ಮಣಿಕಾ ಬಾತ್ರಾಗೆ ಶೋಕಾಸ್ ನೋಟಿಸ್
Team Udayavani, Aug 5, 2021, 9:47 PM IST
ನವದೆಹಲಿ: ಟೋಕ್ಯೊ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಸಹಾಯ ನಿರಾಕರಿಸಿದ ಭಾರತದ ತಾರಾ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿದೆ.
ಮಣಿಕಾ ಬಾತ್ರಾ ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಾಂಜಪೆ ಅವರಿಗೆ ಟೋಕ್ಯೊಒಲಿಂಪಿಕ್ಸ್ನಲ್ಲಿ ಅಭ್ಯಾಸದ ವೇಳೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸ್ಪರ್ಧೆಯ ವೇಳೆ ತನ್ನ ಕೋಚ್ ಪರಾಂಜಪೆಗೆ ಅವಕಾಶ ನೀಡಬೇಕೆಂದು ಮಣಿಕಾ ಒತ್ತಾಯಿಸಿದರಾದರೂ ಆಯೋಜಕರು ಇದಕ್ಕೆ ಸಮ್ಮತಿಸಲಿಲ್ಲ.
ಒಲಿಂಪಿಕ್ಸ್ನಂತಹ ಜಾಗತಿಕ ಕ್ರೀಡಾಕೂಟಗಳ ವೇಳೆ ರಾಷ್ಟ್ರೀಯ ಕೋಚ್ಗೆ ಮಾತ್ರ ಸ್ಪರ್ಧೆ ನಡೆಯುತ್ತಿರುವ ವೇಳೆ ಆಟಗಾರರಿಗೆ ಸಲಹೆ, ಮಾರ್ಗದರ್ಶನ ನೀಡಲು ಅವಕಾಶವಿರುತ್ತದೆ. ಇಲ್ಲಿ ವೈಯಕ್ತಿಕ ಕೋಚ್ಗಳ ನೆರವು ಪಡೆಯುವಂತಿಲ್ಲ. ಇದರಿಂದ ಬೇಸರಗೊಂಡ ಮಣಿಕಾ ಸ್ಪರ್ಧೆಯ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಸಹಾಯ ನಿರಾಕರಿಸಿದ್ದರು. ಪರಿಣಾಮ, ಮಹಿಳಾ ಸಿಂಗಲ್ಸ್ 32ನೇ ಸುತ್ತಿಗೆ ಪ್ರವೇಶಿಸಿದ್ದ ಮಣಿಕಾ, ಬಳಿಕ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ತಂಡ ಸ್ಪರ್ಧೆಯಲ್ಲೂ ಮಣಿಕಾಗೆ ಪದಕ ಸಿಕ್ಕಿರಲಿಲ್ಲ.