ಮಧುಗಿರಿ: ಕರ್ತವ್ಯದಲ್ಲಿದ್ದಾಗಲೇ ಹೃದಯಘಾತದಿಂದ ಶುಶ್ರೂಷಕಿ ಮೃತ್ಯು
Team Udayavani, Feb 3, 2023, 5:39 PM IST
ಮಧುಗಿರಿ: ಕರ್ತವ್ಯದಲ್ಲಿದ್ದಾಗಲೇ ಶುಶ್ರೂಕಿ ಒಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಹಿರಿಯ ಶುಶ್ರೂಷಕಿ ಭಾರತಿ (59) ಮೃತ ದುರ್ದೈವಿ, ಪಾವಗಡ ಮೂಲದ ಅವರು ಗುರುವಾರ ರಾತ್ರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು ಪ್ರಥಮ ಚಿಕಿತ್ಸೆ ನೀಡಿ ತುಮಕೂರಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ. ಇವರು ಕಳೆದ 24 ವರ್ಷಗಳಿಂದ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅಧಿಕಾರಿಗಳು ಹಾಗೂ ಸಿಬಂದಿಗಳ ಅಚ್ಚುಮೆಚ್ಚಿನ ಶುಶ್ರೂಷಕಿ ಆಗಿದ್ದರು.
ಡಾ.ರತ್ನಾವತಿ ಮೇಲೆಯೇ ಪ್ರಾಣಬಿಟ್ಟ ಭಾರತಿ
ಎದೆ ನೋವು ಕಾಣಿಸಿಕೊಂಡಾಗ ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯ ಶ್ರೀ ರಾಮಯ್ಯ ಪ್ರಥಮ ಚಿಕಿತ್ಸೆ ನೀಡಿದ್ದರು. ಆದರೂ ರಜೆಯಲ್ಲಿದ್ದ ಡಾ.ರತ್ನಾವತಿಯವರು ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿ ಬಂದು ತುರ್ತು ವಾಹನದ ಮೂಲಕ ತುಮಕೂರಿಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯ ವೈದ್ಯೆ ಡಾ. ರತ್ನಾವತಿಯವರ ತೊಡೆಯ ಮೇಲೆ ಕೊನೆಯುಸಿರೆಳೆದರು. ಶುಶ್ರೂಷಕಿ ಭಾರತಿಯವರ ಸಾವಿಗೆ ಡಾ. ರತ್ನಾವತಿ ಆದಿಯಾಗಿ ಇಡೀ ಆಸ್ಪತ್ರೆಯ ಸಿಬಂದಿಗಳು ಕಂಬನಿ ಮಿಡಿದಿದ್ದಾರೆ. ಭಾರತಿಯವರ ಅಂತ್ಯಕ್ರಿಯೆ ಪಾವಗಡದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಶುಕ್ರವಾರ ನೆರವೇರಿತು. ಮದುವೆಯಾಗದ ಇವರು ತಂಗಿಯ ಮಕ್ಕಳನ್ನ ದತ್ತು ಪಡೆದು ಸಾಕುತ್ತಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.