1.11 ಕೋಟಿ ಮಳೆ ಕೊಯ್ಲು ಘಟಕ : ಕೇಂದ್ರದ ಮಾಸ್ಟರ್ ಪ್ಲಾನ್
Team Udayavani, Mar 30, 2017, 4:13 PM IST
ಹೊಸದಿಲ್ಲಿ : ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶಗಳಲ್ಲಿ 23 ಲಕ್ಷ ಹಾಗೂ ನಗರ ಪ್ರದೇಶಗಳಲ್ಲಿ 88 ಲಕ್ಷ ಸೇರಿದಂತೆ ಒಟ್ಟು 1.11 ಕೋಟಿ ಮಳೆ ಕೊಯ್ಲು ಘಟಕಗಳನ್ನು ರೂಪಿಸುವ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ.
ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ವಿಷಯವನ್ನು ಇಂದು ಲೋಕಸಭೆಗೆ ತಿಳಿಸಿದರು.
ದೇಶಾದ್ಯಂತ ಅಂತರ್ಜಲ ಮಟ್ಟವು ಕುಸಿಯುತ್ತಿದ್ದು ಮಳೆ ಕೊಯ್ಲು ರಚನೆಗಳ ಮೂಲಕ ಅಂತರ್ಜಲ ಮರುಪೂರಣ ಕೈಗೊಳ್ಳುವ ಅಗತ್ಯವಿದೆ ಎಂದವರು ಹೇಳಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಕ್ಕೆ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಗುಣಮಟ್ಟ ಹೆಚ್ಚಿಸುವ ದಿಶೆಯಲ್ಲಿ 25 ಸಂಶೋಧನ ಹಾಗೂ ಅಭಿವೃದ್ಧಿ ಯೋಜನೆಗಳು ಸಿಕ್ಕಿವೆ. ಅಂತರ್ಜಲದಿಂದ ಲಭ್ಯವಿರುವ ಕುಡಿಯುವ ನೀರಿನಲ್ಲಿರುವ ಫ್ಲೋರೈಡ್, ನೈಟ್ರೇಟ್, ವಿಷ, ಕಬ್ಬಿಣ ಮತ್ತು ಕ್ರೋಮಿಯಂ ಅಂಶಗಳಿದ್ದು ಅವುಗಳನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಸಚಿವ ತೋಮರ್ ಹೇಳಿದರು.