ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ-ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅವ್ಯವಹಾರ ತನಿಖೆಗೆ ಆದೇಶ
Team Udayavani, Jan 4, 2024, 11:47 PM IST
ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್ ಅವರು ಅವ್ಯಹಾರ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಾಧ್ಯಕ್ಷ ಷಡಕ್ಷರಿ ಆದೇಶ ನೀಡಿದ್ದಾರೆ.
ಸಂಘಕ್ಕೆ ಸಂಬಂಧಪಟ್ಟ ಮೂಲ ದಾಖಲೆಗಳು ಹಾಗೂ ನಡಾವಳಿ ಪುಸ್ತಕ ಹಸ್ತಾಂತರ ಮಾಡದಿರುವ ಬಗ್ಗೆ ಹಾಗೂ ಅವರ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಅವ್ಯವಹಾರ ಹಾಗೂ ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿ ಸಂಘಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು, ಲೆಕ್ಕಪರಿಶೋಧನೆ ಕೈಗೊಳ್ಳದೆ ಇರುವುದು, ಸದಸ್ಯತ್ವ ಶುಲ್ಕ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ದುರುಪಯೋಗಪಡಿಸಿದ್ದಾರೆ ಎನ್ನುವ ಆರೋಪ ಹೊರಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ.ಬಳ್ಳಾರಿ ಹಾಗೂ ರಾಜ್ಯ ಕಾರ್ಯದರ್ಶಿ ಡಾ| ನೆಲ್ಕುದ್ರಿ ಸದಾನಂದಪ್ಪ ಅವರನ್ನು ತನಿಖಾಧಿಕಾರಿಗಳನ್ನಾಗಿ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ನೇಮಿಸಿದ್ದಾರೆ.
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಂತಿಮ ಹಂತದಲ್ಲಿದ್ದು, ಸಂಘಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಹಾಗೂ ಮೂಲ ನಡಾವಳಿ ಪುಸ್ತಕಗಳನ್ನು, ಪ್ರಸ್ತುತ ಅಧ್ಯಕ್ಷರಿಗೆ ಹಾಜರುಪಡಿಸುವಂತೆ ತನಿಖಾ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸದರಿ ಪುಸ್ತಕವನ್ನು ಈ ವರೆಗೆ ಸಂಘಕ್ಕೆ ತನಿಖೆಗಾಗಿ, ಪ್ರಕಾಶ್ ನಾಯಕ್ ಸಲ್ಲಿಸದಿರುವುದರಿಂದ ನಿಯಮ ಬದ್ಧವಾಗಿ ಸಂಘದ ಮಹಾಸಭೆ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ದಕ್ಷಿಣ ಕನ್ನಡ ಕರ್ನಾಟಕ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.