ವೇಣೂರು: ಓಮ್ನಿಯಲ್ಲಿ ಅಕ್ರಮ ಗೋ ಸಾಗಾಟ: ಐವರ ಬಂಧನ
ಬೆಂಗಾವಲಾಗಿ ಹೋಗುತ್ತಿದ್ದ ಆರೋಪಿಗಳು ಪೊಲೀಸ್ ವಶಕ್ಕೆ
Team Udayavani, Jan 4, 2023, 1:33 PM IST
ವೇಣೂರು: ನಾರಾವಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬಡಗಕಾರಂದೂರು ಗ್ರಾಮದ ನಡಾಯಿ ಬಳಿ ಓಮ್ನಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಕರಾಯ ಗ್ರಾಮದ ತೌಸೀಫ್, ಇರ್ಫಾನ್, ಅನಾಸ್, ಪುತ್ತಿಲ ಗ್ರಾಮದ ಉಸ್ಮಾನ್ ಹಾಗೂ ಪುತ್ತೂರಿನ ಇಕ್ಬಾಲ್ ಆರೋಪಿಗಳು.
ಜ.3ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರರನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಗೋಸಾಟಕ್ಕೆ ಬೆಂಗವಲಾಗಿ ಹೋಗುತ್ತಿರುವುದು ಗೊತ್ತಾಗಿದೆ.
ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಅದೇ ಹೆದ್ದಾರಿಯಲ್ಲಿ ಬಂದ ಓಮ್ನಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಓಮ್ನಿ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.