ಟೀಂ ಇಂಡಿಯಾಗೆ ಕರುಣೆ ತೋರಿದ ವರುಣ: ಅಂತಿಮ ಪಂದ್ಯವೂ ರದ್ದು; ಕಿವೀಸ್ ಗೆ ಸರಣಿ
Team Udayavani, Nov 30, 2022, 3:01 PM IST
ಕ್ರೈಸ್ಟ್ ಚರ್ಚ್: ಮಳೆಯಿಂದಲೇ ಆರಂಭವಾಗಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೀಮಿತ ಓವರ್ ಸರಣಿಯು ಮಳೆಯೊಂದಿಗೆ ಅಂತ್ಯವಾಗಿದೆ. ಇಂದಿನ ಕ್ರಸ್ಟ್ ಚರ್ಚ್ ನಲ್ಲಿ ಆರಂಭವಾಗಿದ್ದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವೂ ಮಳೆಯಿಂದಾಗಿ ರದ್ದಾಗಿದ್ದು, ಮತ್ತೊಂದು ಪಂದ್ಯ ಸೋಲುವ ಅವಮಾನದಿಂದ ಶಿಖರ್ ಧವನ್ ಪಡೆ ಪಾರಾಗಿದೆ.
ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದ ನ್ಯೂಜಿಲ್ಯಾಂಡ್ ತಂಡವು 1-0 ಅಂತರದಿಂದ ಸರಣಿ ಜಯಿಸಿದೆ. ಎರಡನೇ ಪಂದ್ಯವೂ ಮಳೆಯ ಕಾರಣದಿಂದ ರದ್ದಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 47.3 ಓವರ್ ಗಳಲ್ಲಿ 219 ರನ್ ಗಳಿಸಿದರೆ, ಕಿವೀಸ್ ತಂಡವು 18 ಓವರ್ ಗಳಲ್ಲಿ ಒಂದು ವಿಕೆಟ್ ಗೆ 104 ರನ್ ಗಳಿಸಿದ್ದಾಗ ಮಳೆ ಬಂದು ಪಂದ್ಯ ರದ್ದಾಯಿತು.
ಕ್ರೈಸ್ಟ್ ಚರ್ಚ್ ನ ಹೇಗ್ಲೆ ಓವಲ್ ನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿದರು. ಭಾರತದ ಆರಂಭಿಕರಾದ ನಾಯಕ ಶಿಖರ್ ಧವನ್ ಮತ್ತು ಗಿಲ್ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರು. ಆದರೆ 39 ರನ್ ಗೆ ಗಿಲ್ ರೂಪದಲ್ಲಿ ಮೊದಲ ವಿಕೆಟ್ ಬಿತ್ತು.
ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಸೂಕ್ತ ವೈದ್ಯರು, ಅಂಬ್ಯುಲೆನ್ಸ್ ಇಲ್ಲದ ಆರೋಪ; ಪ್ರತಿಭಟನೆ
ಗಿಲ್ 13 ರನ್, ಧವನ್ 28 ರನ್ ಗಳಿಸಿದರು. ಪಂತ್ (10 ರನ್) ಮತ್ತು ಸೂರ್ಯ ಕುಮಾರ್ (6 ರನ್) ಮತ್ತೆ ವಿಫಲರಾದರು. ಆದರೆ ಮತ್ತೆ ತಂಡವನ್ನು ಆಧರಿಸಿದ ಶ್ರೇಯಸ್ ಅಯ್ಯರ್ 49 ರನ್, ವಾಷಿಂಗ್ಟನ್ 51 ರನ್ ಗಳಿಸಿ ತಂಡದ ಸ್ಕೋರ್ ಇನ್ನೂರರ ಗಡಿ ದಾಟುವಂತೆ ನೋಡಿಕೊಂಡರು.
ಸುಲಭ ಗುರಿ ಬೆನ್ನತ್ತಿದ ಕಿವೀಸ್ ಉತ್ತಮ ಆರಂಭ ಪಡೆಯಿತು. ಫಿನ್ ಅಲೆನ್ ಮತ್ತು ಡೆವೋನ್ ಕಾನ್ವೆ ಮೊದಲ ವಿಕೆಟ್ ಗೆ 97 ರನ್ ಮಾಡಿದರು. ಆದರೆ 18 ಓವರ್ ಆಗಿದ್ದಾಗ ಒಂದು 104 ರನ್ ಆಗಿದ್ದಾಗ ಮಳೆ ಕಾಡಿತು. ಮಳೆ ನಿಲ್ಲದ ಕಾರಣ ಪಂದ್ಯ ರದ್ದು ಮಾಡಬೇಕಾಯಿತು.
ಡಕ್ ವರ್ತ್ ನಿಯಮ ಅಳವಡಿಸಲು ಕನಿಷ್ಠ 20 ಓವರ್ ಗಳ ಆಟ ನಡೆದಿರಬೇಕು. ಆದರೆ ಕಿವೀಸ್ ಪಾಳಿಯಲ್ಲಿ 18 ಓವರ್ ಮಾತ್ರ ಮುಗಿದಿತ್ತು. ಒಂದು ವೇಳೆ 20 ಓವರ್ ಆಟ ಮುಗಿದಿದ್ದರೆ ಕಿವೀಸ್ ಸುಲಭ ಜಯ ಸಾಧಿಸುತ್ತಿತ್ತು.