Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ
Team Udayavani, May 5, 2024, 10:44 PM IST
ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ದೇರಳಕಟ್ಟೆ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯನ್ನು ಕರಾವಳಿ ಕಾವಲು ಪಡೆಯ ಸಿಬಂದಿ ಅಶೋಕ್ ಸೋಮೇಶ್ವರ ರಕ್ಷಿಸಿದ್ದಾರೆ. ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೈಸೂರು ನಿವಾಸಿ ಕಿರಣ್ (22) ಸಮುದ್ರ ಪಾಲಾಗಿ ರಕ್ಷಣೆಯಾದ ವಿದ್ಯಾರ್ಥಿಯಾಗಿದ್ದು, ಸಹಪಾಠಿಗಳೊಂದಿಗೆ ಉಳ್ಳಾಲ ಸಮುದ್ರ ತೀರಕ್ಕೆಬಂದಿದ್ದರು. ಸಂಜೆ ವೇಳೆಗೆ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿತು. ಆಗ ಕರಾವಳಿ ಕಾವಲು ಪಡೆಯಿಂದ ನಿಯುಕ್ತಿಗೊಂಡಿದ್ದ ಜೀವರಕ್ಷಕ ಅಶೋಕ್ ಸ್ಥಳದಲ್ಲಿದ್ದು, ವಿದ್ಯಾರ್ಥಿಗಳು ಬೊಬ್ಬೆ ಹಾಕುತ್ತಿದ್ದಂತೆ ಸಮುದ್ರಕ್ಕೆ ಹಾರಿ ಸಮುದ್ರ ಪಾಲಾಗುತ್ತಿದ್ದ ಕಿರಣ್ನನ್ನು ರಕ್ಷಿಸಿದರು.
ವೃತ್ತಿಯಲ್ಲಿ ಮೀನುಗಾರರಾಗಿರುವ ಅಶೋಕ್ ಈ ಹಿಂದೆ ಶೋಮೇಶ್ವರ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಿದ್ದಾರೆ. ಕರಾವಳಿ ಕಾವಲು ಪಡೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸಿಬಂದಿಯಾಗಿರುವ ಅವರು ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಉಳ್ಳಾಲದಲ್ಲಿ ರವಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದ ಕಾರಣ ಅವರಿಗೆ ಉಳ್ಳಾಲದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಉಳ್ಳಾಲ ಬೀಚ್ಗೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದ್ದು, ತತ್ಕ್ಷಣ ಕಾರ್ಯಪ್ರವತ್ತರಾದ ಅಶೋಕ್ ವಿದ್ಯಾರ್ಥಿಯ ಪ್ರಾಣ ರಕ್ಷಿಸಿದರು.