ಗಾಂಜಾದ ಮತ್ತಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆಗೈದ ಯುವಕರು
Team Udayavani, Oct 3, 2022, 8:53 AM IST
ದೆಹಲಿ : ಗಾಂಜಾ ಸೇವಿಸಿದ ಅಮಲಿನಲ್ಲಿ ಇಬ್ಬರು ಹುಡುಗರು 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ.
ಲೋಧಿ ರಸ್ತೆ ಬಳಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ರಕ್ತದ ಮಡುವಿನಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ, ರಾತ್ರಿ ಊಟದ ನಂತರ ತಮ್ಮ ಮಗ ನಾಪತ್ತೆಯಾಗಿದ್ದಾನೆ. ಈ ವೇಳೆ ಸುತ್ತಮುತ್ತ ಕೊಳೆಗೇರಿಗಳಲ್ಲಿ ಹುಡುಕಾಟ ನಡೆಸಿದಾಗ ನಿರ್ಮಾಣ ಹಂತದ ಕಟ್ಟಡದ ಬಳಿ ನೆಲದ ಮೇಲೆ ರಕ್ತದ ಮಡುವಿನಲ್ಲಿ ಮಗ ಬಿದ್ದಿದ್ದ ಎಂದು ಬಾಲಕನ ತಂದೆ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಅಲ್ಲೇ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇಬ್ಬರು ಬಾಲಕರು ಗಾಂಜಾದ ಮತ್ತಿನಲ್ಲಿದ್ದರು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಹತ್ಯೆಗೆ ಬಳಸಿದ ಚಾಕು ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಲ್ಪೆ ಬೀಚ್: ಗರಿಗೆದರಿದ ಚಟುವಟಿಕೆ : ಇನ್ನೂ ಆರಂಭಗೊಳ್ಳದ ದ್ವೀಪಯಾನ