ನಿರ್ವಹಣೆ ಕೊರತೆಯಿಂದ ಯಂತ್ರಗಳು ನಿರುಪಯುಕ್ತ
Team Udayavani, Mar 16, 2022, 4:42 PM IST
ದೇವದುರ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆಗಳ ವೈಜ್ಞಾನಿಕ ಬೆಲೆ ನಿಗದಿಗಾಗಿ 65ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ತೂಕದ ಯಂತ್ರಗಳು ಸದ್ಬಳಕೆ ಆಗದೇ ತುಕ್ಕು ಹಿಡಿದಿವೆ.
ಶನಿವಾರ ವಾರದ ಸಂತೆ ದಿನ ಕುರಿ-ಮೇಕೆಗಳ ತೂಕವೇ ನಡೆಯುವುದಿಲ್ಲ. ಬಾಯಿಗೆ ಬಂದಂತೆ ಕುರಿ, ಮೇಕೆಗೆ ದರ ನಿಗದಿ ಮಾಡಲಾಗುತ್ತಿದೆ. ಕುರಿ, ಮೇಕೆ ವ್ಯಾಪಾರ-ವಹಿವಾಟು ಕುರಿ ಮತ್ತು ಉಣ್ಣೆ ನಿಗಮಕ್ಕೆ ಟೆಂಡರ್ ಆಗಿದ್ದು, ಅದರ ನಿರ್ವಹಣೆಯನ್ನೂ ನಿಗಮಕ್ಕೆ ವಹಿಸಲಾಗಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ವಹಿವಾಟನ್ನು ಪ್ರತಿವರ್ಷ ರಾಯಚೂರು ಎಪಿಎಂಸಿಗೆ ವಿಲೀನ ಮಾಡಲಾಗುತ್ತಿರುವುದರಿಂದ ಇಲ್ಲಿ ಯಾವುದೇ ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟು ನಡೆಯುವುದಿಲ್ಲ. ಹೀಗಾಗಿ ಪ್ರತಿ ಶನಿವಾರ ಎತ್ತು, ಕುರಿ, ಮೇಕೆ, ಕೋಳಿ ಸಂತೆಗೆ ಮಾತ್ರ ಎಪಿಎಂಸಿ ಸೀಮಿತವಾದಂತಾಗಿದೆ. ಹೀಗಾಗಿ ವ್ಯಾಪಾರ-ವಹಿವಾಟು ಸ್ಥಗಿತವಾಗಿದ್ದರಿಂದ ಲಕ್ಷಾಂತರ ರೂ.ವೆಚ್ಚ ಭರಿಸಿ ಅಳವಡಿಸಿದ ಯಂತ್ರಗಳು ತುಕ್ಕು ಹಿಡಿಯುತ್ತಿವೆ.