ಅಣ್ಣ-ತಂಗಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಬಸ್ ಢಿಕ್ಕಿ: ಚಕ್ರ ಹರಿದು ಅಣ್ಣನ ಎದುರೇ ತಂಗಿ ಸಾವು
Team Udayavani, Apr 19, 2022, 2:18 PM IST
ಬೆಂಗಳೂರು: ಅಣ್ಣ-ತಂಗಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿಯಾದ ಪರಿಣಾಮ, ಬೈಕ್ ರಸ್ತೆಗೆ ಬಿದ್ದು ತಂಗಿಯ ತಲೆ ಮೇಲೆ ಬಸ್ನ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಂತಾಮಣಿ ಮೂಲದ ಲಕ್ಷ್ಮಿದೇವಿ (50) ಮೃತ ದುರ್ದೈವಿ. ಆಕೆಯ ಅಣ್ಣ ಕೋಡಿಪಾಳ್ಯ ನಿವಾಸಿ ರಘುನಾಥ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಂತಾಮಣಿ ಮೂಲದ ಲಕ್ಷ್ಮಿದೇವಿ ಅವರು ಆಸ್ಪತ್ರೆಗೆ ಹೋಗುವ ಸಲುವಾಗಿ ಅಣ್ಣ ರಘುನಾಥ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ 8.45ರ ಸುಮಾರಿಗೆ ಬೈಕ್ನಲ್ಲಿ ರಘುನಾಥ್ ಅವರು ಲಕ್ಷ್ಮಿದೇವಿ ಅವರನ್ನು ಕೂರಿಸಿಕೊಂಡು ಮಾಧವನಗರದ ಖಾಸಗಿ ಆಸ್ಪತ್ರೆಗೆ ಬರುತ್ತಿದ್ದರು. ಮಾರ್ಗದ ಅರಮನೆ ರಸ್ತೆಯ ಗೇಟ್ ಸಂಖ್ಯೆ 7ರ ಬಳಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದಿರುವ ಕೆಎಸ್ಆರ್ಟಿಸಿ, ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಅಣ್ಣ-ತಂಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್ನ ಮುಂದಿನ ಚಕ್ರ ಲಕ್ಷ್ಮಿದೇವಿ ಅವರ ತಲೆಯ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಹೆಬ್ರಿ: ಪ್ರಿಯಕರ ಪೋನ್ ಕಾಲ್ ಸ್ವೀಕರಿಸಿಲ್ಲವೆಂದು ಮನನೊಂದು ಪ್ರಿಯತಮೆ ಆತ್ಮಹತ್ಯೆ
ಅಣ್ಣ ರಘುನಾಥ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಘಾತಕ್ಕೆ ಕೆಎಸ್ಆರ್ಟಿಸಿ ಚಾಲಕನ ಅಜಾಗರೂಕತೆಯ ಚಾಲನೆ ಹಾಗೂ ಅತಿಯಾದ ವೇಗವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸ್ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.