ಬನ್ನಿಕುಪ್ಪೆ ಸುತ್ತಮುತ್ತಲ 6 ಕೆರೆ ಭರ್ತಿ; ಅಪಾರ ಪ್ರಮಾಣದ ಬೆಳೆ ಹಾನಿ
ಪ್ರವಾಹದಂತೆ ಹರಿಯುತ್ತಿರುವ ಕೋಡಿ ನೀರು
Team Udayavani, Aug 5, 2022, 11:41 AM IST
ಹುಣಸೂರು: ತಾಲೂಕಿನ ಕಸಬಾ ಹೋಬಳಿಯ ಬನ್ನಿಕುಪ್ಪೆ ಭಾಗದ ಆರು ಕೆರೆಗಳು ಕೋಡಿ ಬಿದ್ದು, ಬನ್ನಮ್ಮನ ಕೆರೆಗೆ ಅಪಾರ ನೀರು ಹರಿದ ಪರಿಣಾಮ ಕೆರೆ ಹಾಗೂ ಸುತ್ತಮುತ್ತಲ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಹತ್ತು ಎಕ್ರೆಗೂ ಹೆಚ್ಚು ಪ್ರದೇಶದ ಬೆಳೆ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಬನ್ನಿಕುಪ್ಪೆ ಸುತ್ತ ಮುತ್ತಲಿನ ಮೂಡಲ ಕೊಪ್ಪಲು, ಜಡಗನ ಕೊಪ್ಪಲು, ಮರಳಯ್ಯನ ಕೊಪ್ಪಲು, ಮಧುಗಿರಿ ಕೊಪ್ಪಲು, ಬನ್ನಿಕುಪ್ಪೆಗಳ ಶೆಟ್ಟರಕಟ್ಟೆ, ಜೋಗಯ್ಯನಕಟ್ಟೆ, ಚೌಡಮ್ಮನಕಟ್ಟೆ,ಹೊಡಕೆ ಕಟ್ಟೆ, ಜಡಗನಕೊಪ್ಪಲು ಹಾಗೂ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಅಪಾರ ಪ್ರಮಾಣದ ನೀರು ಬನ್ನಿಕುಪ್ಪೆಯ ಬನ್ನಂತಮ್ಮ ಕೆರೆಗೆ ಒಮ್ಮೆಲೆ ಹರಿದು ಬಂದಿದ್ದರಿಂದ ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ನಾಟಿ ಮಾಡಿದ್ದ ಭತ್ತದ ಗದ್ದೆ, ಅವರೆ, ಹತ್ತಿ ಬೆಳೆ ಕೊಚ್ಚಿ ಹೋಗಿದೆ. ತೆಂಗು, ಅಡಿಕೆ ತೋಟದಲ್ಲಿ ಪ್ರವಾಹದ ನೀರು ನಿಂತಿದೆ. ಇದೀಗ ಮರದೂರು ದೊಡ್ಡಕೆರೆಗೆ ನೀರು ಸೇರುತ್ತಿದೆ. ಭತ್ತದ ಗದ್ದೆಗಳು ಜಲಾವೃತವಾಗಿದೆ.
ಮನೆಗಳಿಗೆ ನುಗ್ಗಿದ ನೀರು: ಕೆರೆ ಕೋಡಿ ನೀರು ಮಹದೇವಪ್ಪ, ಶಾರದಮ್ಮ ಸೇರಿದಂತೆ ಬನ್ನಿಕುಪ್ಪೆ ಗೇಟ್ನ ನಿಂಗರಾಜು, ಕೂಸಪ್ಪ, ಎಪಿಎಂಸಿ ಮಾರುಕಟ್ಟೆ, ಹೆದ್ದಾರಿ ಪಕ್ಕದ ಕಂಠಿಮಹದೇವಪ್ಪ ಮತ್ತಿತರರ ಮನೆಗಳು ಹಾಗೂ ಶಾಲಾ ಆವರಣಕ್ಕೂ ನೀರು ನುಗ್ಗಿದೆ. ಸ್ಥಳಕ್ಕೆ ತಹಸೀಲ್ದಾರ್ ಡಾ.ಅಶೋಕ್, ತಾ.ಪಂ.ಇ.ಓ.ಬಿ.ಕೆ ಮನು ಪಿಡಿಓ ರಾಘವೇಂದ್ರಪ್ರಸನ್ನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.