ಆರ್ಬಿಐ ಬಡ್ಡಿ ದರ ಏರಿಕೆ ನಿರೀಕ್ಷಿತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Team Udayavani, May 8, 2022, 8:19 PM IST
ಮುಂಬೈ: ಬಡ್ಡಿದರಗಳನ್ನು ಆರ್ಬಿಐ ಏರಿಕೆ ಮಾಡಿದ್ದು ನಿರೀಕ್ಷಿತವೇ ಆಗಿತ್ತು. ಆದರೆ, ಅದನ್ನು ಪ್ರಕಟಿಸಿದ ಸಮಯ ಮಾತ್ರ ಅನಿರೀಕ್ಷಿತವೇ ಆಗಿತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂಬೈನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಇರುವ ರಾಷ್ಟ್ರಗಳ ಪ್ರಧಾನ ಬ್ಯಾಂಕ್ಗಳು ಬಡ್ಡಿ ಏರಿಕೆಯ ನಿರ್ಧಾರ ಕೈಗೊಂಡಂತೆಯೇ ದೇಶದಲ್ಲಿಯೂ ಆರ್ಬಿಐ ಬಡ್ಡಿದರ ಏರಿಕೆಯ ನಿರ್ಧಾರ ಕೈಗೊಂಡಿದೆ.
ಆದರೆ, ಎರಡು ಸಾಲ ನೀತಿ ಪರಿಶೀಲನಾ ಸಭೆಗಳ ನಡುವೆ ಅದನ್ನು ಪ್ರಕಟಿಸಿದ್ದು ಮಾತ್ರ ಅಚ್ಚರಿಯ ವಿಚಾರ ಎಂದು ಹೇಳಿದ್ದಾರೆ. ಕಳೆದ ತಿಂಗಳು ನಡೆದಿದ್ದ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದ ಮೊದಲ ಸಾಲನೀತಿ ಪರಿಶೀಲನಾ ಸಭೆಯಲ್ಲಿ ಬಡ್ಡಿದರ ಕಾಯ್ದಿರಿಸಲು ತೀರ್ಮಾನಿಸಲಾಗಿತ್ತು.
2018ರ ಆಗಸ್ಟ್ ಬಳಿಕ ಮೊದಲ ಬಾರಿಗೆ ಮೇ 4ರಂದು ಆರ್ಬಿಐ ಬಡ್ಡಿದರ ಏರಿಕೆ ಮಾಡಿತ್ತು. ಇದಲ್ಲದೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಯೂ ಸಮರ್ಥನೀಯವೇ ಎಂದು ವಿತ್ತ ಸಚಿವೆ ಹೇಳಿದ್ದಾರೆ.