ಸತತ ಮಳೆ: ಮನೆ, ದೇವಾಲಯದ ಗೋಡೆ ಕುಸಿತ
Team Udayavani, Nov 21, 2021, 12:15 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಇನ್ನು ಅವಾಂತರ ಗಳನ್ನು ಮಾಡುತ್ತಿದ್ದು, ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆಗಳು ಕುಸಿದಿವೆ. ತಾಲೂಕಿನ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬಂಡಮ್ಮನಹಳ್ಳಿ ಗ್ರಾಮದಲ್ಲಿ, ಮುಜರಾಯಿ ಇಲಾಖೆಗೆ ಸೇರಿದ ಬಂಡಿ ಮಹಾಕಾಳಿ ದೇವಾಲಯದ ಗೋಡೆ ಕುಸಿದಿದೆ. ನಗರದ ಶಾಂತಿ ನಗರದ ಮಹೇಶ್ ಎನ್ನುವವರ ಮನೆಯ ಗೋಡೆ ಕುಸಿದ ಕಾರಣ ಪ್ಲಾಸ್ಟಿಕ್ ಪೇಪರ್ ಹೊದಿಸಿ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದನ್ನೂ ಓದಿ:- ಸ್ವಂತ ಕಚೇರಿಗಳಿಂದ ಸಂಘಟನೆ ಬಲಗೊಳ್ಳಲು ಸಾಧ್ಯ: ಮಹೇಶ್ ಎಸ್. ಶೆಟ್ಟಿ
ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಸೊಣ್ಣೆನಹಳ್ಳಿ ಗ್ರಾಮದ ಪರಮೇಶಯ್ಯ ಎನ್ನುವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಪರಮೇಶಯ್ಯ ಕುಟುಂಬ ಮನೆಯಿಲ್ಲದೆ ದೊಡ್ಡಬಳ್ಳಾಪುರದ ಸಹೋದರನ ಮನೆಯಲ್ಲಿ ವಾಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
ಸ್ಥಳ ಪರಿಶೀಲನೆ ನಡೆಸಿ: ಮತ್ತೂಂದೆಡೆ ಸತತವಾಗಿ ಸುರಿದ ಮಳೆಯಿಂದ ಬೆಳೆಗಳು ಹಾನಿಯಾಗಿದ್ದು, ರೈತರು ಪರಿತಪಿಸುವಂತಾಗಿದೆ. ಅಂದಾಜು ಶೇ.80ರಷ್ಟು ರಾಗಿ ಬೆಳೆ ಹಾಳಾಗಿದೆ ಎನ್ನಲಾಗಿದೆ. ಫಸಲ್ ವಿಮಾ ಯೋಜನೆಯ ಪರಿಹಾರ ಪಡೆಯಲು ಕೃಷಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸ್ಥಳ ಪರಿಶೀಲನೆ ನಡೆಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ನೆರವಾಗಲು ತಾಲೂಕು ಆಡಳಿತ ಕಂದಾಯ ಇಲಾಖೆಯವರಿಗೆ ವರದಿ ನೀಡುವಂತೆ ಸೂಚಿಸಲು ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು: ಸತತ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ಜಿಲ್ಲೆಯ ಪ್ರಮುಖ ಬೆಳೆಗಳಾದ ರಾಗಿ, ಜೋಳ, ಅವರೆ, ಹಳಸಂದೆ, ತೊಗರಿ ಮೊದಲಾದ ಬೆಳೆಗಳು ಹಾನಿಗೀಡಾಗಿವೆ. ಬೆಳೆ ಹಾನಿ ಕುರಿತಾಗಿ ಜಂಟಿ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.