ವೈಯಕ್ತಿಕ ದ್ವೇಷಕ್ಕೆ ಪ್ರತಿಕಾರ ಯತ್ನ: ಐವರ ಸೆರೆ
Team Udayavani, May 10, 2022, 9:33 AM IST
ಬೆಂಗಳೂರು: ವೈಯಕ್ತಿಕ ದ್ವೇಷ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿ ಪೆಟ್ರೋಲ್ ಬಾಂಬ್ ಸೇರಿ ಮಾರಕಾಸ್ತ್ರ ಸಂಗ್ರಹಿಸುತ್ತಿದ್ದ ಆರೋಪ ದಡಿ ಐವರು ಖದೀಮರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಸಾರಾಯಿಪಾಳ್ಯ ನಿವಾಸಿ, ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಆಲಿಯಾಸ್ ಬಾಬು ಮೇಲಿದ್ದ ಹಳೆದ್ವೇಷ ತೀರಿಸಿಕೊಳ್ಳಲು ಹಾಗೂ ಸಮಾಜಘಾತುಕ ಕೃತ್ಯ ಎಸಗಲು ಸಿದ್ಧತೆ ಮಾಡಿಕೊಂಡಿದ್ದ ಮುಖ್ಯ ಆರೋಪಿ ಫಯಾಜ್ ಸಹಚರರಾದ ಸೈಯದ್ ಅಸ್ಕರ್ ಹಾಗೂ ಮುನ್ನಾವರ್ನನ್ನು ಬಂಧಿಸಿ ಒಂದು ನಾಡಪಿಸ್ತೂಲ್, ಜೀವಂತ ಗುಂಡು, 10 ಪೆಟ್ರೋಲ್ ಬಾಂಬ್ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳೆಲ್ಲರೂ ಹೆಗಡೆನಗರ ನಿವಾಸಿಗಳಾಗಿದ್ದಾರೆ.
ಹೆಣ್ಣೂರು ಠಾಣೆ ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಕೆಲ ದಿನಗಳ ಹಿಂದೆ ಆರೋಪಿ ಫಯಾಜ್ ವಾಸವಾಗಿದ್ದ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರೂ ಮನೆ ಖಾಲಿ ಮಾಡಿರಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಮೊಹಮ್ಮದ್ ಬಲವಂತವಾಗಿ ಖಾಲಿ ಮಾಡಿಸಿ ಅವಮಾನ ಮಾಡಿದ್ದ. ಅಲ್ಲದೆ ಆಗಾಗ ಈತನಿಗೆ ಆರೋಪಿಯ ಸಹಚರರು ತೊಂದರೆ ಕೊಡುತ್ತಿದ್ದರಂತೆ.
ಇದರಿಂದ ಅಸಮಾಧಾನಗೊಂಡಿದ್ದ ಫಯಾಜ್, ಹಳೆ ದ್ವೇಷ ತೀರಿಸಿಕೊಳ್ಳಲು ಆಸ್ಗರ್ ಹಾಗೂ ಮುನ್ನಾವರ್ ನೊಂದಿಗೆ ಮಾತುಕತೆ ನಡೆಸಿದ್ದ. ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು ನಾಡಪಿಸ್ತೂಲ್, ಬಿಯರ್ ಬಾಟೆಲ್ಗಳನ್ನು ಗುಪ್ತವಾಗಿ ಸಂಗ್ರಹಿಸಿ ಮನೆಯಲ್ಲಿ ಫಯಾಜ್ ಬಚ್ಚಿಟ್ಟುಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂರ್ವ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನ ರಚಿಸಿ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ:ದೇಶದ್ರೋಹ ಕಾನೂನಿಗೆ ತಿದ್ದುಪಡಿ; ಸುಪ್ರೀಂ ಕೋರ್ಟ್ಗೆ ಹೊಸ ಅಫಿದವಿತ್ ಸಲ್ಲಿಸಿದ ಸರಕಾರ
ಈ ಸಂಬಂಧ ಪ್ರತಿಕ್ರಿಯಿಸಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಆರೋಪಿಗಳಿಗೆ ಸೇರಿದ್ದ ಮನೆಯನ್ನು ರೌಡಿಶೀಟರ್ ಮೊಹಮ್ಮದ್ ಫಯಾಜ್ ಖಾಲಿ ಮಾಡಿಸಿದ್ದ. ಇದರಿಂದ ಫಯಾಜ್ 10 ಲಕ್ಷ ರೂ. ಹಣ ಕಳೆದುಕೊಂಡಿದ್ದ. ಈ ಕಾರಣಕ್ಕೆ ಬಾಬು ಮೇಲೆ ಸೇಡಿಗೆ ಆರೋಪಿಗಳು ಯೋಜನೆ ರೂಪಿಸಿದ್ದರು. ಹಿಂದೂ ಕಾರ್ಯಕರ್ತರ ಕೊಲೆಗೆ ಸಂಚು ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ, ಆರೋಪಿಗಳ ದುಷ್ಕೃತ್ಯದ ಹಿಂದೆ ಯಾವುದೇ ರೀತಿಯ ಪ್ಲ್ಯಾನ್ ಇರಲಿಲ್ಲ. ಅಲ್ಲದೆ ಹಿಂದೂ ಕಾರ್ಯಕರ್ತರ ಹತ್ಯೆ ಅಥವಾ, ಗಲಭೆಯ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾರೆ.