ನೀರಿದ್ದರೂ ಬಳಸುವವರು ಯಾರು ಇಲ್ಲ !
Team Udayavani, Mar 19, 2017, 2:52 PM IST
ಪುತ್ತೂರು: ತಾಲೂಕಿನಲ್ಲಿ ಕೆರೆ ಇದೆಯೇ ಅಂದರೆ ತೋರಿಸಲಡ್ಡಿಯಿಲ್ಲ. ಸಂಖ್ಯೆಯಲ್ಲಿ ಗೊಂದಲವಿದೆಯಷ್ಟೇ. ನೀರಿನ ಹಾಹಾಕಾರ ಶುರುವಾಗಿದ್ದರೂ ಕೆರೆ ನೀರು ಬಳಕೆಯತ್ತ ಆಡಳಿತ ವರ್ಗ ಮನಸ್ಸು ಮಾಡುತ್ತಿಲ್ಲ. ಕೈಯಲ್ಲಿ ತುತ್ತಿದ್ದರೂ, ಹತ್ತಿರದ ತಟ್ಟೆಗೆ ಕಣ್ಣು ಹಾಸುವ ಕಥೆ.
ತಾಲೂಕಿನಲ್ಲಿರುವ ಕೆರೆಗಳ ಸಂಖ್ಯೆ 33. ಇದು ಜಿ. ಪಂ. ಅಂಕಿ-ಅಂಶ. ಕಂದಾಯ ಇಲಾಖೆಯ ಅಂಕಿ-ಅಂಶದಲ್ಲಿ ಸರಕಾರಿ ಕೆರೆಗಳ ಸಂಖ್ಯೆ 17. ಇವುಗಳ ನೀರು ಬಳಕೆ ಯಾಗುತ್ತಿಲ್ಲ. ಶೇ. 90ರಷ್ಟು ದೇವಾಲಯಗಳಲ್ಲಿ ಕೆರೆಗ ಳಿವೆ. ಇನ್ನೂ ಖಾಸಗಿ ಕೃಷಿ ಜಮೀನಿನಲ್ಲೂ ಕೆರೆಗಳು ಇವೆ. ಆದರೆ ಮಳೆಗಾಲದಲ್ಲಿ ನೀರು ತುಂಬಿ ಕೊಂಡಿರುವ ಕೆರೆ, ಬೇಸಗೆ ಕಾಲದಲ್ಲಿ ಒಣಗುತ್ತದೆ. ಕಾರಣ ವರ್ಷಂಪ್ರತಿ ತುಂಬುವ ಹೂಳು. ಸರಕಾರಿ ಕೆರೆ ಅಭಿವೃದ್ಧಿಗೆ ಅನುದಾನ ಲಭ್ಯವಾದರೂ ಬಳಕೆ ಯಾದದ್ದು ಕಡಿಮೆ. ಹಾಗಾಗಿ ನಗರದಲ್ಲೇ ಹತ್ತಾರು ಕೆರೆ ಇದ್ದರೂ, ಕಷ್ಟ ಕಾಲದಲ್ಲಿ ಬಳಕೆಗೆ ಸಿಗದಂತಾಗಿದೆ.
ಕೊಳವೆಬಾವಿ ಆಪತ್ತು !
ಒಂದೆಡೆ ಕೊಳವೆಬಾವಿಯಿಂದ ಅಂತರ್ಜಲ ಕುಸಿತ ಕಂಡಿದೆ. ಅದಕ್ಕೆ ಈಗಿನ ಅಂಕಿ-ಅಂಶವೇ ಸಾಕ್ಷಿ. ಇನ್ನೊಂದೆಡೆ ಕೊಳವೆ ಬಾವಿ ತೆಗೆದ ಕೃಷಿ ಭೂಮಿಯ ಕೆರೆಗಳಲ್ಲಿ ಮರು ವರ್ಷ ನೀರೇ ಇಲ್ಲ. ಕೊಳವೆಬಾವಿ ಇದೆಯಲ್ಲ ಎಂದು ಕೆರೆ ಮುಚ್ಚಿದ ಪ್ರಸಂಗಗಳಿವೆ. ಹೀಗಾಗಿ ಅಡಿಕೆ ತೋಟದಲ್ಲಿ ಕೆರೆ ಅನ್ನುವುದು ಇತಿಹಾಸದ ಪುಟಕ್ಕೆ ಸೇರಿದರೆ, ಸಾರ್ವಜನಿಕ ಸ್ಥಳದಲ್ಲಿನ ಕೆರೆಗಳನ್ನು ಕೇಳುವವರೇ ಇಲ್ಲ.
ಅನುದಾನದ ಕಥೆ
ಯಡಿಯೂರಪ್ಪ ಸರಕಾರವಿದ್ದಾಗ ಕೆರೆ ಅಭಿವೃದ್ಧಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಕೋ.ರೂ. ಅನುದಾನ ಬಿಡುಗಡೆಗೊಂಡಿತ್ತು. ತಾಲೂಕಿನ 17 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಹಣ ವಿಂಗಡಿ ಸಲಾಗಿತ್ತು. ಅಭಿವೃದ್ಧಿ ಶೇ. 10ರಷ್ಟೂ ಆಗಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಈ ಕೋಟಿ ಹಣ, ಕೆರೆ ಹೂಳು ತೆಗೆಯುವುದು, ಬದಿಗಳಲ್ಲಿ ತಡೆಗೋಡೆ, ಕಾಲುವೆಗಳ ದುರಸ್ತಿ ಇತ್ಯಾದಿ ಈ ಕೋ. ಲೆಕ್ಕದಲ್ಲಿ ಸೇರಿ ಕೊಂಡಿತ್ತು. ಬನ್ನೂರು ಗ್ರಾಮದ ಆಲುಂಬುಡ ಕೆರೆ, ಉಪ್ಪಿನಂಗಡಿಯ ಮಠ, ಆರ್ಯಾಪು ಗ್ರಾಮದ ಸಂಪ್ಯ ಕೆರೆ, ಚಿಕ್ಕಮುಟ್ನೂರು ಗ್ರಾಮದ ಕೆರೆ ಹೂಳೆತ್ತು ವುದು, ಕಾಂಕ್ರೀಟ್ ಗೋಡೆ ರಚನೆ, ಬಲಾ°ಡು ಗ್ರಾಮದ ಮುದಲಾಜೆ, ಪಡು ವನ್ನೂರು ಗ್ರಾಮದ ಪುಂಡಿಕಾಯಿ, ಕೊಡಿ ಪ್ಪಾಡಿ ಗ್ರಾಮದ ಅರ್ಕ, ಕೆಯ್ಯೂರು ಗ್ರಾಮದ ಬೈರೆತ್ತಿ ಕೆರೆ, ಕಬಕ ಕುಡಿಪ್ಪಾಡಿ ಗ್ರಾಮದ ದೇವಸ್ಥಾನದ ಕೆರೆ, ಕೋಡಿಂಬಾಡಿ ಬೆಳ್ಳಿಪ್ಪಾಡಿ ಗ್ರಾಮದ ಕೆರೆ, ಮುಂಡೂರು ಸರ್ವೆ ಗ್ರಾಮದ ಕಟ್ಟತ್ತಾರು ಕೆರೆ ಅಭಿವೃದ್ಧಿ ಗೆಂದೂ ಹಣ ಮೀಸಲಿಡಲಾಗಿತ್ತು. ಇದ ರಲ್ಲಿ ಬೆರೆಳೆಣಿಕೆಯ ಕೆರೆಗಳು ಅಭಿವೃದ್ಧಿ ಗೊಂಡರೂ ನೀರು ಬಳಸುತ್ತಿಲ್ಲ. 5 ಕೋ.ರೂ.ನಲ್ಲಿ ಪುತ್ತೂರು ವಿಧಾನ ಸಭಾಕ್ಷೇತ್ರದ ಗ್ರಾಮಾಂತರ ಪ್ರದೇಶದ 11 ಕೆರೆಗಳಅಭಿವೃದ್ಧಿಗೆ (17 ಕೆರೆಗಳಲ್ಲಿ ಈ 11 ಕೆರೆಗಳು ಸೇರಿವೆ) 2011-12ನೇ ಸಾಲಿನಲ್ಲಿ 3.15 ಕೋ. ರೂ. ಬಿಡುಗಡೆಗೊಂಡಿತ್ತು.
ಕೆರೆ ನೀರೇ ಸಾಕು !
ನಗರದಲ್ಲಿ ದಾಖಲೆ ಪ್ರಕಾರ 6ಕ್ಕಿಂತ ಮಿಕ್ಕಿ ಸರಕಾರಿ ಕೆರೆಗಳಿರಬೇಕು. ಈಗ ಒಂದೆರಡು ಮಾತ್ರ ಇವೆ. ಸ್ಥಳೀಯ ಆಡಳಿತ ಮನಸ್ಸು ಮಾಡಿದರೆ, ಅವುಗಳನ್ನು ಬಳಸಿ ನೀರು ಸಮಸ್ಯೆಗೆ ಪರಿಹಾರವಾಗಿಸಿಕೊಳ್ಳಬಹುದು. 30-40 ಕೋಟಿ ರೂ. ಸಾಲ ಮಾಡಿ, ಕುಡ್ಸೆಂಪ್ಯೋಜನೆಯಲ್ಲಿ ಉಪ್ಪಿನಂಗಡಿಯಿಂದ ನೀರು ತರಿಸುವ ಪ್ರಯತ್ನ ಕೈಬಿಟ್ಟು, ಕೆರೆ ಪುನರುಜ್ಜೀವನಗೊಳಿಸಿದರೆ ನಗರದ ಜನರ ಮೇಲಿನ ಸಾಲದ ಹೊರೆಯು ತಪ್ಪುತ್ತದೆ. ಅಂತರ್ಜಲ ಸಂರಕ್ಷಣೆಯೂ ಸಾಧ್ಯ ಎನ್ನುತ್ತಾರೆ ನಾಗರಿಕರು.
ಇದರಲ್ಲಿ ಎರಡು ಕೆರೆಗಳಿಗೆ 47.65 ಲಕ್ಷ ರೂ. ಹಣ ಮಾತ್ರ ಖರ್ಚಾಗಿತ್ತು. ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದ ನೆಟ್ಟಣಿಗೆ ಮುಟ್ನೂರು, ವಿಟ್ಲದಲ್ಲಿ ಕೆರೆ ಅಭಿವೃದ್ಧಿಗೊಂಡಿದೆ. ಉಪ್ಪಿನಂಗಡಿ, ಬನ್ನೂರು, ಅಜಿಲಾಡಿ ಕೆರೆ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅನುದಾನದ ಕೊರತೆ
ವರ್ಷಂಪತಿ ಕೆರೆ ನಿರ್ವಹಣೆಗೆಂದೂ ಸರಕಾರ ಯಾವುದೇ ಅನುದಾನ ನೀಡುವು ದಿಲ್ಲ. ಹೀಗಾಗಿ ವರ್ಷಂಪ್ರತಿ ನಿರ್ವಹಣೆ ಅನ್ನುವುದು ಮರೀಚಿಕೆಯಾಗಿದೆ. ಅನುದಾನ ಇಲ್ಲದ ಕಾರಣ, ಕೆರೆ ಹೂಳೆ ತ್ತುವ ಕೆಲಸವೂ ಆಗುತ್ತಿಲ್ಲ. ಬಹುತೇಕ ಕೆರೆಗಳಲ್ಲಿ ಹೂಳು ತೆಗೆಯದೇ 30 ವರ್ಷಗಳೇ ದಾಟಿದೆ.