ಹುಣಸೂರು: ನಗರಸಭಾ ಪೌರಕಾರ್ಮಿಕರ ಹಲವು ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ
Team Udayavani, Jul 1, 2022, 3:13 PM IST
ಹುಣಸೂರು: ನಗರಸಭಾ ಪೌರಕಾರ್ಮಿಕರು ಜುಲೈ1 ರಂದು ಕುಡಿಯುವ ನೀರು, ಸ್ವಚ್ಛತೆ ಸ್ಥಗಿತಗೊಳಸಿ, ವಾಹನ ಚಾಲಕರು ರಾಜ್ಯ ವ್ಯಾಪ್ತಿಯ ಮುಷ್ಕರ ಹಮ್ಮಿಕೊಂಡಿದ್ದು, ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಹುಣಸೂರು ನಗರ ಸಭೆ ಮುಂದೆ ಅನಿರ್ದಿಷ್ಟ ಅವಧಿ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸದಸ್ಯ ಕೆ. ಲಕ್ಷಣ್ ಮಾತನಾಡಿ, ರಾಜ್ಯದ ಎಲ್ಲಾ ನಗರಪಾಲಿಕೆ, ನಗರಸಭೆ. ಪುರಸಭೆ, ಪಟ್ಟಣ ಪಂಚಾಯಿತಿ, ಪೌರಕಾರ್ಮಿಕರ ಮಹಾ ಸಂಘ (ರಿ.) ಹಾಗೂ ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ (ರಿ.) ದ ಸಂಯುಕ್ತಾಶ್ರಯದಲ್ಲಿ ಹುಣಸೂರು ನಗರಸಭೆ ಕಚೇರಿ ಎದುರು ಮುಷ್ಕರ ನಡೆಸಿ ನಗರಸಭೆ, ನಗರಪಾಲಿಕೆ, ಪಟ್ಟಣ ಪಂಚಾಯಿತಿ, ಪೌರಕಾರ್ಮಿಕರ ಹೊರಗುತ್ತಿಗೆ ಕಸ ಸಾಗಿಸುವ ವಾಹನ ಚಾಲಕರು, ವಾಟರ್ ಮ್ಯಾನ್ಗಳು, ಡೇಟಾ ಆಪರೇಟರ್ಗಳು, ಕಸ ನಿರ್ವಹಣೆಯ ಸಹಾಯಕರು, ಒಳ ಚರಂಡಿ ಕಾರ್ಮಿಕರು, ಸ್ಯಾನಿಟರಿ ಸೂಪರ್ ವೈಸರ್ಗಳು, ಎಸ್.ಟಿ.ಪಿ. ಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ 2022 ಜುಲೈ1 ರಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವುದು, ಸ್ವಚ್ಛತೆ, ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಿ ನಗರಸಭೆ ಕಛೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಹುಣಸೂರು ನಗರಸಭೆಯಲ್ಲಿ ಸುಮಾರು 250 ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಬೇಡಿಕೆ ಈಡೇರುವ ವರೆಗೆ ಮುಷ್ಟರ ಮುಂದುವರೆಯಲಿದೆ. ಮುಖ್ಯಮಂತ್ರಿಗಳು ಈ ಕಾರ್ಮಿಕ ಕುಟುಂಬಗಳ ನೆರವಿಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳ ಮವಿಪತ್ರವನ್ನು ಶಾಸಕ ಎಚ್ ಪಿ ಮಂಜುನಾಥ್ ರವರಿಗೆ ಸಲ್ಲಿಸಿದರು.
ಬೇಡಿಕೆಗಳಿವು:
*ಪೌರಕಾರ್ಮಿಕರಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡಬೇಕು.
* ಕಸ ಸಾಗಿಸುವ ವಾಹನ ಚಾಲಕರು, ವಾಟರ್ಮೆನ್, ಡೇಟಾ ಆಪರೇಟರ್, ಯು.ಜಿ.ಡಿ, ಕಾರ್ಮಿಕರು, ಲೋಡರ್, ಕ್ಲೀನರ್ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ಪದ್ದತಿ ಜಾರಿಗೊಳಿಸಬೇಕು.
* ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಮಾಸಿಕ ರಜೆ (ಸಿ.ಎಲ್) ನೀಡಬೇಕು.
* ಪೌರಕಾರ್ಮಿಕ ದಿನಾಚರಣೆಯಲ್ಲಿ ಪೌರಕಾರ್ಮಿಕರಿಗೆ ನೀಡುವ ಬೋನಸ್ 75 ಸಾವಿರ ರೂ. ಗಳನ್ನು ನೇರ ಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುವುದು.
*ಚಾಲಕರಿಗೂ ಬೆಳಗಿನ ಉಪಹಾರ ನೀಡಬೇಕು.
* ಲೋಡರ್, ಕ್ಲೀನರ್, ವಾಹನ ಚಾಲಕರಿಗೂ ಹಾಗೂ ಯು.ಜಿ.ಡಿ ಕಾರ್ಮಿಕರಿಗೂ ವಿಮೆ ಮತ್ತು ಆರೋಗ್ಯ ತಪಾಸಣೆಯನ್ನು 3 ತಿಂಗಳಿಗೊಮ್ಮೆ ಮಾಡಿಸಬೇಕು.
*ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಗಳ ಶೇ2 ರಷ್ಟು ಮೀಸಲಾತಿ ನೀಡುವುದು.
*ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರ ಮಾದರಿಯಲ್ಲಿಯೇ ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿದ ಶಾಸಕ ಎಚ್.ಪಿ. ಮಂಜುನಾಥ್ ಭಾಗವಹಿಸಿ, ಸ್ಥಳದಲ್ಲಿಯೇ ದೂರವಾಣಿ ಮೂಲಕ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಡಾ ಅಜಯ್ ನಾಗಭೂಷಣ್ ರವರನ್ನು ಸಂಪರ್ಕಿಸಿ ಮುಷ್ಕರ ಹಾಗೂ ಬೇಡಿಕೆಗಳ ಕುರಿತಂತೆ ಮಾಹಿತಿ ನೀಡಿ, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಆಯೋಜಿಸುವಂತೆ ಸೂಚಿಸಿದಂತೆ ಜುಲೈ 4 ಸೋಮವಾರ ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಹುಣಸೂರು ಪೌರಕಾರ್ಮಿಕರ ಮುಖಂಡರೊಂದಿಗೆ ನಗರದ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕ ಎಚ್. ಮಂಜುನಾಥರೊಂದಿಗೆ ನಗರಸಭಾ ಅಧ್ಯಕ್ಷರಾದ ಸೆಮಿನ ಪರ್ವೀನ್ ಉಪಾಧ್ಯಕ್ಷ ದೇವ ನಾಯಕ, ಡೇಟಾ ಎಂಟ್ರಿ ಸಿಬ್ಬಂದಿಗಳಾದ ಸುಧೀರ್, ಪೌರಕಾರ್ಮಿಕ ಮುಖಂಡರಾದ ಮುರುಗೇಶ್, ಲಕ್ಷ್ಮಣ್, ಕಣ್ಣಯ್ಯ, ಪೆರುಮಾಳ್, ದಿನೇಶ್, ಮಾದ, ರಮೇಶ್, ಸೇರಿದಂತೆ ನಗರಸಭಾ ಸದಸ್ಯರು ಹಾಗೂ ದಲಿತ ಮುಖಂಡರು ಇದ್ದರು.