ಹೊಸಕೋಟೆ: ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ಹಲ್ಲೆ; ಬಿಜೆಪಿ ಕಾರ್ಯಕರ್ತನ ಕೊಲೆ
Team Udayavani, May 15, 2023, 6:00 AM IST
ಹೊಸಕೋಟೆ: ವಿಜಯೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿ ವ್ಯಕ್ತಿಯೊಬ್ಬ(ಬಿಜೆಪಿ ಕಾರ್ಯಕರ್ತ) ಕೊಲೆಯಾಗಿದ್ದು, ಆತನ ಪತ್ನಿ, ಪುತ್ರನಿಗೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಹೊಸಕೋಟೆಯ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಆರೋಪಿಗಳ ಶೀಘ್ರ ಬಂಧನಕ್ಕೆ ಭಾನುವಾರ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಮೃತ ವ್ಯಕ್ತಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೃಷ್ಣಪ್ಪನ ಮನೆ ಮುಂದೆ ಪಟಾಕಿ ಸಿಡಿಸಿದ್ದಾರೆ. ಈ ಕುರಿತು ಪಟಾಕಿ ಸಿಡಿಸಬೇಡಿ ಎಂದು ಕೃಷ್ಣಪ್ಪ ಹೇಳಿದ ಹಿನ್ನೆಲೆಯಲ್ಲಿ ಜಗಳ ನಡೆದು ಕಾಂಗ್ರೆಸ್ ಕಾರ್ಯಕರ್ತರು ಕೃಷ್ಣಪ್ಪ ಹಾಗೂ ಕುಟುಂಬದವರ ಮೇಲೆ ಅಯುಧದಿಂದ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲೆ ಕೃಷ್ಣಪ್ಪ (59) ಅಸುನೀಗಿದ್ದಾರೆ.
ಶರತ್ಬಚ್ಚೇಗೌಡ ಗೆಲುವು ಸಾಧಿಸಿದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೃಷ್ಣಪ್ಪ ಮನೆ ಮುಂದೆ ಪಟಾಕಿ ಸಿಡಿಸಿ ಮನೆಗೂ ಸಿಡಿದಿದೆ. ಈ ವೇಳೆ ಕೃಷ್ಣಪ್ಪ ಪಟಾಟಿ ಜೋರಾಗಿ ಸಿಡಿಸಬೇಡಿ ಎಂದಾಗ ಕೃಷ್ಣಪ್ಪ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತಿಗೆ ಮಾತು ಬೆಳೆದು ಗುದ್ದಲಿಯಿಂದ ಎದೆ ಹಾಗೂ ಭುಜಕ್ಕೆ ಬಲವಾಗಿ ಹೊಡೆದು ಪರಿಣಾಮ ಕೃಷ್ಣಪ್ಪ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಗ ಬಾಬು ಹಾಗೂ ಹೆಂಡತಿಗೆ ಎದೆ ಹಾಗೂ ಬುಜಕ್ಕೆ ಬಲವಾಗಿ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಆದಿ, ಗಣೇಶ್, ಹರೀಶ್, ಚನ್ನಕೇಶವ ಮೇಲೆ ದೂರು ಸಲ್ಲಿಸಿದ್ದರೂ ಆರೋಪಿಗಳನ್ನು ಬಂಧಿಸುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಸತೀಶ್ ಹಾಗೂ ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್ ನೇತೃತ್ವದಲ್ಲಿ ಕೊಲೆ ಮಾಡಿ ಪರಾರಿಯಾಗಿರುವ ಮೂವರನ್ನು ಬಂಧಿಸುವಂತೆ ನಂದಗುಡಿ ಗ್ರಾಮದ ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಪೊಲೀಸರು ಶೀಘ್ರವಾಗಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಠಾಣೆ ಮುಂದೆ ಕೃಷ್ಣಪ್ಪ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಸಿಪಿಐ ದಿವಾಕರ್ ಮಾತನಾಡಿ, ಈ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಆದಿಯನ್ನು ಬಂಧಿಸಿದ್ದು ಉಳಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಧರಣಿ ನಿರತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ಹಲ್ಲೆ
ನಂದಗುಡಿ ಹೋಬಳಿ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಪಟಾಕಿ ಮನೆಯ ಮುಂದೆ ಹಚ್ಚಬೇಡಿ ಎಂದ ಕೃಷ್ಣಪ್ಪ ಎಂಬುವರನ್ನು ಗುದ್ದಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಅಳಿಯ ಶ್ರೀನಿವಾಸ್ ತಿಳಿಸಿದ್ದಾರೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ ಸರ್ಕಾರಿ ಆಸ್ಪತ್ರೆ ಶವಗಾರ ಮತ್ತು ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃಷ್ಣಪ್ಪನ ಮಗ ಬಾಬುನನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಪರಿವಾರಕ್ಕೆ ಸಾಂತ್ವನ ಹೇಳಿದರು.
ನಂತರ ಮಾತನಾಡಿ ಚುನಾವಣೆ ಫಲಿತಾಂಶ ಹೊರಬಿದ್ದು ಕೆಲವೆ ಗಂಟೆಗಳಲ್ಲಿ ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ಗುದ್ದಲಿಯಿಂದ ಕೃಷ್ಣಪ್ಪನನ್ನು ಹೊಡೆದಿದ್ದಾರೆ. ಮಗ ಬಾಬು ಎಂಬುವರನ್ನು ಹೊಡೆದಿದ್ದು 35 ಹೊಲಿಗೆ ಹಾಕಲಾಗಿದೆ ಎಂದು ಹೇಳಿದರು. ಸುಮಾರು ಗ್ರಾಮಗಳಲ್ಲಿ ಮನೆಗಳ ಮುಂದೆ ಪಟಾಕಿ ಸಿಡಿಸಿ ಗಲಾಟೆಗಳು ನಡೆದಿವೆ ಕಾಮರಸನಹಳ್ಳಿ, ಕುರುಬರಹಳ್ಳಿ, ಕೋಡಿಹಳ್ಳಿ, ದೆವಶೆಟ್ಟಹಳ್ಳಿ, ಶಿವನಾಪುರ, ಯಳಚಹಳ್ಳಿ ಇನ್ನು ಹಲಾವಾರು ಗ್ರಾಮಗಳಲ್ಲಿ ಗಲಾಟೆ ಮಾಡಿದ್ದಾರೆ.
ಹಿಂದಿನ ಚಾಳಿಯನ್ನು ಗೆದ್ದಿರುವವರು ಮುಂದುವರಿಸಿದ್ದಾರೆ. ತಂದೆ ಮಗನನ್ನು ಕೊಲೆ ಮತ್ತು ಮರಣಾಂತಿಕ ಹಲ್ಲೆ ಮಾಡಿದ್ದು ಮಗನ ಸ್ಥಿತಿ ಗಂಬೀರವಾಗಿದೆ. ಹಿಂದೆ ಎಂಟಿಬಿ ನಾಗರಾಜಣ್ಣನವರ ಅಧಿಕಾರದಲ್ಲಿದ್ದಾಗ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದ ದಿನ ರಾತ್ರಿಯೇ ಈ ಕೃತ್ಯ ನಡೆದಿದೆ. ಪೊಲೀಸ್ ಇಲಾಖೆ ತಪ್ಪಿಸ್ಥಸ್ಥರನ್ನು ಈ ಕೂಡಲೇ ಬಂದಿಸಬೇಕು ಎಂದು ಹೇಳಿದರು. ನಂದಗುಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೂಬ್ಬ ವ್ಯಕ್ತಿ ಮೇಲೆ ಹಲ್ಲೆ
ಕುರುಬರಹಳ್ಳಿ ಗ್ರಾಮದಲ್ಲಿ ಜಮೀನಿಗೆ ಹೋಗಿ ಮರಳಿ ಬರುತ್ತಿದ್ದವನ ಮೇಲೆ ಗ್ರಾಮದ ಕೆಲವರು ಕಾಂಗ್ರೆಸ್ಸಿಗೆ ಓಟು ಹಾಕಿದ್ದೀಯಾ ಎಂದು ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ನವೀನ್ ಕುಮಾರ್ ಎಂಬುವರು ಅದೇ ಗ್ರಾಮದ
ಮನಾಲ್ಕು ಜನರ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಕಾಂಗ್ರೆಸ್ಸಿಗೆ ಓಟು ಹಾಕಿದ್ದೀಯಾ ಎಂಬ ವಿಷಯ ತೆಗದು ಹಲ್ಲೆ ಮಾಡಿದದಾರೆ ಇವರು ಕೊಲೆ ಬೆದರಿಕೆ ಹಾಕಿದ್ದು ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.