ಲಕ್ನೋ ವಿಮಾನ ನಿಲ್ದಾಣದಲ್ಲಿ ಚತ್ತೀಸ್ ಗಢ್ ಸಿಎಂಗೆ ತಡೆಯೊಡ್ಡಿದ ಪೊಲೀಸರು, ಸ್ಥಳದಲ್ಲೇ ಧರಣಿ!
ಲಕ್ನೋ ಪೊಲೀಸರು ಯಾವುದೇ ಆದೇಶವಿಲ್ಲದೇ ನನ್ನ ವಿಮಾನ ನಿಲ್ದಾಣದಲ್ಲಿಯೇ ತಡೆದು ನಿಲ್ಲಿಸಿದ್ದಾರೆ
Team Udayavani, Oct 5, 2021, 4:20 PM IST
ಲಕ್ನೋ: ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಲು ಆಗಮಿಸಿದ್ದ ಚತ್ತೀಸ್ ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿಯೇ ತಡೆದು ನಿಲ್ಲಿಸಿದ ಪರಿಣಾಮ ಸಿಎಂ ವಿಮಾನ ನಿಲ್ದಾಣದಲ್ಲಿಯೇ ನೆಲದ ಮೇಲೆ ಕುಳಿತು ಧರಣಿ ನಡೆಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಇಂದು ಮುಂಬೈಗೆ ರಾಯಲ್ಸ್ ಸಲಾವು: ಎರಡು ತಂಡಗಳಿಗೂ ಅಳಿವು-ಉಳಿವಿನ ಹೋರಾಟ
ಲಖಿಂಪುರ್ ಹಿಂಸಾಚಾರ ವಿರೋಧಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸಂದರ್ಭದಲ್ಲಿಯೇ ಲಕ್ನೋ ಪೊಲೀಸರು ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ತೆಗೆದುಕೊಂಡು ಗೃಹಬಂಧನದಲ್ಲಿ ಇರಿಸಿದ್ದರು. ಏತನ್ಮಧ್ಯೆ ಉತ್ತರಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲು ಅವಕಾಶ ನೀಡದ ಪೊಲೀಸರ ವಿರುದ್ಧ ಅಸಮಧಾನವ್ಯಕ್ತಪಡಿಸಿದ ಸಿಎಂ ಬಾಘೇಲ್ ವಿಮಾನ ನಿಲ್ದಾಣದೊಳಗೆ ಧರಣಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಲಕ್ನೋ ಪೊಲೀಸರು ಯಾವುದೇ ಆದೇಶವಿಲ್ಲದೇ ನನ್ನ ವಿಮಾನ ನಿಲ್ದಾಣದಲ್ಲಿಯೇ ತಡೆದು ನಿಲ್ಲಿಸಿದ್ದಾರೆ ಎಂದು ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ಫೋಟೊವನ್ನು ಮುಖ್ಯಮಂತ್ರಿ ಬಾಘೇಲ್ ಅವರು ಟ್ವೀಟ್ ಮಾಡಿದ್ದರು.
ನನ್ನನ್ನು ಯಾಕೆ ತಡೆದು ನಿಲ್ಲಿಸಿದ್ದೀರಿ? ನಾನೇನು ನಿಷೇಧಾಜ್ಞೆ ಹೇರಿರುವ ಲಖಿಂಪುರ್ ಪ್ರದೇಶಕ್ಕೆ ತೆರಳುತ್ತಿಲ್ಲ. ನಾನು ತುರ್ತಾಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಬೇಕಾಗಿದೆ ಎಂದು ಪೊಲೀಸರ ಬಳಿ ಸಿಎಂ ಬಾಘೇಲ್ ಅವರು ಹೇಳಿಕೊಂಡರೂ ಕೂಡಾ ವಿಮಾನ ನಿಲ್ದಾಣದಿಂದ ಹೊರಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.