ಬಿಬಿಎಂಪಿಯಿಂದಲೂ ಜಿನೋಮಿಕ್ ಸೀಕ್ವೆನ್ಸ್
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ; ಮಕ್ಕಳಿಗಾಗಿ ಪಾಲಿಕೆಯ ಆಸ್ಪತ್ರೆಗಳು ಸಜ್ಜು
Team Udayavani, Aug 19, 2021, 2:19 PM IST
ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಜಿನೋಮಿಕ್ ಸೀಕ್ವೆನ್ಸ್ ಮಾಡಲಾಗುತ್ತಿದೆ. ಅದರಂತೆಯೇ, ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಪ್ರಾಯೋಗಿಕವಾಗಿ ಜಿನೋಮಿಕ್ ಸೀಕ್ವೆನ್ಸ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಆಸ್ಪತ್ರೆಗಳನ್ನು ಮಕ್ಕಳಿಗಾಗಿ ಸಜ್ಜು ಮಾಡಲಾಗುತ್ತಿದೆ. ಪದ್ಮನಾಭನಗರದ ಆಸ್ಪತ್ರೆ ಹಾಗೂ ಡಾ.ಜಗಜೀವನ್ ರಾಮ್ ನಗರದ ಆಸ್ಪತ್ರೆ ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಪಾಲಿಕೆಯು, ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ತಜ್ಞರ ಸಮಿತಿ, ಮಕ್ಕಳ ವೈದ್ಯರ ಸಮಿತಿ ಜತೆಗೆ ಆಗಾಗ ಸಭೆ ನಡೆಸಲಾಗುತ್ತಿದೆ. ಈಗಾಗಲೆ, ಮನೆ ಮನೆ ಸರ್ವೆ ಕೂಡ ಆರಂಭವಾಗಿದೆ. ಸೆರೋ ಸರ್ವೇಯೂ ನಡೆಯುತ್ತಿದೆ. ಜತೆಗ, ನಿತ್ಯ ನಮ್ಮಲ್ಲಿ ಜಿನೋಮಿಕ್ ಸೀಕ್ವೆನ್ಸ್ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ದಾಂಡೇಲಿ/ಜೋಯಿಡಾಕ್ಕಿಲ್ಲ ಜಲಕ್ರೀಡೆಗೆ ಅನುಮತಿ, ನೆಲಕಚ್ಚಿದ ಪ್ರವಾಸೋದ್ಯಮ
ನಗರದಲ್ಲಿ ಕೋವಿಡ್ ಸೋಂಕು ಕುರಿತಂತೆ ಪ್ರತಿನಿತ್ಯ ನಿಗಾವಹಿಸಲಾಗುತ್ತಿದೆ. ನಿತ್ಯ ಹೊಸದಾಗಿ ಎಷ್ಟು ಕೋವಿಡ್ ಪ್ರಕರಣಹಾಗೂ ಆಸ್ಪತ್ರೆಗಳಲ್ಲಿ ಎಷ್ಟು ಸೋಂಕಿತರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.
ಇದರಲ್ಲಿ ವಿಶೇಷವಾಗಿ ಮಕ್ಕಳು ಎಷ್ಟು ಎಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಪಡೆಯಲು ಈಗಾಗಲೇ ಒಂದು ತಂಡವನ್ನು ರಚನೆ ಮಾಡಲಾಗಿದೆ. ಪ್ರಸ್ತುತ ಕೋವಿಡ್ ಪ್ರಮಾಣ ಹತೋಟಿಯಲ್ಲಿದೆ ಎಂದರು.
ಕೋವಿಡ್ ಹೆಚ್ಚಾಗದಂತೆ ಹಾಗೂ ಪ್ರಕರಣಗಳು ಹೆಚ್ಚಾದರೆ ನಿಯಂತ್ರಣಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾಸ್ಕ್ ಧರಿಸದೇ ಓಡಾಡುವುದರಿಂದಲೇ ಸೋಂಕು ಹೆಚ್ಚು ಹರಡುತ್ತಿದೆ. ಈ ಎಲ್ಲವಿಷಯಗಳಬಗ್ಗೆ ನಿಗಾವಹಿಸಲುಮಾರ್ಷಲ್ ಗಳ 54 ತಂಡ ನೇಮಕ ಮಾಡಲಾಗಿದೆ. ಪ್ರತಿ ತಂಡದಲ್ಲಿ ನಾಲ್ಕು ಮಂದಿ ಮಾರ್ಷಲ್ಸ್, ಪೊಲೀಸ್, ಗೃಹ ರಕ್ಷಕದಳ ಸಿಬ್ಬಂದಿ ಇರಲಿದ್ದಾರೆ. ವಿಶೇಷವಾಗಿ ಸಿವಿಲ್ ಡಿಫೆನ್ಸ್ ನಿಯೋಜನೆ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಇದ್ದು, ಈ ಬಗ್ಗೆ ಹೆಚ್ಚು ನಿಗಾ ವಹಿಸುವಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಅವಕಾಶ: ಇದೇ ತಿಂಗಳ 23ರಿಂದ ಶಾಲೆ ಆರಂಭವಾಗಲಿದೆ. ಈಗಾಗಲೇ, ಕಾಲೇಜಿಗೆ ತೆರಳುವವರಿಗೆ
ಕಡ್ಡಾಯವಾಗಿ ಲಸಿಕೆ ನೀಡಲಾಗಿದೆ. ಕೋವಿಡ್ ನಿಯಮ ಪಾಲನೆ ವಿಚಾರಕ್ಕೆ ಹೆಚ್ಚಿನ ಗಮನಹರಿಸಲಾಗಿದೆ. ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ
ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಬಸ್, ಖಾಸಗಿ ಶಾಲೆಗಳಲ್ಲಿ ಎಸ್ಒಪಿ ಪಾಲನೆ ಕುರಿತಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸರ್ಕಾರಕ್ಕೆ ಹೆಚ್ಚು ಲಸಿಕೆಗೆ ಬೇಡಿಕೆ: ಗೌರವ್ಗುಪ್ತ
ನಗರದ ಜನರು, ಹೆಲ್ಮೆಟ್ ಹಾಗೂ ಕಾರಿನ ಸೀಟ್ ಬೆಲ್ಟ್ ರೀತಿಯಲ್ಲಿಯೇ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಲು ಹಿಂದೇಟು ಹಾಕುವ ಕಡೆಗಳಲ್ಲಿ ಹೆಚ್ಚಿನ ನಿಗಾ ಇಡಲು ತೀರ್ಮಾನ ಮಾಡಲಾಗಿದೆ. ಮಂಗಳವಾರ ರಾಜ್ಯ ಸರ್ಕಾರದ ಜತೆಗೆ ನಡೆದ ಸಭೆಯಲ್ಲಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡಲಾಗಿದೆ. ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಲಸಿಕೆ ಬರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದರು.