ಮೇಕೆದಾಟು ಹೆಸರಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ : ಕಾಂಗ್ರೆಸ್ ವಿರುದ್ಧ ಯತ್ನಾಳ ಕಿಡಿ
Team Udayavani, Jan 3, 2022, 7:00 PM IST
ಮೇಕೆದಾಟು-ಕಾಂಗ್ರೆಸ್ ರಾಜಕೀಯ ಗಿಮಿಕ್ : ಯತ್ನಾಳ
ವಿಜಯಪುರ : ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಏನನ್ನೂ ಮಾಡದ ಡಿ.ಕೆ.ಶಿವಕುಮಾರ್ ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಾದಯಾತ್ರೆಯ ರಾಜಕೀಯ ಗಿಮಿಕ್ ಆರಂಭಿಸಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ, ಕಾಂಗ್ರೆಸ್ ನಾಯಕರ ಪಾದಯಾತ್ರೆ ಹೋರಾಟ ರಾಜಕೀಯ ನಾಟಕ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷ 10 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿದ್ದನ್ನೇ ಕೊಟ್ಟಿಲ್ಲ. ಈಗ ಇದೇ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯಲ್ಲಿ ರಾಜಕೀಯ ಗಿಮಿಕ್ ಮಾಡಲು ಪಾದಯಾತ್ರೆ ಆರಂಭಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಿನಿಮಾ ಶೂಟಿಂಗ್ಗೆ ಹೋದವಂತೆ ಹೋರಾಟದಲ್ಲಿ ಗಿಮಿಕ್ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರಂತೂ ಮನೆಯಲ್ಲಿ ಮೇಕೆದಾಟು ಯೋಜನೆ ಬೋರ್ಡ್ ಹಿಂದೆ ಇಟ್ಟುಕೊಂಡು ನಡೆದುಕೊಂಡು ಹೋದಂತ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇದರಿಂದ ಜನರನ್ನು ಹುಚ್ಚರನ್ನಾಗಿ ಮಾಡಬಹುದು ಎಂದು ತಿಳಿದಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಬಲವಾಗಿದ್ದು, ಎಲ್ಲವನ್ನೂ ಅರಿತಿದ್ದಾರೆ. ಇವರು ಜನರನ್ನು ಹುಚ್ಚರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.
ಆಲಮಟ್ಟಿ ಬಳಿ ಜಲಾಶಯ ನಿರ್ಮಾಣಕ್ಕೆ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರು ಅಡಿಗಲ್ಲು ಹಾಕಿದಾಗ, ಯೋಜನೆಯ ವೆಚ್ಚ ಕೇವಲ 1,000 ಕೋಟಿ ಮಾತ್ರ ಹಣ ಬೇಕಿತ್ತು. ಆದರೆ 50 ವರ್ಷ ಕಾಂಗ್ರೆಸ್ ಸರ್ಕಾರ ಇದ್ದರೂ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಕುಟುಕಿದರು.
2013 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನಡೆಸಿದ ಕೂಡಲಸಂಗಮ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಕೂಡಲಸಂಗಮನಾಥನ ಮೇಲೆ ಆಣೆ ಮಾಡಿ ಹೇಳಿದ ಮಾತಿನಂತೆ ಅಧಿಕಾರಕ್ಕೆ ಬಂದ ಮೇಲೆ ಕೆಬಿಜೆಎನ್ಎಲ್ಗೆ ಅನುದಾನ ನೀಡಲಿಲ್ಲ. ಆದರೆ ಕಳೆದ ಅಧಿವೇಶನದಲ್ಲಿ ಇದೇ ವಿಷಯವಾಗಿ ತಪ್ಪು ಮಾಹಿತಿ ನೀಡಿದರು ಎಂದರು.
ಇದನ್ನೂ ಓದಿ : ಈ ತಿಂಗಳ 20 ರೊಳಗೆ ಸಂಪುಟ ಬದಲಾವಣೆ ಖಚಿತ: ಮತ್ತೆ ಯತ್ನಾಳ್ ಗುಡುಗು
ಆದರೆ ಸದನದಲ್ಲಿ ಮಾತನಾಡುವಾಗ ನಾನು ಹಾಗೆ ಹೇಳಿಲ್ಲ, ಇಡೀ ರಾಜ್ಯದ ನೀರಾವರಿಗೆ ಯೋಜನೆ 10 ಸಾವಿರ ಕೋಟಿ ರೂ. ನೀಡುವ ಭರವಸೆ ನೀಡಿದ್ದಾಗಿ ಮಾತು ಬಲಿಸಿದರು. ಅವರ ಎರಡು ಹೇಳಿಕೆಗಳ ಕುರಿತು ನಮ್ಮಲ್ಲಿ ದಾಖಲೆ ಇದೆ ಎಂದ ಯತ್ನಾಳ ವಾಗ್ದಾಳಿ ನಡೆಸಿದರು.
ನೀರಾವರಿ ಸಚಿವರಾಗಿದ್ದಾಗ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆ ಮಾಡಲು ಏಕೆ ಆಸಕ್ತಿ ತೋರಲಿಲ್ಲ. ಇಂಥ ತಂತ್ರಗಳನ್ನು ಯಾರು ಕೇಳಲ್ಲ ಫಿಲಂ ಶೂಟಿಂಗ್ ಮಾಡಿದಂತೆ ನಾಟಕ ನಡೆಸಿದ್ದನ್ನು ನೋಡುವುದಿಲ್ಲ ಎಂದರು.
ರಾಜ್ಯದಲ್ಲಿ ಕೋವಿಡ್ ಅಲೆ ಹೆಚ್ಚುತ್ತಿದೆ. ಸಾಂಕ್ರಾಮಿಕ ರೋಗದ ಹರಡುವಿಕೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೂಲಕ ರೋಗ ಹರಡುವ ಹುನ್ನಾರ ನಡೆಸಿದ್ದಾರೆ. ಇದರ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ, ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.