತು ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಬಿಗಿಸಿಕೊಳ್ಳುತ್ತದೆ. ಒಡೆದ ಹಂಚಿನಿಂದ ನೀರು ಸೋರದಿರಲಿ ಎಂದು ಅಪ್ಪ, ಹೊಸ ಹಂಚು ಹೊದೆಸಿ, ಕಿಟಕಿಯಿಂದ “ಸಿಬರು'(ಗಾಳಿ ಮತ್ತು ಮಳೆಯ ಸಣ್ಣ ಹನಿ) ಒಳಬರದೇ ಇರಲು ಪ್ಲಾಸ್ಟಿಕ್ ತಟ್ಟಿ ಕಟ್ಟಿ ನಾನೂ ಮಳೆಗೆ ರೆಡಿ ಎನ್ನುತ್ತಿದ್ದರು. ಇಷ್ಟೇ ಅಲ್ಲದೆ, ಬೀರುವಿನ ಮೇಲೋ, ಟ್ರಂಕಿನ ಒಳಗೋ ವಿಳಾಸ ಹೊಂದಿದ್ದ ಕೊಡೆಗಳಿಗೂ ಮರುಜನ್ಮ ಪಡೆಯುವ ಕಾಲವೂ ಹೌದು. ಕಳೆದ ವರ್ಷ ಕಡ್ಡಿ ಮುರಿದುಕೊಂಡೋ, ಬಟ್ಟೆ ಹರಿದುಕೊಂಡೋ ಅಂಗವಿಕಲನಾಗಿದ್ದ ಕೊಡೆಗೀಗ ಶಸ್ತ್ರಚಿಕಿತ್ಸೆಯ ಸಮಯ. ಅದಕ್ಕಾಗಿ ನುರಿತ ವೈದ್ಯರನ್ನು ಹುಡುಕುವ ಭರಾಟೆಯೂ ವೇಗ ಪಡೆಯುತ್ತದೆ. ಏಕೆಂದರೆ, ಕೊಡೆ ರೆಡಿಯಾಗಿರಲೇಬೇಕಿತ್ತಲ್ಲ ಜೂನ್ ಒಂದರೊಳಗೆ? ಏಕೆಂದರೆ, ಆಗೆಲ್ಲ ಶಾಲಾ ಆರಂಭದ ದಿನವೇ ಮುಂಗಾರೂ ಹಾಜರ್!
ಹೊಸ ಚೀಲ, ಹೊಸ ಪುಸ್ತಕ, ಕೆಲವೊಮ್ಮೆ ಹೊಸ ಶಾಲೆ. ಆದರೆ, ಕೊಡೆ? ಎರಡು ವರ್ಷದ ಹಿಂದೆ ಕೊಂಡ ಕೊಡೆಗೇನಾಗಿದೆ? ಅಲ್ಲಲ್ಲಿ ತೂತು ಬಿದ್ದಿದೆ, ಕಡ್ಡಿ ಮುರಿದಿದೆ. ಅಷ್ಟೇ! ಎನ್ನುವ ಅಪ್ಪನಿಗೆ ಎದುರುತ್ತರ ಕೊಡಲಾಗದೆ ಸುಮ್ಮನಾಗುತ್ತಿದ್ದೆ. ಸೂಜಿ, ಕಪ್ಪುನೂಲು, ಕತ್ತರಿ ತಂದು ಪ್ರಾಣೋತ್ಕೃಮಣದಲ್ಲಿದ್ದ ಕೊಡೆಯನ್ನು ಅಪ್ಪ ಮತ್ತೆ ಉಸಿರಾಡುವಂತೆ ಮಾಡುತ್ತಿದ್ದರು. ಕೊಡೆ ಬೇರೆಯವರ ಪಾಲಾಗದಂತೆ, ಎದ್ದು ತೋರುವ ನೂಲಿನಲ್ಲಿ ಚಂದವಾಗಿ ನಮ್ಮ ಹೆಸರನ್ನು ಅವರೇ ಹೊಲೆದು “ಛತ್ರಿಬರಹಗಾರ’ರಾಗುತ್ತಿದ್ದರು.
ಹಾಗೆಯೇ ಎರಡೂರು ವರ್ಷಕ್ಕೊಮ್ಮೆ ಹೊಸಕೊಡೆಯ ಮಾಲೀಕರು ಆಗುತ್ತಿದ್ದೆವು. ಹೊಸ ಕೊಡೆ ಬಂದ ವರ್ಷ ನಮ್ಮನ್ನ ಹಿಡಿಯುವವರುಂಟೇ? ಸ್ನೇಹಿತರ ಎದುರು ಜಂಭದ ಕೋಳಿಗಳೇ! ಮಳೆ ಬಂದರೂ, ಬಾರದಿದ್ದರೂ ಯಾವಾಗಲೂ ತೆರೆದಿಟ್ಟ ಕೊಡೆಯನ್ನು ಚಿತ್ರವಿಚಿತ್ರ ತಿರುಗಿಸಿ, ಸ್ನೇಹಿತರ ಎದುರು ಬೀಗುವುದೇ ಬೀಗುವುದು. ದೋಸ್ತಿಕಟ್ ಮಾಡಿದ ಹುಡುಗನೆದುರು ಇನ್ನೂ ಒಂದಿಷ್ಟು ಜಾಸ್ತಿ ಪೋಸ್. ಆದರೇನು? ಬೆಟ್ಟಕ್ಕೆ ಬೆಟ್ಟ ಅಡ್ಡವಿದೆಯಷ್ಟೇ? ನಮ್ಮ ಕೊಡೆ ಹೇಗೆಯೇ ಇರಲಿ, ಸಹಪಾಠಿಯರದ್ದೇ ಯಾವತ್ತೂ ಚಂದ. ಕಾಟೂìನಿನ ಚಿತ್ರದ, ಬಣ್ಣ ಬಣ್ಣದ ಹೂಗಳ ಚಿತ್ತಾರವಿರುವ ಹೊಸ ನಮೂನೆಯ ಕೊಡೆಗಳನ್ನು ಹಿಡಿದು ವಾರಗೆಯ ಗೆಳೆಯರು ಹೋಗುತ್ತಿರುವ ದೃಶ್ಯ ಕಂಡು ಹೊಟ್ಟೆ ಉರಿದುಕೊಳ್ಳುವ ಗಿರಾಕಿಗಳೇ ಆಗಿಬಿಡುತ್ತಿದ್ದೆವು.
“ಮಳೆಗಾಲದಲ್ಲಿ ಕೊಡೆ ಬಿಟ್ಟವ ಕೆಟ್ಟ’ ಎಂಬ ಮಾತಿನಂತೆ ಶಾಲೆಯ ಚೀಲದಲ್ಲಿ ಕೊಡೆಗೊಂದು ಖಾಯಂ ಸ್ಥಾನ ಮಳೆಗಾಲ ಮುಗಿವವರೆಗೂ ಇದ್ದೇ ಇರುತ್ತದೆ. ಸಂದು ಕಡಿಯದೆ ಸುರಿವ ಮಳೆಯ ಜೊತೆ ಜೋರಾಗಿ ಬೀಸುವ ಗಾಳಿಗೆದುರಾಗಿ “ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ’ ಹೋಗುವ ಖುಷಿಗೆ ಸರಿಸಾಟಿಯುಂಟೆ? ಕೊಡೆಯಿಂದ ಇಳಿದು ಬರುವ ಮಳೆಹನಿಯನ್ನು ಕೈಯಲ್ಲಿ ಹಿಡಿದು ಆಡುವ ಪರಿ, ಕೊಡೆಯನ್ನು ನಾನಾ ರೀತಿಯಲ್ಲಿ ತಿರುಗಿಸಿ ಗೆಳೆಯರ ಮೈಮೇಲೆ ನೀರು ಸೀರಿಸುವ ಖುಷಿ, ಒಂದೇ ಕೊಡೆಯಲ್ಲಿ ನಾಲ್ಕೈದು ಜನ ಮೈಒದ್ದೆ ಯಾಗದಂತೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಸಂಭ್ರಮ- ಈಗ ನೆನಪಾದಾಗ ಮತ್ತೆ ಬರಬಾರದೇ ಬಾಲ್ಯ ಎನಿಸದೇ ಇರದು. ಪುಟ್ಟ ಪೆಂಗ್ವಿನ್ಗಳು ನಡೆದಾಡುವಂತೆ ಕಾಣಿಸುವ ರೈನ್ ಕೋಟ್ಧಾರಿಗಳಿಗೆ ಈ ಭಾಗ್ಯ ಇಲ್ಲವೆಂದೇ ನನ್ನನಿಸಿಕೆ.
ಕೊಡೆಯ ಉಪಯೋಗ ಬರಿಯ ಮಳೆಯ ರಕ್ಷಣೆಗೆ ಮಾತ್ರವಲ್ಲ. ಸೌಂದರ್ಯಪ್ರಜ್ಞೆಯುಳ್ಳ ಯುವತಿಯರಿಗೆ ತ್ವಚೆ ಕಪ್ಪಾಗದಂತೆ ರಕ್ಷಿಸುವ ಸಂಗಾತಿಯೂ ಹೌದು. (ಅದಕ್ಕೆ ಇದು ಆತಪತ್ರ. ಆತಪ=ಸೂರ್ಯ, ತ್ರ=ರಕ್ಷಿಸುವವನು) ಈಗ ಬಿಡಿ, ಕಣ್ಣೆಗಳೆರಡು ಕಾಣುವಷ್ಟೇ ಜಾಗ ಬಿಟ್ಟು ಮುಖಕ್ಕೆಲ್ಲಾ ಬಟ್ಟೆ ಸುತ್ತಿಕೊಳ್ಳುವರು ಈಗಿನ ಯುವತಿಯರು. (ಉಗ್ರಗಾಮಿಗಳ ಚಿತ್ರ ಕಣ್ಣಿಗೆ ಬಂತೆ?) ಬರೀ ಯುವತಿಯರೇ ಏಕೆ? ಬ್ರಿಟನ್ನಿನ ರಾಣಿ ರಸ್ತೆಗಿಳಿಯಬೇಕಾದರೆ ತಾ ತೊಟ್ಟ ಬಟ್ಟೆಗಷ್ಟೇ ಕೊಡುವ ಪ್ರಾಶಸ್ತ ಕೊಡೆಗೂ ಕೊಡುತ್ತಾರೆ. ಭಾರತದಲ್ಲಿ ದೇವರ ಮೆರವಣಿಗೆಯ ಮುಂಭಾಗದಲ್ಲಿ ಅಲಂಕೃತ ಕೊಡೆ ಹಿಡಿದುಕೊಂಡು ಹೋಗುತ್ತಿರುವವರನ್ನು ಗಮನಿಸಿರಬಹುದು. ಹಾಗೆಯೇ ನಮ್ಮ ರಾಜಮಹಾರಾಜರು ಕೂತ ಸಿಂಹಾಸನದ ಮೇಲೆ ವಿಶಾಲವಾದ ಬೆಳೊಡೆಯನ್ನು ಬಿಡಿಸಿಟ್ಟಿರುವುದನ್ನು ಚಿತ್ರದಲ್ಲಿ ನೋಡಿಯೋ, ಪುಸ್ತಕದಲ್ಲಿ ಓದಿಯೋ ತಿಳಿದುಕೊಂಡಿರುತ್ತೇವೆ. ಸತ್ಯ ಇದ್ದರೂ ಇರಬಹುದು. ಏಕೆಂದರೆ, ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ- ಅನಾಮಿಕೆಯರು ಕೊಡೆಯನೀಯನೆ ಲೋಭವೇಕರಸ ಎಂದು ರಾಜನನ್ನು ಕೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮದುಮಗ ಕೊಡೆ ಹಿಡಿದು ಅಡಕೆ ಹಾಳೆಯ ಚಪ್ಪಲಿ ಮೆಟ್ಟಿ “ನಾ ಕಾಶಿಗೆ ಹೋಗುವೆ’ ಎಂದು ಎಲ್ಲರನ್ನೂ ಬ್ಲ್ಯಾಕ್ವೆುàಲ್ ಮಾಡುವಾಗ ಮಾವನೋ, ಭಾವನೋ ತಡೆದು ನಿಲ್ಲಿಸಿ, “ನೀನೀಗ ಹೋಗುವುದು ಬೇಡ’ ಎಂದು ಕೊಡೆಯನ್ನು ವಾಪಸು
ಶ್ರೀರಂಜನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?