ಕೊಲ್ಲೂರು: ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕೊರತೆ
Team Udayavani, May 8, 2022, 11:41 AM IST
ಕೊಲ್ಲೂರು: ಯಾತ್ರಾರ್ಥಿಗಳು ಹಾಗೂ ಪ್ರವಾಸಿಗಳಿಂದ ಕೂಡಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ಮುಖ್ಯ ರಸ್ತೆಯಲ್ಲಿನ ವಾಹನ ನಿಲುಗಡೆ ಸಂಚಾರ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದೆ. ಬಹುತೇಕ ಕಡೆ ಟ್ರಾಫಿಕ್ ಜಾಮ್ ಗೆ ಎಡೆಮಾಡುತ್ತಿದೆ.
ಸಮರ್ಪಕ ವಾಹನ ನಿಲುಗಡೆ ಪ್ರದೇಶದ ಕೊರತೆ
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ದಿನಂಪ್ರತಿ ಕನಿಷ್ಠ 10ಸಾವಿರಕ್ಕೂ ಮಿಕ್ಕಿ ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ವಾಹನ ನಿಲುಗಡೆಗೆ ಒಂದಿಷ್ಟು ಸ್ಥಳವನ್ನು ಮೀಸಲಾಗಿ ಇಟ್ಟಿದ್ದರೂ ಆ ಪ್ರದೇಶವನ್ನು ಹೊರತುಪಡಿಸಿ, ಬೇರೆಲ್ಲೂ ವಾಹನ ನಿಲುಗಡೆಗೆ ಸೂಕ್ತ ಪ್ರದೇಶ ಇಲ್ಲದಿರುವುದರಿಂದ ವಾಹನ ಚಾಲಕರು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವುದು ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ಕೆಲವೊಂದು ವಾಹನಗಳನ್ನು ತರಾತುರಿಯಲ್ಲಿ ರಸ್ತೆ ಪಕ್ಕದಲ್ಲೇ ನಿಲುಗಡೆಗೊಳಿಸುತ್ತಿರುವುದು ಸಂಚಾರ ವ್ಯವಸ್ಥೆ ಮೇಲೆ ಪ್ರಭಾವ ಬೀರಿದೆ.
ಆ್ಯಂಬುಲೆನ್ಸ್ ಕೊರತೆ
ಕೊಲ್ಲೂರಿನಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ಒಯ್ಯಲು ಅಂಬ್ಯುಲೆನ್ಸ್ ಸೇವೆಯ ಕೊರತೆ ಕಂಡುಬಂದಿದ್ದು, ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಹ್ರದಯಘಾತ ಇನ್ನಿತರ ತುರ್ತು ಅಗತ್ಯದ ಖಾಯಿಲೆಗಳಿಗೆ ಸ್ಪಂದಿಸಲು ಅಂಬ್ಯುಲೆನ್ಸ್ ಇಲ್ಲದೇದುಬಾರಿ ಹಣ ತೆತ್ತು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ಅವಯೂ ಬೆಳಗ್ಗಿನಿಂದ ಸಂಜೆಯ ತನಕ ಮಾತ್ರ ಇರುವುದರಿಂದ ರಾತ್ರಿ ಹೊತ್ತಿನಲ್ಲಿ ವೈದ್ಯರ ಸೇವೆಯ ಅನೂಕೂಲತೆ ಇಲ್ಲದೇ ರೋಗಿಗಳು ಬವಣಿಸುವ ಪರಿಸ್ಥಿತಿ ಎದುರಾಗಿದೆ.
ಸಬ್ಸ್ಟೇಷನ್ ಎಂದು ಕಾರ್ಯಾರಂಭಗೊಂಡೀತು?
ಹಾಲ್ಕಲ್ ಬಳಿ ಪೂರ್ಣ ಪ್ರಮಾಣದ ಸಬ್ ಸ್ಟೇಷನ್ ನಿರ್ಮಿಸಿ ವರುಷ ಹಲವು ಕಳೆದರೂ ಅದರ ಕಾರ್ಯಾರಂಭಕ್ಕೆ ಎದುರಾಗಿರುವ ಕೇಂದ್ರದ ಅರಣ್ಯ ನೀತಿ ತೊಡಕಾಗಿದ್ದು, ಅದನ್ನು ನಿಭಾಯಿಸುವ ಭರವಸೆ ಸಂಸದರು ನೀಡಿದ್ದರೂ ಸಹ ಎಂದೂ ಕಾರ್ಯಾರಂಭಗೊಂಡೀತು ಎಂಬ ಪ್ರಶ್ನೆ ಎದುರಾಗಿದೆ. ಕೊಲ್ಲೂರು, ಜಡ್ಕಲ್,ಮುದೂರು, ಯಳಜಿತ್ ಗೋಳಿಹೊಳೆ ಭಾಗದ ನಿವಾಸಿಗಳಿಗೆ ಲೋವೋಲ್ಟೇಜ್ ಸಮಸ್ಯೆಗೆ ಪರಿಹಾರ ಒದಗಿತು ಅನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ಪ್ರಸ್ತಾವನೆ ಏನಾಯಿತು?
ಸುಮಾರು 48 ಕೋ.ರೂ. ವೆಚ್ಚದಲ್ಲಿ ಕೊಲ್ಲೂರಿನಲ್ಲಿ ಬಹುಮಹಡಿಯ ವಾಹನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಮಂಡಿಸಲಾಗಿರುವ ಪ್ರಸ್ತಾವನೆಗೆ ಸರಕಾರ ಯಾವುದೇ ರೀತಿಯಲ್ಲಿ ಈವರೆಗೆ ಸ್ಪಂದಿಸದಿರುವುದು ಗ್ರಾಮಸ್ಥರ ಬಹುಕಾಲದ ಬೇಡಿಕೆ ನನೆಗುದಿಗೆ ಬಿದ್ದಂತಾಗಿದೆ.
2015 ರಲ್ಲಿ ನಮೂದನೆಯಾದ ಕೊಲ್ಲೂರು ಪಟ್ಟಣಕ್ಕೆ ಸಮಗ್ರ ನೀರು ಸರಬರಾಜು ಯೋಜನೆ ಸುದೀರ್ಘ 7 ವರ್ಷಗಳ ಅನಂತರ ಪೂರ್ಣಗೊಂಡಿದ್ದು, ಪರಿಷ್ಕೃತ ಅನುಮೋದಿತ ಯೋಜನೆಯ ವೆಚ್ಚ 33.40 ಕೋಟಿ ರೂ.ಆಗಿದೆ.2020 ಜನವರಿ 1ರಿಂದ ಯೋಜನೆಯ ಕಾರ್ಯನಿರ್ವಹಣೆ ಆರಂಭಗೊಂಡಿದ್ದು, ಯುಜಿಡಿ ಹಾಗೂ ಮೂಕಾಂಬಿಕಾ ದೇಗುಲವು ಗ್ರಾ. ಪಂ.ಸಹಕಾರ ದೊಡನೆ ನಿರ್ವಹಣೆ ಜವಾಬ್ದಾರಿ ವಹಿಸಿದೆ. ಸುಮಾರು 347 ಮನೆ ಸಹಿತ ವಿವಿಧ ಸಂಕೀರ್ಣಗಳಿಗೆ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಯ ನಳ್ಳಿಗಳನ್ನು ಜೋಡಿಸಲಾಗಿದೆ. ಹಾಗೆಯೇ ಕಲುಷಿತ ನೀರಿನ ಹೊರಹರಿವಿಗೆ ವ್ಯವಸ್ಥೆಗೊಳಿಸಲಾಗಿದ್ದರೂ ಬಿಡಲಾಗುವ ನೀರು ಸೌಪರ್ಣಿಕಾ ನದಿ ತಟದಲ್ಲಿ ಪ್ರತ್ಯೇಕಿಸಲಾಗಿದ್ದರೂ ಲೋವೋಲ್ಟೆàಜ್ ಬಾಧೆ ಯಿಂದ ನೀರಿನ ಹೊರಹರಿವಿಗೆ ತಾಂತ್ರಿಕ ಕಾರಣ ಎದು ರಾಗುತ್ತಿರುವುದರಿಂದ ನೀರು ಕಲುಷಿತಗೊಳ್ಳಲು ಎಡೆಮಾಡಿದಂತಾಗುತ್ತಿದೆ, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಯೋಜನೆಯ ಮೂಲ ಉದ್ದೇಶದ ಮೇಲೆ ಪರಿಣಾಮ ಬೀರಲಿದೆ.
ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಯಾತ್ರಾರ್ಥಿಗಳು ಹೆಚ್ಚುತ್ತಿರುವ ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಬೇಕಾಗಿದೆ.ಆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. -ಶಿವರಾಮ ಕೃಷ್ಣ ಭಟ್, ಅಧ್ಯಕ್ಷರು,ಗ್ರಾ.ಪಂ. ಕೊಲ್ಲೂರು
ಭಕ್ತರಿಗೆ ಎಲ್ಲ ರೀತಿಯ ಸೌಕರ್ಯ
ಕೊಲ್ಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಕೈಗೊಂಡ ನಿರ್ಣಯ ಹಂತ-ಹಂತವಾಗಿ ಅನುಷ್ಠಾನಗೊಂಡಿದ್ದು, ಇಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸಲಾಗಿದೆ. ಭಕ್ತರಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸುವಲ್ಲಿ ದೇಗುಲ ಬದ್ಧವಾಗಿದೆ. –ಮಹೇಶ, ಕಾರ್ಯನಿರ್ವಹಣಾಧಿಕಾರಿಗಳು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ.
– ಡಾ| ಸುಧಾಕರ ನಂಬಿಯಾರ್