ಓ ಹೆಣ್ಣೇ, ನಿನ್ನಯ ತಲೆ ಕೂದಲು ಎಷ್ಟೋ ವಾಸಿ..
Team Udayavani, Mar 12, 2021, 6:55 AM IST
ಊಟಕ್ಕೆ ಕುಳಿತಾಗ ಕೆಲವೊಮ್ಮೆ ತಲೆ ಕೂದಲು ಸಿಗುತ್ತದೆ. ಆಗ “ಪುರುಷವೀರರು’ ಹೆಂಗಳೆಯರ ಮೇಲೆ ಹರಿಹಾಯುವುದಿದೆ. ಕೂದಲನ್ನು ಎಷ್ಟು ಒಪ್ಪಓರಣವಾಗಿ ನೋಡುತ್ತೇವೋ ಅದು ಊಟದ ತಟ್ಟೆಯಲ್ಲಿ ಸಿಕ್ಕಿದಾಗ ಅಷ್ಟೇ ನಿಕೃಷ್ಟವಾಗಿ ಕಾಣುತ್ತೇವೆ. ಒಪ್ಪಓರಣವಾಗಿ ಕಾಣುವುದು ಸೌಂದರ್ಯಪ್ರಜ್ಞೆ ಯಿಂದ. ನಿಕೃಷ್ಟವಾಗಿ ಕಾಣುವುದು ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದಿಂದ.
ಸೌಂದರ್ಯಪ್ರಜ್ಞೆ ಕಾರಣದಿಂದಲೇ ಮನುಷ್ಯರು ತಲೆ ಕೂದಲಿಗೆ ಮಾತ್ರ ಪ್ರಾಶಸ್ತ್ಯ ಕೊಡುತ್ತಾರೆ. ದೇಹದ ಉಳಿದ ಭಾಗದಲ್ಲಿರುವ ಕೂದಲಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಆರೋಗ್ಯ ದೃಷ್ಟಿಯಿಂದ ಎಲ್ಲ ಕೂದಲುಗಳಿಗೂ ಮಹತ್ವ ಕೊಡಬೇಕಾಗುತ್ತದೆ.
ಕೂದಲು ಉದುರುವಿಕೆಯ ಸಮಸ್ಯೆಯನ್ನು ಆಳವಾಗಿ ನೋಡಿದಾಗ ಪುರುಷರ ಕೂದಲುಗಳ ಉದುರುವಿಕೆ ಮಹಿಳೆಯರ ಕೂದಲುಗಳ ಉದು ರುವಿಕೆಗಿಂತ ಹೆಚ್ಚು ಅಪಾಯಕಾರಿ.
ಹೆಂಗಳೆಯರ ತಲೆಗೂದಲು ಸಿಗುವುದಾದರೂ ಏಕೆ? ಅದು ದೀರ್ಘವಿರುವುದರಿಂದ ವ್ಯಕ್ತಿಯ ಕಣ್ಣು ತಪ್ಪಿಸಿಕೊಂಡು ಹೊಟ್ಟೆಗೆ ಹೋಗುವುದು ಕಷ್ಟ. ಪುರುಷರ ತಲೆ ಕೂದಲೂ ಒಂದು ಕಾಲದಲ್ಲಿ ದೀರ್ಘವೇ ಇತ್ತು. ಕ್ರಮೇಣ ಪುರುಷರಲ್ಲಿ ಕೂದಲು ಕತ್ತರಿಸುವ ಪ್ರವೃತ್ತಿ ಬೆಳೆಯಿತು. ಈ ಚಿಕ್ಕದಾದ ಪುರುಷರ ಕೂದಲು ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಹೋಗುತ್ತದೆ ಎಂದರೆ ಊಹಿಸುವುದೂ ಕಷ್ಟ. ಒಮ್ಮೆ ಪರೀಕ್ಷಾರ್ಥವಾಗಿಯಾದರೂ ಒಂದು ತಟ್ಟೆಯನ್ನು ನೀವಿರುವ ಕೋಣೆಯ ಒಂದು ಮೂಲೆಯಲ್ಲಿಡಿ, ಕೆಲವು ದಿನ ಮುಟ್ಟಬೇಡಿ. ಅಅನಂತರ ನೋಡಿದರೆ ಅದರಲ್ಲಿ ಕೆಲವು ಕೂದಲುಗಳಾದರೂ ಇರುತ್ತವೆ. ಇದು ಪುರುಷರ ಸಮಸ್ಯೆ. ಇವುಗಳನ್ನು ಹೊರಗೆ ಎಸೆಯುವುದೂ ಅಪಾಯಕಾರಿ. ಇವು ಗಾಳಿಯಲ್ಲಿ ತೇಲಾಡುವುದರಿಂದ ಇನ್ನಾವುದೋ ದಾರಿಯಲ್ಲಿ ಒಳಪ್ರವೇಶಿಸಿದರೆ ಕಷ್ಟ.
ಜಠರಾಗ್ನಿ ಮಂದ: ಹೀಗೆ ಕೂದಲುಗಳು ದೇಹಕ್ಕೆ ಹೋದರೆ ಏನಾಗಬಹುದು? ಇವು ಒಂದು ತೆರನಾದ ವಿಷ. ಆಯುರ್ವೇದದಲ್ಲಿ ಅಗದತಂತ್ರ ವಿಭಾಗದ ಗರವಿಷ ವಿಷಯವು ಇಂತಹ ವಿಷಾಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇವು ದೇಹಕ್ಕೆ ಸೇರಿ ಜಠರಾಗ್ನಿಯ ಉಜ್ವಲತೆಯನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬರ ದೇಹದ ಗುಣಕ್ಕೆ ಅನುಗುಣವಾಗಿ ಜಠರಾಗ್ನಿ ಕಾರ್ಯ ನಿರ್ವಹಿಸುತ್ತದೆ. ವಿಷಾಂಶಗಳು ಸೇರಿ ಜಠರಾಗ್ನಿ ಮಂದವಾದರೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಶರೀರ ಕೃಶವಾಗುತ್ತದೆ. ಕಿಡ್ನಿ, ಹೃದಯ, ಮಿದುಳಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ.
ವಿಷಕಂಠನೂ ಬಿಲ್ವಪ್ರಿಯನೂ: ಕೇವಲ ಕೂದಲು ಎಂದಲ್ಲ, ಸಹಜ ಆಹಾರದಲ್ಲಿಯೂ ಕೆಲವು ವಿಷಾಂಶಗಳು ಇರುತ್ತವೆ. ಇಂತಹ ವಿಷಾಂಶಗಳು ದೇಹಕ್ಕೆ ಸೇರಿದರೆ ಅವುಗಳನ್ನು ಹೊರಗೆ ಹಾಕಲು ಬಿಲ್ವದ ಎಲೆ, ತುಳಸಿ ಎಲೆ, ಲಕ್ಕಿ ಸೊಪ್ಪು (ನಿರ್ಗುಂಡಿ) ಇತ್ಯಾದಿಗಳನ್ನು ಆಹಾರ ರೂಪದಲ್ಲಿ (ಕೇವಲ ಎಲೆ ಸೇವನೆ ಅಥವಾ ತಂಬುಳಿ ಇತ್ಯಾದಿಗಳನ್ನು ಮಾಡಿ) ಸೇವಿಸಬಹುದು. ಬಾಳೆದಿಂಡಿನ ಖಾದ್ಯಗಳನ್ನು ಬಳಸುವ ಕ್ರಮ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮಜ್ಜಿಗೆಯೂ ಪರಿಣಾಮಕಾರಿ. ಶಿವನಿಗೆ ಬಿಲ್ವ ಪ್ರಿಯವಾಗಿ
ರುವುದೂ, ವಿಷಕಂಠ ಎಂಬ ಹೆಸರು ಇರುವುದೂ ಉಲ್ಲೇಖನೀಯ ಎನ್ನುತ್ತಾರೆ ಉದ್ಯಾವರ ಕುತ್ಪಾಡಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಜನಪದ ಔಷಧ ವಿಭಾಗದ ಮುಖ್ಯಸ್ಥೆ ಡಾ| ಚೈತ್ರಾ ಹೆಬ್ಟಾರ್.
ಹೇರ್ಬಾಲ್ ಅಪಾಯ: ಕೂದಲು ಜೀರ್ಣ ವಾಗುವುದಿಲ್ಲ. ಬಿಡಿ ಬಿಡಿಯಾಗಿದ್ದರೆ ಮಲದ ರೂಪದಲ್ಲಿ ಹೊರಹೋಗುತ್ತದೆ. ಆದರೆ ಮಾನಸಿಕ ಸಮಸ್ಯೆ ಇರುವ ಕೆಲವರು ಕೂದಲನ್ನು ಕಿತ್ತು ತಿನ್ನು ತ್ತಾರೆ. ಇದು ಜೀರ್ಣಾಂಗದಲ್ಲಿ ಹೇರ್ಬಾಲ್ ಆಗಿ ಜೀರ್ಣ ವ್ಯವಸ್ಥೆಯನ್ನು ತಡೆಯುತ್ತದೆ. ಹೊಟ್ಟೆ ನೋವು ಇತ್ಯಾದಿಗಳು ಕಾಣುತ್ತವೆ, ಕೆಲವೊಮ್ಮೆ ಸರ್ಜರಿ ಮಾಡಬೇಕಾಗುತ್ತದೆ ಎಂದು ಮಣಿಪಾಲ ಕೆಎಂಸಿ ಕರುಳು ಬೇನೆ ವಿಭಾಗದ ಮುಖ್ಯಸ್ಥೆ, ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ಮಮತಾ ಬಲ್ಲಾಳ್ ಹೇಳುತ್ತಾರೆ.
ಎಣ್ಣೆಸ್ನಾನವೂ ಪರಿಹಾರ: ಯಾವುದೇ ಭಾಗದ ಕೂದಲು ಉದುರುವಿಕೆಗೆ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗುವುದೂ ಒಂದು ಕಾರಣ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಶುದ್ಧ ಎಣ್ಣೆಯ ಸ್ನಾನ ಉತ್ತಮ. ಇದೇ ಕಲ್ಪನೆಯಲ್ಲಿ ದೀಪಾವಳಿ ಸ್ನಾನ ಚಾಲ್ತಿಗೆ ಬಂತು. ನಿತ್ಯ ಎಣ್ಣೆ ಹಚ್ಚಿ ಸ್ನಾನ ಮಾಡಲು ಸಾಧ್ಯವಿಲ್ಲವಾದರೂ ವಾರ, ಪಕ್ಷ, ತಿಂಗಳಿ ಗೊಮ್ಮೆಯಾದರೂ ಮಾಡಬೇಕು ಎಂಬ ಸಲಹೆ ವೈದ್ಯ ಡಾ| ಜಯರಾಮ ಭಟ್ಟ ಅವರದು.
-ಮಟಪಾಡಿ ಕುಮಾರಸ್ವಾಮಿ