ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ
Team Udayavani, Jan 6, 2022, 5:55 PM IST
ಮಾನ್ವಿ: ಕಸಾಪ ವತಿಯಿಂದ ಯುವಕರನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆ ತರಲು ವಿವಿಧ ಕಾರ್ಯಕ್ರಮಗಳನ್ನು ಐದು ವರ್ಷಗಳ ಅವಧಿಯಲ್ಲಿ ಹಾಕಿಕೊಳ್ಳಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ತಿಳಿಸಿದರು.
ಪಟ್ಟಣದ ಮುಸ್ಲಿಂ ಶಾದಿ ಮಹಲ್ ಸಭಾಂಗಣದಲ್ಲಿ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಡೆದ ಕಾಲೇಜು ಸಾಹಿತ್ಯ ಸಂಭ್ರಮ, ರಾಷ್ಟ್ರಕವಿ ಕುವೆಂಪು ಜನ್ಮದಿನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿನ ಶರಣರು, ಸಂತರು ರಚಿಸಿರುವ ವಚನ ಹಾಗೂ ನಾಡಿನ ಹಿರಿಯ ಕವಿಗಳ ಸಾಹಿತ್ಯ ಪರಿಚಯಿಸುವ ಮೂಲಕ ಸಾಹಿತ್ಯ ರಚಿಸುವುದಕ್ಕೆ ಪ್ರೇರಣೆ ನೀಡಬೇಕು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಮಾಲಾರ್ಪಣೆ ಮಾಡಿದರು. ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬೆಳಕು ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಹಾಗೂ ಕ. ಜಾ. ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಸಿರಿವಾರ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ರೇವಣಸಿದ್ದಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ವೆಂಕನಗೌಡ ವಟಗಲ್, ಚಿತ್ರ ಕಲಾವಿದ ವಾಜೀದ್ ಸಾಜೀದ್, ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಚನ್ನಬಸವ ಬಾಗಲವಾಡ, ಕಾರ್ಯದರ್ಶಿ ತಾಯಪ್ಪ.ಬಿ. ಹೊಸೂರು, ಬೆಳಕು ಸಂಸ್ಥೆಯ ಜಿಲ್ಲಾಧ್ಯಕ್ಷೆ ಸಂಗೀತ ಸಾರಂಗಮಠ, ಚಂದ್ರಶೇಖರ ಮದ್ಲಾಪೂರು, ತಾ. ಅಧ್ಯಕ್ಷೆ ಶಾಂತಾ, ರವಿಕುಮಾರ್ ಪಾಟೀಲ್ ಇದ್ದರು.