ನಗರದ ಅಭಿವೃದ್ಧಿಗೆ 40 ಕೋಟಿ ರೂ. ಬಿಡುಗಡೆ
ತಮಗೆ ದೊರಕಬೇಕಾದ ಸೌಕರ್ಯವನ್ನು ಗಟ್ಟಿ ದನಿಯಲ್ಲಿ ಕೇಳಬೇಕಿದೆ
Team Udayavani, Apr 27, 2022, 5:20 PM IST
ದೊಡ್ಡಬಳ್ಳಾಪುರ: ತೀವ್ರವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರಕ್ಕೆ ಮೂಲ ಸೌಕರ್ಯ ಅಗತ್ಯವಿದ್ದು, ನಗರೋತ್ಥಾನದ 4ನೇ ಹಂತದಲ್ಲಿ 40 ಕೋಟಿ ರೂ. ನೀಡಲಾಗಿದೆ. ಸಾರ್ವಜನಿಕರು ಸಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ತಮಗೆ ದೊರಕಬೇಕಾದ ಸೌಕರ್ಯವನ್ನು ಗಟ್ಟಿ ದನಿಯಲ್ಲಿ ಕೇಳಬೇಕಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಪೌರಾಡಳಿತ ಇಲಾಖೆ, ಜಿಲ್ಲಾಡಳಿತ, ನಗರಸಭೆ ವತಿಯಿಂದ ನಡೆದ ನಗರಸಭೆ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಹಾಗೂ ನಗರಸಭೆ ಖಾಯಂ ಪೌರ ಕಾರ್ಮಿಕರಿಗೆ ವಸತಿ ಸಮುಚ್ಛಯ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಹೊರವಯದ ಕೈಗಾರಿಕಾ ಪ್ರದೇಶ, ಹೆಚ್ಚುತ್ತಿರುವ ಬಡಾವಣೆಗಳು, ಶಿಕ್ಷಣ ಸಂಸ್ಥೆಗಳಿಂದ ನಗರಕ್ಕೆ ಹೆಚ್ಚು ಮೂಲ ಸೌಕರ್ಯ ಬೇಕಿದ್ದು, ಪೌರಾಡಳಿತ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದೆ ಎಂದರು.
ನಗರೋತ್ಥಾನದ 4ನೇ ಹಂತದಲ್ಲಿ 40 ಕೋಟಿ ರೂ., ಎಸ್ಎಫ್ಸಿ ವಿಶೇಷ ಅನುದಾನದಡಿ 8 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 90 ಲಕ್ಷ ರೂ. ನೀಡಲಾಗಿದೆ. ನಗರದ ಸ್ವತ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ನಗರಸಭೆ ಖಾಯಂ ಪೌರ ಕಾರ್ಮಿಕರಿಗೆ 3.37 ಕೋಟಿ ರೂ.ವೆಚ್ಚದಲ್ಲಿ ಜಿ+2 ಮಾದರಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು.
ಸಕಾಲಕ್ಕೆ ತೆರಿಗೆ ಪಾವತಿಸಿ: ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಹೊಣೆಗಾರಿಕೆಯೂ ಇದೆ. ಕೋವಿಡ್ ಕಾರಣದಿಂದ ನಗರಸಭೆಯಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು, ಸಾರ್ವಜನಿಕರು ಸರ್ಕಾರದ ಅನುದಾನವನ್ನೇ ಅವಲಂಭಿಸದೇ ನಿಯಮಿತವಾಗಿ ತೆರಿಗೆ ಪಾವತಿಸುವ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ಮತ್ತೊಮ್ಮೆ ಉದ್ಘಾಟನೆ: ನಗರಸಭೆ ಕಾರ್ಯಾಲಯದ ಉದ್ಘಾಟನೆಗೆ ಮೊದಲು ಎಲ್ಲರೊಡನೇ ಚರ್ಚೆ ಮಾಡಿ ದಿನಾಂಕ ಗೊತ್ತು ಪಡಿಸಲಾಗಿತ್ತು. ನೀತಿ ಸಂಹಿತೆ ಕಾರಣದಿಂದ ಮುಂದೂಡಿದ ಕಾರ್ಯಕ್ರಮ ನಂತರ ಮಾ.16ರಂದು ಮುಖ್ಯಮಂತ್ರಿಗಳ ತುರ್ತು ಸಭೆ ಇದ್ದುದರಿಂದ ಬರಲು ಆಗಲಿಲ್ಲ. ಆದರೆ, ಸರ್ಕಾರದ ಸಚಿವರಾದ ನಮ್ಮ ಅನುಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿರುವುದು ಸರಿಯಲ್ಲ. ಶಿಷ್ಟಾಚಾರದ ಪ್ರಕಾರ ನಾವು ಮತ್ತೂಮ್ಮೆ ಉದ್ಘಾಟನೆ ಮಾಡಿದ್ದು, ಇದು ಚುನಾವಣೆ ಮೇಲೆ ಯಾವ ಪ್ರಭಾವವೂ ಬೀರದು. ಅದನ್ನು ಜನರೇ ನಿರ್ಧರಿಸುತ್ತಾರೆ ಎಂದರು.
ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್, ನಗರಸಭೆ ಕಾರ್ಯಾಲಯದ ಉದ್ಘಾಟನೆಗೆ ಹಿಂದೆ ನಮ್ಮ ಕಲ್ಪನೆಗೂ ಮೀರಿ ಮುಖ್ಯಮಂತ್ರಿಗಳ ಸಭೆ ಇದ್ದುದರಿಂದ ಅನಿವಾರ್ಯವಾಗಿ ಬರಲು ಆಗಲಿಲ್ಲ. ಆದರೆ, ವಿಪಕ್ಷದವರು ಇದನ್ನೇ ದೊಡ್ಡದು ಮಾಡಿ ಪ್ರತಿಭಟನೆ ಮಾಡುವ ಮೂಲಕ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. 2014ರಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲ ಮಡುಗು ನೀರು ಹರಿಸುವ ವೇಳೆ ಚಿಕ್ಕಬಳ್ಳಾಪುರ ದಿಂದ ವಿರೋಧ ವ್ಯಕ್ತವಾದಾಗ ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುವುದು ಬೇಡ ಎಂದು ನೀರಿನ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲಾಗಿತ್ತು.
ಕೋವಿಡ್ ಲಸಿಕೆಗೂ ವಿರೋಧ ಪಕ್ಷದವವರು ಟೀಕಿಸಿದ್ದರು. ಬಡ ರಾಷ್ಟ್ರಗಳಿಗೆ ಲಸಿಕೆ, ನೀರು, ಆಹಾರದ ನೆರವನ್ನು ನೀಡಿ, ಭಾರತೀಯ ಸಂಸ್ಕೃತಿ ತೋರಿಸಿದ್ದೇವೆ ಎಂದರು. ಅನುದಾನ ಬಿಡುಗಡೆಗೆ ಮನವಿ: ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಮಾತನಾಡಿ, ಬೆಳೆಯುತ್ತಿರುವ ನಗರಕ್ಕೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ಎ ದರ್ಜೆ ನಗರಸಭೆಯನ್ನಾಗಿ ಘೋಷಿಸಬೇಕು. ನಗರದ ವಿವಿಧ ಮೂಲ ಸೌಕರ್ಯಾಭಿವೃದ್ಧಿ, ರಸ್ತೆ ಅಗಲೀಕರಣ, ವಿದ್ಯುತ್ ಚಿತಾಗಾರ, ಈಜುಕೊಳ, ನೇಕಾರ ಭವನ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ 97 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ುನವಿ ಸಲ್ಲಿಸಿದರು.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಐದು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಕೆ.ರೇವಣಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ದೊಡ್ಡಬಳ್ಳಾ ಪುರ ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಪೌರಾಯುಕ್ತ ಕೆ.ಜಿ.ಶಿವಶಂಕರ್ ಹಾಗೂ ಮತ್ತಿತರರು ಇದ್ದರು.