ರೌಡಿ ಶೀಟರ್ ಬಂಧನಕ್ಕೆ ಆಗ್ರಹ
Team Udayavani, Sep 25, 2022, 4:48 PM IST
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಬೃಂದಾ ಇಂಡಿಯನ್ ಗ್ಯಾಸ್ ಏಜೆನ್ಸಿ ಗ್ರಾಮೀಣ ವಿತರಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ರೌಡಿಶೀಟರ್ ಪರಮಣ್ಣ ದೊಡ್ಮನಿ ಬಂಧನಕ್ಕೆ ಆಗ್ರಹಿಸಿ ಮಾದಿಗ ಯುವ ಸೇನೆ ಕಾರ್ಯಕರ್ತರು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ ಮಾತನಾಡಿ, ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಬೃಂದಾ ಇಂಡಿಯನ್ ಗ್ಯಾಸ್ ಏಜೆನ್ಸಿ ಗ್ರಾಮೀಣ ವಿತರಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ರೌಡಿಶೀಟರ್ ಪರಮಣ್ಣ ದೊಡ್ಮನಿ ಮೇಲೆ ಹಲವು ಪ್ರಕರಣಗಳಿದ್ದರೂ ಅವರನ್ನು ಬಂಧಿಸದೇ ಮಾನಸಿಕ ಹಿಂಸೆ ನೀಡಲು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿ ಸಿದವರಿಗೆ ಪೊಲೀಸರು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯುವ ಮುಖಂಡ ಬಸವರಾಜ ಹಗರಟಗಿ ಮಾತನಾಡಿ, ಮಹಿಳೆ ಮೇಲೆ ಮಾನಭಂಗ ಮಾಡಲು ಯತ್ನಿಸಿದ ರೌಡಿಶೀಟರ್ ಪರಮಣ್ಣ ದೊಡ್ಡಮನಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಾದರು ಪೊಲೀಸರು ಕಾನೂನು ಕ್ರಮ ಕೈಗೊಳ್ಳದೇ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು, ನಿರಪರಾಧಿ ಮಹಿಳೆ ಭಾರತಿ ಮೇಲೆ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರ ನಡೆ ಖಂಡನೀಯ ಎಂದು ಆರೋಪಿಸಿದರು.
ಬಸವರಾಜ ಕೊಡೆಕಲ್, ಪರಶುರಾಮ ಪರಸನಳ್ಳಿ, ಕಾಶಪ್ಪ ಹೆಗ್ಗಣಗೇರಾ, ಮಲ್ಲಿಕಾರ್ಜುನ ಬಬಲಾದ, ಸಂಗಮೇಶ ಮಾಸ್ತರ, ಸಿದ್ದು ಮೇಲಿನಮನಿ, ರಾಜು, ಮಲ್ಲು ಕೆಂಭಾವಿ, ಭೀಮಣ್ಣ ಕಕ್ಕೇರಾ, ಸಿದ್ದು ಯಡ್ಡೇಳ್ಳಿ, ಮಂಜು ನಾರಾಯಣಪುರ, ಬಸವರಾಜ ಸೂಗುರ, ಹನುಮಂತ ಬೇಟೆಗಾರ ಇತರರಿದ್ದರು.