ಲಾಕ್ಡೌನ್ ಚಿಂತನೆಗೆ ಮುಂಬೈ ವ್ಯಾಪಾರಿಗಳಿಂದ ವಿರೋಧ
Team Udayavani, Apr 3, 2021, 5:30 PM IST
ಮುಂಬಯಿ : ರಾಜ್ಯಾದ್ಯಂತ ಕೋವಿಡ್ ಪ್ರಕರಣವನ್ನು ನಿಯಂತ್ರಿಸಲು ಲಾಕ್ಡೌನ್ ವಿಧಿಸುವ ಸರಕಾರದ ಚಿಂತನೆಗೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಒಂದು ಪರಿಹಾರವಲ್ಲ. ರೈಲು ಮತ್ತು ಬಸ್ಗಳು ಪೂರ್ಣ ಸಾಮರ್ಥ್ಯದಲ್ಲಿ ಚಲಿಸುತ್ತಿವೆ. ಆದ್ದರಿಂದ ಜನಸಂದಣಿ ಕಡಿಮೆ ಮಾಡಬೇಕು. ಶೇ. 50 ಸಾಮರ್ಥ್ಯಕ್ಕಾಗಿ ಸಮಯ ವಿಂಗಡಿಸಬೇಕು. ಅನೇಕ ಪ್ರದೇಶಗಳಲ್ಲಿ ಬಿಎಂಸಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದಿಲ್ಲ. ವಿವಿಧ ವ್ಯಾಪಾರಿ ಸಂಘಟನೆಗಳು ಆಗ್ರಹಿಸಿವೆ. ನಾವು ನಮ್ಮ ಅಂಗಡಿಗಳಲ್ಲಿ ಸ್ಯಾನಿಟೈಸರ್ ಇಡುತ್ತೇವೆ, ಗ್ರಾಹಕರ ತಾಪಮಾನವನ್ನೂ ಪರಿಶೀಲಿಸುತ್ತೇವೆ. ಅಂಗಡಿಗಳಲ್ಲಿ ಮಾಸ್ಕ್ಗಳು ಕಡ್ಡಾಯವಾಗಿದ್ದು, ಹಿಂದಿನ ಲಾಕ್ಡೌನ್ ನಲ್ಲಿ ನಾವು ನಾಲ್ಕು ತಿಂಗಳು ಅಂಗಡಿ ಮುಚ್ಚಿ ಸರಕಾರದ ಕ್ರಮವನ್ನು ಬೆಂಬಲಿಸಿದ್ದೇವೆ. ಆದರೆ ಈಗ ನಮಗೆ ಸಾಧ್ಯವಿಲ್ಲ ಎಂದು ಫೆಡರೇಶನ್ ಆಫ್ ರಿಟೇಲ್ ಕ್ಲೋತ್ ಡೀಲರ್ಸ್ ಅಸೋಸಿಯೇಶನ್ನ ಗೌರವ ಕಾರ್ಯದರ್ಶಿ ಹರೇನ್ ಮೆಹ್ತಾ ತಿಳಿಸಿದ್ದಾರೆ.
ಸರಕಾರವು ಜನರಿಗೆ ಲಸಿಕೆ ನೀಡುವತ್ತ ಗಮನ ಹರಿಸಬೇಕೇ ಹೊರತು ಲಾಕ್ಡೌನ್ನತ್ತ ಅಲ್ಲ. ಮತ್ತೆ ಲಾಕ್ ಡೌನ್ ಮಾಡಿದರೆ ಅಂಗಡಿಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಸಿಎಂ ಉದ್ಧವ್ ಠಾಕ್ರೆ ಅವರಿಗೆ ಅಂಗಡಿಯವರು ಮತ್ತು ಅವರ ಕಾರ್ಮಿಕರ ಬಗ್ಗೆ ಯೋಚಿಸುವಂತೆ ಕೇಳುತ್ತೇವೆ. ವ್ಯಾಪಾರಿಗಳ ಆರ್ಥಿಕ ಸ್ಥಿತಿ ಈಗಾಗಲೇ ದುರ್ಬಲವಾಗಿದೆ. ಲಸಿಕೆಯನ್ನು ತತ್ಕ್ಷಣ ಎಲ್ಲರಿಗೂ ನೀಡಬೇಕು. ಆಗ ಮಾತ್ರ ಮುಂದಿನ 2-3 ತಿಂಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. ಲಾಕ್ಡೌನ್ ಅನ್ನು ವಿರೋಧಿಸುತ್ತೇವೆ ಎಂದು ಮಹಾರಾಷ್ಟ್ರದ ಫೆಡರೇಶನ್ ಆಫ್ ಅಸೋಸಿಯೇಶನ್ ಅಧ್ಯಕ್ಷ ವಿನೇಶ್ ಮೆಹ್ತಾ ಹೇಳಿದ್ದಾರೆ.
ಮಹಾವಿಕಾಸ್ ಅಘಾಡಿ ಸರಕಾರವು ಸಂಪೂರ್ಣ ಲಾಕ್ ಡೌನ್ ಪರವಾಗಿ ಇಲ್ಲ. ಕೋವಿಡ್ ಹತೋಟಿಗೆ ಗರಿಷ್ಠ ಲಸಿಕೆ ಪರಿಹಾರವಾಗಿದೆ. ಎಂದು ಫೆಡರೇಶನ್ ಆಫ್ ರಿಟೇಲ್ ಟ್ರೇಡರ್ಸ್ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ವಿರೇನ್ ಷಾ ಹೇಳಿದ್ದಾರೆ.