ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ
Team Udayavani, Jul 27, 2021, 8:10 AM IST
ಮಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅವಧಿಯಲ್ಲಿ ರಸ್ತೆ, ಮೂಲ ಸೌಕರ್ಯ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಮೀನುಗಾರಿಕೆ, ಕೃಷಿ ಶಿಕ್ಷಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಗಣನೀಯ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ.
ಎರಡು ವರ್ಷಗಳಲ್ಲಿ ಪ್ರಮುಖವಾಗಿ ಕೆಲವು ಯೋಜನೆ, ಅನುದಾನಗಳನ್ನು ಉಲ್ಲೇಖೀಸುವುದಾದರೆ ಬೆಳ್ತಂಗಡಿ ತಾಲೂಕಿನಲ್ಲಿ ಏತನೀರಾವರಿ ಯೋಜನೆಗೆ 240 ಕೋ.ರೂ. ಮಂಜೂರಾಗಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ 35 ಕಿಂಡಿ ಅಣೆಕಟ್ಟುಗಳಿಗೆ 480 ಕೋ.ರೂ. ಮಂಜೂರುಗೊಂಡಿದ್ದು ಇದರಲ್ಲಿ 13 ಕಾಮಗಾರಿಗಳು ಪೂರ್ಣಗೊಂಡಿದ್ದು 13 ಕಾಮಗಾರಿಗಳು ಪ್ರಗತಿಯಲ್ಲಿವೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ಮಾಸ್ಟರ್ಪ್ಲ್ರಾನ್ ಸಿದ್ಧಪಡಿಸಲಾಗಿದ್ದು 3,986 ಕೋ. ರೂ. ಅಂದಾಜು ವೆಚ್ಚದಲ್ಲಿ ಮುಂದಿನ 5 ವರ್ಷಗಳಲ್ಲಿ 1,348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಿದ್ದು ಪ್ರಸಕ್ತ ಆರ್ಥಿಕ ಸಾಲಿನಲ್ಲಿ 500 ಕೋ.ರೂ. ನೀಡಲಾಗುತ್ತಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಗ್ರಾಮ ಯೋಜನೆ ಸೇರಿದಂತೆ ವಿವಿಧ ಕುಡಿಯುವ ನೀರು ಯೋಜನೆಗಳಿಗೆ ಕಳೆದ ಎರಡು ವರ್ಷಗಳಲ್ಲಿ 100 ಕೋ.ರೂ.ಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ.
- ಆರೋಗ್ಯ ಕ್ಷೇತ್ರ:
ಆರೋಗ್ಯ ಕ್ಷೇತ್ರದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸುಸಜ್ಜಿತ ಕೊರೊನಾ ಸೆಂಟರ್ಗಳ ಆರಂಭ, ಐಸಿಯು ಹಾಗೂ ಆಕ್ಸಿಜನ್ ಬೆಡ್ಗಳ ಹೆಚ್ಚಳ ಆಗಿದೆ. ವೆನ್ಲಾಕ್, ಲೇಡಿಗೋಶನ್, ಇಎಸ್ಐ ಆಸ್ಪತ್ರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಉಪ್ಪಿನಂಗಡಿ ಹಾಗೂ ವಾಮದಪದವಿನಲ್ಲಿ ಆಮ್ಲಜನಕ ಘಟಕ ಸೇರಿದಂತೆ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.
- ಮೀನುಗಾರಿಕಾ ಕ್ಷೇತ್ರ:
ಮಂಗಳೂರಿನಲ್ಲಿ ಮೀನುಗಾರಿಕಾ ಬಂದರು 3ನೇ ಹಂತದ ಕಾಮಗಾರಿಗೆ 21 ಕೋ.ರೂ. ಬಿಡುಗಡೆ, ಬೆಂಗ್ರೆಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 64 ಕೋ.ರೂ., ಮೀನುಗಾರಿಕಾ ಸಂಪರ್ಕ ರಸ್ತೆಗಳ ನಿರ್ವಹಣೆಗೆ 1.25 ಕೋ.ರೂ. ನೀಡಲಾಗಿದೆ. ಮೀನುಗಾರರಿಗೆ ಕಳೆದ ಎರಡು ವರ್ಷಗಳಲ್ಲಿ ಡೀಸೆಲ್ ಸಹಾಯಧನ 88.60 ಕೋ.ರೂ.ಬಿಡುಗಡೆ ಮಾಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.50ರ ಅನುದಾನಗಳನ್ನು ಒಳಗೊಂಡಿರುವ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಮಂಗಳೂರಿನಲ್ಲಿ 700 ಕೋ.ರೂ. ವೆಚ್ಚದ 43 ಯೋಜನೆಗಳಿಗೆ ಅನುಮೋದನೆ ದೊರಕಿದೆ. ಮಂಗಳೂರು-ಅತ್ರಾಡಿ ಚತುಷ್ಪಥ ರಸ್ತೆ ಕಾಮಗಾರಿಗಳಿಗೆ ಚಾಲನೆ, ಸುಬ್ರಹ್ಮಣ್ಯದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನ ಸಸ್ಯೋದ್ಯಾನದ ನಿರ್ಮಾಣ, ಮಂಗಳೂರಿನಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ರೀಜನಲ್ ಕಚೇರಿ, ಮೂಡುಬಿದಿರೆ ಮಿನಿ ವಿಧಾನಸೌಧ ಕಟ್ಟಡಕ್ಕೆ 10 ಕೋ.ರೂ. ವೆಚ್ಚದ ಕಾಮಗಾರಿ, ಪಾಲ್ತಾಡಿ ಅಂಕತಡ್ಕ-ಮಂಜುನಾಥ ನಗರ-ಬಂಬಿಲ ರಸ್ತೆ ಅಭಿವೃದ್ಧಿಗೆ 2 ಕೋ.ರೂ., 5 ಕೋ.ರೂ. ವೆಚ್ಚದಲ್ಲಿ ಬೆಳ್ತಂಗಡಿಯಲ್ಲಿ ಪ್ರವಾಸಿಮಂದಿರ ಯೋಜನೆ ಸೇರಿವೆ.
ಉಡುಪಿ ಜಿಲ್ಲೆಯ ಅಭಿವೃದ್ಧಿ ಪಥ :
ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಡಳಿತದ ಎರಡು ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಗೂ ಪ್ರತ್ಯಕ್ಷ-ಪರೋಕ್ಷವಾಗಿ ಅವರ ಕೊಡುಗೆ ಅನುದಾನ ಮಂಜೂರುಗೊಳಿಸಿದ್ದಾರೆ.
- ನಾಡಕಚೇರಿಗಳಿಗೆ ಸ್ವಂತ ಕಟ್ಟಡ:
ಜಿಲ್ಲೆಯ ವಂಡ್ಸೆ ಮತ್ತು ಕೋಟ ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಲು 12,25,500 ರೂ. ಕಾರ್ಕಳ ತಾಲೂಕಿನ ಅಜೆಕಾರು ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು 17,44,855ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ.
- ಮೀನುಗಾರರಿಗೆ ಪ್ರೋತ್ಸಾಹ: ಮೀನು ಮಾರಾಟಗಾರರಿಗೆ ದ್ವಿಚಕ್ರವಾಹನ, ತ್ರಿಚಕ್ರವಾಹನ ಹಾಗೂ ನಾಲ್ಕು ಚಕ್ರವಾಹನ ಖರೀದಿಗಾಗಿ 2019-20ರಲ್ಲಿ 32 ಫಲಾನುಭವಿಗಳಿಗೆ48 ಲಕ್ಷ ರೂ.ಸಹಾಯಧನ ವಿತರಿಸಲಾಗಿದೆ.
- ಹೊಸ ಕಟ್ಟಡಗಳ ನಿರ್ಮಾಣ: ನಬಾರ್ಡ್ ಯೋಜನೆಯಡಿ 2020-21ನೇ ಸಾಲಿನಲ್ಲಿ ಮಳೆ ಹಾನಿಯಿಂದಾಗಿ ಕುಸಿತಕ್ಕೆ ಒಳಗಾದ ಕಟ್ಟಡಗಳನ್ನು 51 ಲಕ್ಷ ರೂ. ವೆಚ್ಚದಲ್ಲಿ ಐದು ಹೊಸ ಕಟ್ಟಡಗಳನ್ನು ಕಟ್ಟಿಸಲಾಗುತ್ತಿದೆ.
- ಸುಸಜ್ಜಿತ ಹೆದ್ದಾರಿ: ರಾಜ್ಯಹೆದ್ದಾರಿ ಸುಧಾರಣೆ ಯೋಜನೆಯಡಿ 2019-20ನೇ ಸಾಲಿನಲ್ಲಿ00 ಲಕ್ಷ ರೂ. ವೆಚ್ಚದಲ್ಲಿ 2.40 ಕಿ.ಮೀ.ಉದ್ದದ 1 ಕಾಮಗಾರಿಯನ್ನು ಹಾಗೂ 2021-22ನೇ ಸಾಲಿನಲ್ಲಿ 2,650 ಲಕ್ಷ ರೂ. ವೆಚ್ಚದಲ್ಲಿ 5 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. .
- ಕಡಲತೀರಗಳ ಅಭಿವೃದ್ಧಿ: ಕುಂದಾಪುರದ ಕೋಡಿಯಲ್ಲಿ 25 ಲ.ರೂ. ವೆಚ್ಚದ ಕಡಲ ತೀರ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಬ್ರಹ್ಮಾವರ ವ್ಯಾಪ್ತಿಯ ಕೋಡಿಕನ್ಯಾಣದಲ್ಲಿ 25 ಲ.ರೂ. ವೆಚ್ಚದ ಕಡಲ ತೀರ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಬ್ರಹ್ಮಾವರ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿ 35 ಲಕ್ಷ ರೂ. ವೆಚ್ಚದ ಕಡಲ ತೀರ ಅಭಿವೃದ್ಧಿಗೆ ಅನುಮೋದನೆ ನೀಡಿದೆ.
- ಬ್ಲೂಫ್ಲ್ಯಾಗ್ ಪ್ರಮಾಣ ಪತ್ರ: ಪಡುಬಿದ್ರಿಯ ಬೀಚ್ ಬ್ಲೂಫ್ಲ್ಯಾಗ್ ಪ್ರಮಾಣ ಪತ್ರ ಪಡೆದು ಅಂತಾರಾಷ್ಟ್ರಿಯ ಮಾನ್ಯತೆ ಪಡೆದಿದ್ದು, ಬೀಚ್ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರದಿಂದ 8 ಕೋ.ರೂ. ಹಾಗೂ ರಾಜ್ಯ ಸರಕಾರದಿಂದ5 ಕೋ.ರೂ. ಅನುದಾನ ನೀಡಲಾಗಿದೆ. ಕಾರ್ಕಳದಲ್ಲಿರುವ ಕೋಟಿ-ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಕಾಮಗಾರಿಯಲ್ಲಿ 75 ಲ.ರೂ. ವೆಚ್ಚವಾಗಿದ್ದು ಪ್ರಗತಿಯಲ್ಲಿದೆ.