ಮಧ್ಯರಾತ್ರಿ ಎಗ್ಗಿಲ್ಲದೆ ನಡೆಯುತ್ತಿತ್ತು ಅಕ್ರಮ ಮರಳುಗಾರಿಕೆ
Team Udayavani, Apr 4, 2017, 11:44 AM IST
ಉಡುಪಿ: ಉತ್ತರ ಪ್ರದೇಶ, ಬಿಹಾರ ಮತ್ತಿತರ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ರಾಜ್ಯಗಳಲ್ಲಿ ಅಧಿಕಾರಿಗಳ ಮೇಲೆ ನಡೆಯುತ್ತಿದ್ದ ಹಲ್ಲೆ ಕೇಳುತ್ತಿದ್ದ ಉಡುಪಿ ಜಿಲ್ಲೆಯ ಜನತೆ ಪ್ರಪ್ರಥಮ ಬಾರಿಗೆ ಇಲ್ಲಿನದ್ದೇ ಜಿಲ್ಲಾಧಿಕಾರಿ ಮೇಲೆ ಹಲ್ಲೆಗೆ ಯತ್ನ ನಡೆದಿರುವ ವಿಷಯ ಕೇಳುವಂತಾಗಿದೆ. ಅವರೊಂದಿಗಿದ್ದ ಉಪವಿಭಾಗಾಕಾರಿ, ಗ್ರಾಮಲೆಕ್ಕಿಗರು, ಇತರ ಸಿಬಂದಿ ಮೇಲೂ ಹಲ್ಲೆಗೆ ಯತ್ನ, ಹಲ್ಲೆಯಾಗಿದೆ. ನಿಜಕ್ಕೂ ಈ ಬೆಳವಣಿಗೆ ಆತಂಕಕಾರಿ. ಸುಶಿಕ್ಷಿತ ಉಡುಪಿ ಜಿಲ್ಲೆಗೆ ಕಪ್ಪು ಚುಕ್ಕೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಜಿಲ್ಲಾಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಸಭೆ ನಡೆಸಿದ್ದರು. ಜಿ.ಪಂ. ಸಿಇಒ ಆಗಿಯೂ ಅವರಿಗೆ ಮರಳುಗಾರಿಕೆ ಸಮಸ್ಯೆ ಬಗ್ಗೆ ಆಳ ಅರಿವಿತ್ತು. ಡಿಸಿಯಾದ ಬಳಿಕ ಜನಧಿರೊಂದಿಗೆ ನೇರವಾಗಿ ಫೋನ್ – ಇನ್ ಕಾರ್ಯಕ್ರಮ ನಡೆಸಿ ಸಮಸ್ಯೆ ಆಲಿಸಿದ್ದರು. ಆ ವೇಳೆ ಜಿಲ್ಲೆಯಲ್ಲಿನ ಅದರಲ್ಲೂ ಮುಖ್ಯವಾಗಿ ಕುಂದಾಪುರ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ದೂರು ಬಂದಿದ್ದವು. ಅಕ್ರಮ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೊಲೀಸ್, ಪಿಡಬ್ಲ್ಯೂಡಿ, ಗಣಿ ಮತ್ತು ಭೂವಿಜ್ಞಾನ ಇನ್ನಿತರ ಇಲಾಖೆಗಳ ಅಧಿಕಾರಿಗಳಿರುವ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ರಾತ್ರಿ ನಡೆಯುವ ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ಪಡೆದ ಡಿಸಿ ರವಿವಾರ ರಾತ್ರಿ ಪರಿಶೀಲನೆಗೆ ಹಳ್ನಾಡು, ಕಂದ್ಲೂರಿಗೆ ತೆರಳಿದ್ದರು. ಅಲ್ಲಿ ಅವರಿಗೆ ಮರಳು ಮಾಫಿಯಾದ ನೈಜ ಚಿತ್ರಣ ಸಿಕ್ಕಿದೆ.
ಮುಂಬಯಿ ಬಿಟ್ಟು ಮರಳಿಗೆ ಧುಮುಕಿದರು
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಷ್ಟು ವಿಸ್ತಾರವಾಗಿದೆ ಎಂದರೆ, ಊರಿನಿಂದ ಮುಂಬಯಿಗೆ ತೆರಳಿ ಅಲ್ಲಿ ವ್ಯವಹಾರ ಮಾಡಿಕೊಂಡಿದ್ದವರು ಮರಳಿ ಊರಿಗೆ ಬಂದು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿಧಿದ್ದಾರೆ ಎನ್ನುವ ಅಂಶ ಗೊತ್ತಾಗಿದೆ. ಇದು ಯಾಕೆ ಹೀಗೆ ಎಂದರೆ ರಾತ್ರಿ -ಬೆಳಗಾಗುವುದರಲ್ಲಿ ಸಾವಿರಾರು ರೂ. ಲಾಭ ತಂದುಕೊಡುವ ಬಹುದೊಡ್ಡ ಉದ್ಯಮವಾಗಿ ಅಕ್ರಮ ಮರಳುಗಾರಿಕೆ ಬೆಳೆಯುತ್ತಿದೆ. ಲಾಭ ಹೆಚ್ಚಾದಾಗ ಕಳ್ಳರು ಹೆಚ್ಚಾಗುತ್ತಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಜನರ ಬೇಡಿಕೆಯಂತೆ ಜಿಲ್ಲೆಗೆ ಸ್ಪಷ್ಟ ಪ್ರತ್ಯೇಕ ಮರಳು ನೀತಿ ಬಂದರೆ ಮಾತ್ರ ಸಮಸ್ಯೆ ಬಗೆಹರಿಯಬಹುದು.
ಮೊದಲೇ ಎಚ್ಚರಿಸಿದ್ದರೂ…
ಈ ಹಿಂದಿನ ಹಲವು ಜಿ.ಪಂ., ಕೆಡಿಪಿ ಸಭೆಗಳಲ್ಲಿ ಅಕ್ರಮ ಮರಳುಗಾರಿಕೆ ವಿಷಯ ಪ್ರತಿಧ್ವನಿಸಿದ್ದವು. ಕುಂದಾಪುರ ತಾಲೂಕಿನ ಯಾವ ಭಾಗದಲ್ಲಿ ರಾತ್ರಿ ಮರಳುಗಾರಿಕೆ ನಡೆಯುತ್ತಿದೆ ಎನ್ನುವುದನ್ನು ಊರಿನ ಹೆಸರು ಪ್ರಸ್ತಾವಿಸಿ ಜಿ.ಪಂ. ಸದಸ್ಯ ಬಾಬು ಶೆಟ್ಟಿ ವಿವರವಾಗಿ ಹೇಳಿದ್ದರು. ಹಾಗೆಯೇ ಹೊರ ಜಿಲ್ಲೆಗಳಿಗೆ ರಾತೋರಾತ್ರಿ ಅಕ್ರಮ ಮರಳು ಸಾಗಾಟವೂ ನಡೆಯುತ್ತಿದೆ ಎಂದು ಹೇಳಿದ್ದರು. ಸಭೆಯಲ್ಲಿದ್ದ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಪತ್ತೆ ಹಚ್ಚಿದ ಪ್ರಕರಣವನ್ನು ವಿವರಿಸಿ ಜಿಲ್ಲೆಯ ಗಡಿಭಾಗವಾದ ಶಿರೂರು ಮತ್ತು ಹೊಸಂಗಡಿಯಲ್ಲಿ ಮರಳು ಲಾರಿಗಳ ತಪಾಸಣೆಗೆ 24 x 7 ಚೆಕ್ಪೋಸ್ಟ್ ರಚಿಸಲಾಗಿದೆ ಎಂದು ಅಂದಿನ ಸಭೆಯಲ್ಲಿ ಹೇಳಿದ್ದರು.
ಚೆಕ್ಪೋಸ್ಟ್ ದುರ್ಬಲವಾಗಿದೆ
ಅಧಿಕಾರಿಗಳು ಚೆಕ್ಪೋಸ್ಟ್ ಹಾಕಿ ಸಿಸಿ ಕೆಮರಾ ಅಳವಡಿಸಿದ್ದಾರೆ. ಆದರೆ, ಆ ಚೆಕ್ಪೋಸ್ಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ? ಶಿರೂರು, ಹೊಸಂಗಡಿಯಲ್ಲಿ ಹಾಕಿರುವ ಚೆಕ್ಪೋಸ್ಟ್ ಅನ್ನು ಮೊದಲು ಬಿಗಿ ಮಾಡಬೇಕು. ಮರಳುಗಾರಿಕೆ ವಿಚಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸಾಮಾಜಿಕ ಬದ್ಧತೆ ಇದ್ದರೆ ಜಿಲ್ಲಾಧಿಕಾರಿ ಮೇಲೆ ಅಂತಹ ಕೃತ್ಯ ನಡೆಯುತ್ತಿತ್ತೇ ಎಂದು ಜಿ.ಪಂ. ಸದಸ್ಯ ಟಿ. ಬಾಬು ಶೆಟ್ಟಿ ಹೇಳಿದ್ದಾರೆ.
ಹೊರ ರಾಜ್ಯದವರ ಹಿಡಿತ ಪೊಲೀಸರಿಗಿಲ್ಲವೇ?
ಡಿಸಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಹೊರ ರಾಜ್ಯದ ಕಾರ್ಮಿಕರು ಅಲ್ಲಿದ್ದುದು ಕಂಡುಬಂದಿದೆ. ಅಕ್ರಮ ಮರಳುಗಾರಿಕೆ ನಡೆಸುವವರು ಹೊರರಾಜ್ಯ, ಜಿಲ್ಲೆಗಳಿಂದ ಜನರನ್ನು ಕರೆತಂದು ತೊಡಗಿಸಿಕೊಂಡಿರುವುದು ಇಲ್ಲಿ ಗೊತ್ತಾಗುತ್ತದೆ. ಇಷ್ಟಿದ್ದರೂ ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುವುದೇ ಪ್ರಶ್ನಾರ್ಹ.
ಮರಳು ಮಾಫಿಯಾದಿಂದ ವರ್ಗವಾಗಿದ್ದ ಡಿಸಿ
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಕ್ರಮಕೈಗೊಳ್ಳಲು ಮುಂದಾದಾಗ ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾಗಿತ್ತು ಎಂದು ಹೇಳಲಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಬೀಳ್ಕೊಡುಗೆ ಸಮಾರಂಭದಲ್ಲಿ ಮರಳು ಮಾಫಿಯಾದವರಿಂದಲೇ ನನ್ನ ವರ್ಗಾವಣೆಯಾಗಿದೆ ಎನ್ನುವ ಬೇಸರದ ಮಾತನ್ನು ಹಿಂದಿನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದ್ದರು. ಈ ಸಂದರ್ಭ ಮರಳು ಮಾಫಿಯಾದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಮಾಧ್ಯಮದವರು ಕೇಳಿದಾಗ ಉಡುಪಿ ಜಿಲ್ಲೆಯಲ್ಲಿ ಮರಳು ಮಾಫಿಯಾ ಎನ್ನುವುದೇ ಇಲ್ಲ ಎಂದಿದ್ದರು. ಈಗಿನ ಬೆಳವಣಿಗೆಗಳಿಂದ ಮರಳು ಮಾಫಿಯಾದ ಬೇರು ಎಷ್ಟೊಂದು ಗಟ್ಟಿಯಾಗಿದೆ ಎನ್ನುವುದು ತಿಳಿಯುತ್ತದೆ.
ಅಕ್ರಮ ನಡೆಸುವವರು ತೆರೆಮರೆಯಲ್ಲಿ?
ಅಕ್ರಮ ಮರಳುಗಾರಿಕೆಯ ಬೇರು ನದಿ ಪಾತ್ರದಿಂದ ಸಮುದ್ರವನ್ನೇ ಆಕ್ರಮಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ತಪ್ಪಾಗಲಾರದು. ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ತೆರೆಮರೆಯಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬರುತ್ತಲಿದೆ. ಕಾರ್ಮಿಕರನ್ನು ಹಿಡಿಯುವುದಲ್ಲ , ಮೊದಲು ಆ ತೆರೆಮರೆಯಲ್ಲಿರುವವರನ್ನು ಬಂಧಿಸಬೇಕು. ಇಂತಹ ಕೆಲಸ ನಡೆಯಬೇಕಾದರೆ ಅಕ್ರಮದತ್ತ ಮುನ್ನುಗ್ಗುವ ವ್ಯಕ್ತಿತ್ವ ಹೊಂದಿರುವ ಅಣ್ಣಾಮಲೈ ಅವರಂತಹ ಪೊಲೀಸ್ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಕಾನೂನಿನಂತೆ ಕ್ರಮಕೈಗೊಳ್ಳುತ್ತೇವೆ ಎನ್ನುವ ಅಧಿಕಾರಿಗಳಿಂದ ಮಾಫಿಯಾ ತಡೆಯಲು ಸಾಧ್ಯವಾಗದು ಎಂದು ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.
Related News Link:
► ಹಿಂಸೆಗಿಳಿದ ಮರಳು ಮಾಫಿಯಾ: ಉಡುಪಿ ಡಿಸಿ, ಎಸಿ ಕೊಲೆಗೆ ಯತ್ನ: http://bit.ly/2nDYDaP
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ