ಕಬ್ಬಿಣ ಕಾದಾಗಲೇ ಬಡಿಯಬೇಕು


Team Udayavani, Aug 8, 2017, 7:33 AM IST

08-ANKANA-2.jpg

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ತೀವ್ರತೆ ಪಡೆಯುತ್ತಿದೆ. ವೀರಶೈವ-ಲಿಂಗಾಯತ ಒಂದೇ ಇಲ್ಲ ಎಂಬ ವಿಷಯವಾಗಿ ಆರೋಪ-ಪ್ರತ್ಯಾರೋಪಗಳು ನಿತ್ಯವೂ ಹರಿದಾಡುತ್ತಿವೆ. ಪರ-ವಿರೋಧದ ಗುಂಪುಗಳು ಹೋರಾಟಕ್ಕಿಳಿದಿರುವ ಸನ್ನಿವೇಶದಲ್ಲಿ ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹಾಗೂ ಕನ್ನಡದ ಮಠವೆಂದೇ ಬಿಂಬಿತವಾದ ಗದಗ ತೋಂಟದಾರ್ಯ ಮಠದ ಶ್ರೀ ಡಾ| ಸಿದ್ಧಲಿಂಗ ತೋಂಟದಾರ್ಯ ಸ್ವಾಮೀಜಿ ಅವರು ಈ ವಿಚಾರವಾಗಿ “ಉದಯವಾಣಿ’ಯೊಂದಿಗೆ ನೇರಾನೇರ ಮಾತುಕತೆಗಿಳಿದಿದ್ದಾರೆ…

ಲಿಂಗಾಯತ-ವೀರಶೈವ ಒಂದೆಯೋ ಅಥವಾ ಬೇರೆಯೋ?
ಖಂಡಿತವಾಗಿಯೂ ಇವೆರಡೂ ಒಂದಾಗಲು ಸಾಧ್ಯವೇ ಇಲ್ಲ. ಆಚರಣೆ, ಪದ್ಧತಿ, ಚಿಂತನೆಯಲ್ಲಿ ವೀರಶೈವ – ಲಿಂಗಾಯತ ನಡುವೆ ಎಣ್ಣೆ-ಶೀಗೇಕಾಯಿ ಸಂಬಂಧವಿದೆ. ಒಂದೇ ಒರೆಯಲ್ಲಿ ಎರಡು ಕತ್ತಿಗಳನ್ನಿಡಲು ಸಾಧ್ಯವೇ?

ಬೇರೆ ಎಂದರೆ ಹೇಗೆ?
ನೋಡಿ, ವೀರಶೈವ ಅನ್ನೋದು ಶೈವ ಪರಂಪರೆಯದ್ದು. ವೀರಶೈವರು ಆಂಧ್ರ ಮೂಲದವರು, ಶೈವ ಧರ್ಮಾವಲಂಬಿಗಳು. ಬಸವಣ್ಣನವರ ಬದಲಾವಣೆ, ಯಶಸ್ಸು ಹಾಗೂ ನಾಯಕತ್ವಕ್ಕೆ ಆಕರ್ಷಿತರಾಗಿ ಲಿಂಗಾಯತ ಧರ್ಮ ಸ್ವೀಕರಿಸಿದ್ದರು. ಇವರ ವೀರವ್ರತ, ಪುರವಂತಿಕೆ, ವೀರಾವೇಶ ಕುಣಿತಕ್ಕೆ ಆಕರ್ಷಿತರಾಗಿ ಅನೇಕರು ವೀರಭದ್ರನನ್ನು ಮನೆದೇವರನ್ನಾಗಿ ಮಾಡಿಕೊಂಡರು. ವೀರಶೈವರಲ್ಲಿ ಬಹುದೇವೋಪಾಸನೆ ಇದೆ. ಆದರೆ ಲಿಂಗಾಯತರು ಇಷ್ಟಲಿಂಗ ಪೂಜಕರು, ಏಕದೇವೋಪಾಸಕರು. 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಬಸವಣ್ಣನವರಿಂದ ಸ್ಥಾಪಿತವಾಗಿದೆ.

ವೀರಶೈವ-ಲಿಂಗಾಯತ ಹಿಂದೂ ಧರ್ಮದ ಭಾಗವಂತೆ?
ವೀರಶೈವರಲ್ಲಿ ಚತುರಾಚಾರ್ಯರು ಬರುತ್ತಾರೆ. 1668ರಲ್ಲಿ ಚತುರಾ ಚರಿತೆ ಪುಸ್ತಕ ಬಂದಿದೆ. ಕಾಶಿಯಲ್ಲಿ ನಾಥ ಪಂಥದ ಗೋಸ್ವಾಮಿ ಮಠ ಎಂಬುದಿತ್ತು. ನಾಥ ಪಂಥ ಶೈವ ಧರ್ಮದ್ದಾಗಿದ್ದು, ವೀರಶೈವಕ್ಕೆ ಹೆಚ್ಚು ಸಾಮ್ಯ ಇತ್ತು. ನಾಥ ಸಂಪ್ರದಾಯ ಮಠಕ್ಕೆ ಲಿಂಗಾಯತ ಪೀಠಾಧಿಪತಿಯೊಬ್ಬರು ನೇಮಕಗೊಳ್ಳುತ್ತಾರೆ. ಆಚಾರ್ಯರಿಗೆ ಇದು ಕಣ್ಣು ಕುಕ್ಕಿಸುವಂತೆ ಮಾಡುತ್ತದೆ. 17ನೇ ಶತಮಾನದಲ್ಲಿ ಚತುರಾಚಾರ್ಯರ ಬದಲಾಗಿ ಪಂಚಾಚಾರ್ಯರು ಎಂದರೆ, ನಾಲ್ಕು ಪೀಠಗಳು ಐದಾಗುತ್ತವೆ. ಇದು ಪುರೋಹಿತಶಾಹಿಗೆ ಪೂರಕವಾದದ್ದಾಗಿದ್ದು, ವಾರದ ಮಲ್ಲಪ್ಪನಂತಹವರನ್ನು ಬುಟ್ಟಿಗೆ ಹಾಕಿಕೊಂಡು “ಲಿಂಗಿ ಬ್ರಾಹ್ಮಣ’ ಎಂಬ ಗ್ರಂಥದ ಮೂಲಕ ವೀರಶೈವರು ಸಹ ಬ್ರಾಹ್ಮಣರು ಎಂಬ ಸಮರ್ಥನೆ ಯತ್ನ ನಡೆಯುತ್ತದೆ. ಹಿಂದೂ ಧರ್ಮದ ಮೌಡ್ಯ, ಕಂದಾಚಾರ ವಿರೋಧಿಸಿಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಅದು ಹೇಗೆ ಹಿಂದೂ ಧರ್ಮದ ಭಾಗವಾಗಲು ಸಾಧ್ಯ ಹೇಳಿ?

ಸ್ವತಃ ಬಸವಣ್ಣವರೇ ವೀರಶೈವ ಧರ್ಮ ಸ್ವೀಕರಿಸಿದ್ದೇನೆ ಎಂದಿದ್ದಾರಂತಲ್ಲ?
ಪ್ರಾರಂಭಿಕವಾಗಿ ಬಸವಣ್ಣವರು ಆ ಮಾತು ಹೇಳಿರಬಹುದು. ಬುದ್ಧನಿಗೆ ಜ್ಞಾನೋದಯವಾದಂತೆ ಬಸವಣ್ಣವರಿಗೆ ವೀರಶೈವ ಧರ್ಮದ ಸ್ಥಿತಿ ತಿಳಿದ ಅನಂತರ ಸ್ವಯಂ ಪ್ರೇರಣೆಯೊಂದಿಗೆ ಹಿಂದು-ವೀರಶೈವ ಧರ್ಮಕ್ಕೆ ಹೊರತಾದ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ.

ಬಸವಣ್ಣ ಧರ್ಮ ಸುಧಾರಕರೇ ವಿನಹ, ಸಂಸ್ಥಾಪಕರಲ್ಲವಂತಲ್ಲ?
ಇದನ್ನೇ ಹೈಜಾಕ್‌ ಸಂಸ್ಕೃತಿ ಎಂದು ಹೇಳ್ಳೋದು. ಈ ಚತುರಾಚಾರ್ಯರು ಅಥವಾ ಇಂದಿನ ಪಂಚಾಚಾರ್ಯರು ಹೈಜಾಕ್‌ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಬಂದಿದ್ದಾರೆ. ಅವರು ಬಸವಣ್ಣನನ್ನು ಎಂದಿಗೂ ಗುರುವೆಂದು ಒಪ್ಪಿಕೊಂಡಿಲ್ಲ. ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ ಎಂಬುದನ್ನು ವಿದೇಶಿಯರು, ಬ್ರಿಟಿಷ್‌ ಆಡಳಿತ ಒಪ್ಪಿದೆ. ಅನೇಕ ಸರಕಾರಿ ದಾಖಲೆಗಳಲ್ಲಿಯೂ ಇದು ನಮೂದಾಗಿದೆ.

100 ವರ್ಷಗಳ ಹಿಂದೆ ಲಿಂಗಾಯತ ಶಬ್ದದ ಬಳಕೆಯೇ ಇರಲಿಲ್ಲವಂತೆ?
ಹೈಜಾಕ್‌ ಸಂಸ್ಕೃತಿ ಏನನ್ನಾದರೂ ಬಿಂಬಿಸಬಲ್ಲದು. ಆದರೆ ವಾಸ್ತವ ಎಂಬುದೊಂದಿದೆಯಲ್ಲ. 1868ರಲ್ಲಿ ಡೆಪ್ಯುಟಿ ಚನ್ನಬಸಪ್ಪನವರು ಲಿಂಗಾಯತ ಉಚಿತ ಬೋರ್ಡಿಂಗ್‌ ಆರಂಭಿಸಿದ್ದರು. 1885ರಲ್ಲಿ ಲಿಂಗಾಯತ ವಿದ್ಯಾ ಅಭಿವೃದ್ಧಿ ಸಮಿತಿ, 1916ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ (ಕೆಎಲ್‌ಇ), ವಿಜಯಪುರದಲ್ಲಿ ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆ(ಬಿಎಲ್‌ಡಿ) ಆರಂಭವಾಗಿದೆ. ಲಿಂಗಾಯತ ಎಂಬ ಶಬ್ದವೇ ಇಲ್ಲದಿದ್ದರೆ ಇವೆಲ್ಲ ಲಿಂಗಾಯತ ಹೆಸರಲ್ಲಿ ಹೇಗೆ ಸ್ಥಾಪನೆಗೊಂಡವು?

ಶರಣರ ವಚನಗಳಲ್ಲಿ ಲಿಂಗಾಯತ, ಲಿಂಗವಂತ ಶಬ್ದಗಳೇ ಇಲ್ಲವಂತೆ?
ಬಸವಣ್ಣ ಹಾಗೂ ಶರಣರ ಷಟ್‌ಸ್ಥಲ ವಚನಗಳಲ್ಲಿ ವೀರಶೈವ ಎಂಬ ಶಬ್ದದ ಬಳಕೆಯೇ ಇಲ್ಲ. ಬದಲಾಗಿ ಲಿಂಗಾಯತ ಪದಗಳೇ ಇವೆ. ಅನಂತರದಲ್ಲಿ ವಚನಗಳಲ್ಲಿಯೂ ಹಸ್ತಕ್ಷೇಪ ಮಾಡಿದ ಹಲವರು ಲಿಂಗಾಯತ ಇದ್ದ ಕಡೆಯಲ್ಲಿ ವೀರಶೈವ ಎಂದು ಸೇರಿಸಿದ್ದಾರೆ.

ಸಿದ್ಧಾಂತ ಶಿಖಾಮಣಿ-ವಚನಗಳ ಆಚರಣೆಗೆ ಸಾಮ್ಯ ಇದೆಯಂತಲ್ಲ?
ನೋಡಿ, ಸಿದ್ಧಾಂತ ಶಿಖಾಮಣಿ ಎಂಬುದು ಸ್ವತಂತ್ರ ಕೃತಿಯಲ್ಲ. ಅದು ಬೇರೆ ಬೇರೆ ಆಗಮ, ವೇದ, ಉಪನಿಷತ್ತುಗಳಿಂದ ಸಂಗ್ರಹಗೊಂಡ ಸಂಪಾದಿತ ಕೃತಿ. ಇದರಲ್ಲಿ ಸಂಸ್ಕೃತಕ್ಕೆ ಆದ್ಯತೆ. ವಚನಕಾರರು ಕಾಯಕ, ಇಷ್ಟಲಿಂಗ ಪೂಜೆ, ದಾಸೋಹಕ್ಕೆ ಒತ್ತು ಕೊಟ್ಟವರು. ವಚನಗಳಲ್ಲಿ ಕಂಡು ಬರುವ ಶೇ. 90ರಷ್ಟು ಶ್ಲೋಕಗಳು ಕಾಲ ಕಾಲಕ್ಕೆ ಸೇರ³ಡೆಗೊಂಡವು ಎಂಬುದನ್ನು ಸಂಶೋಧಕ ಡಾ| ಎಂ.ಎಂ. ಕಲಬುರ್ಗಿಯವರು ಹೇಳುತ್ತಿದ್ದರು. ವಚನಕಾರರದ್ದು ಕನ್ನಡ ಧರ್ಮವಾಗಿದೆ.

ವಿರಕ್ತ ಮಠಗಳು ಹಿಂದೂ ಪೂಜಾ ಪದ್ಧತಿ ಆಚರಿಸುತ್ತಿವೆಯಂತಲ್ಲ?
ಇರಬಹುದು. ಆದರೆ ಗದಗಿನ ತೋಂಟದಾರ್ಯ ಮಠ, ಇಲಕಲ್ಲ ಮಹಾಂತಸ್ವಾಮಿ ಮಠ, ಚಿತ್ರದುರ್ಗದ ಮುರುಘಾಮಠ, ಭಾಲ್ಕಿ ಪಟ್ಟದದೇವರಮಠ  ಹೀಗೆ ಅನೇಕ ಮಠಗಳು ಶರಣ ಪರಂಪರೆ ಆಚರಿಸುತ್ತಿವೆ. ಅನೇಕ ವಿರಕ್ತ ಮಠಾಧೀಶರು ಕಾಶಿಯಲ್ಲಿ ವಿದ್ಯೆ ಕಲಿತವರಾಗಿದ್ದು, ಮತ್ತದೇ ಶೈವ ಸಂಸ್ಕೃತಿ ಪೂಜಾ ವಿಧಿ ಬೋಧನೆ, ಆಚರಣೆಯಲ್ಲಿ ತೊಡಗಿರಬಹುದು.

ವೀರಶೈವ-ಲಿಂಗಾಯತ ವಿವಾದ ಮಠಾಧೀಶರ ನಡುವಿನ ವೈರುಧ್ಯವೇ?
ಖಂಡಿತವಾಗಿಯೂ ಹೌದು. ಬಸವಣ್ಣ ಸದಾಕಾಲ ನಡೆಯುವ ನಾಣ್ಯ. ಲಿಂಗಾಯತ ಭಕ್ತರನ್ನು ಬಳಸಿಕೊಳ್ಳುವವರು ಮೊದಲು ಬಸವಣ್ಣನನ್ನು ಗುರುವೆಂದು ಒಪ್ಪಿಕೊಳ್ಳಲಿ. ಅದು ಬಿಟ್ಟು ಗೊಂದಲ ಸೃಷ್ಟಿಸುವ, ಲಿಂಗಾಯತ ಪರಂಪರೆಯನ್ನು ಮತ್ತದೇ ವೈದಿಕ ಪರಂಪರೆಯಲ್ಲಿ ವಿಲೀನಗೊಳಿಸುವ ಯತ್ನಕ್ಕೆ ಮುಂದಾದರೆ, ಬಸವಣ್ಣನ ವಾರಸುದಾರರಾಗಿ ಸಹಿಸಿಕೊಳ್ಳುವುದಾದರು ಹೇಗೆ ಹೇಳಿ?

ವಿರಕ್ತರಾದ ಹಾನಗಲ್ಲ ಕುಮಾರಸ್ವಾಮಿಯವರೇ ವೀರಶೈವ ಮಹಾಸಭಾ ಸ್ಥಾಪಿಸಿದ್ದಲ್ಲ?
ಹಾನಗಲ್ಲ ಕುಮಾರಸ್ವಾಮಿಯವರು ಸಾಮಾಜಿಕ ಚಿಂತನೆ ಇದ್ದವರು. ಸಮಾಜಕ್ಕೆ ಒಳ್ಳೆಯದಾಗಲು ಹಾಗೂ ಸಂಘಟನೆ ರೂಪ ನೀಡಲು ಮಹಾಸಭಾ ರೂಪಿಸಿದ್ದರು. ಮುಂದಾಗುವ ಸವಾಲು, ಸಮಸ್ಯೆಗಳ ಬಗ್ಗೆ ಅವರು ಯೋಚಿಸಿರಲಿಕ್ಕಿಲ್ಲ. ಅವರದ್ದೇ ಕಾಲದಲ್ಲಾದ ಒಂದು ಘಟನೆ ಹಿನ್ನೆಲೆಯಲ್ಲಿ ಹೈದರಾಬಾದ್‌ ನಿಜಾಮ ರಚಿಸಿದ ಪಾಠಕ್‌ ಕಮಿಟಿ ಲಿಂಗಾಯತರು ವಿಭಿನ್ನ ಎಂಬುದು ನಮೂದಿಸಿದೆ.

ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮಾಜ ಒಡೆಯುವುದು ಬೇಡವೆಂಬ ಮಾತಿದೆಯಲ್ಲ?
ಸಮಾಜದ ಹಿತಕ್ಕಿಂತ ಮಠ, ಮಠಾಧೀಶರು ದೊಡ್ಡವರಲ್ಲ. ಲಿಂಗಾಯತ ಧರ್ಮದ ಬಗ್ಗೆ ಹೆಚ್ಚಿನ ಜಾಗೃತಿ ಇರಲಿಲ್ಲ. 1926ರಲ್ಲಿ ಫ‌.ಗು.ಹಳಕಟ್ಟಿಯವರು ವಚನಶಾಸ್ತ್ರ ಭಾಗ-1ರ ಮೂಲಕ ಜಾಗೃತಿ ಮೂಡಿಸಿದರು. ಕೆಲವರು ಅನುಭವ ಮಂಟಪ ಎಂಬುದೇ ಕಪಟ ಎಂಬ ಟೀಕೆ ಮಾಡಿದ್ದರು. ಉತ್ತಂಗಿ ಚನ್ನಪ್ಪನವರು ಅನುಭವ ಮಂಟಪದ ಐತಿಹಾಸಿಕ ಸತ್ಯವನ್ನು ಜಗತ್ತಿಗೆ ನೀಡಿದ್ದರು. ನಾವು ಸಮಾಜ ಒಡೆಯುತ್ತಿಲ್ಲ. ಲಿಂಗಾಯತ ಸಮಾಜದ ಹಿತಕ್ಕೆ ಯತ್ನಿಸುತ್ತಿದ್ದೇವಷ್ಟೇ.

ಕೇವಲ ಸರಕಾರಿ ಸೌಲಭ್ಯಕ್ಕಾಗಿಯೇ ಸ್ವತಂತ್ರ ಧರ್ಮ ಬೇಕಾ?
ಸರಕಾರಿ ಸೌಲಭ್ಯ ಸೆಕೆಂಡರಿ. ಧರ್ಮ ಸಿದ್ಧಾಂತ, ದರ್ಶನ, ಅನುಭಾವ, ಸಾಮಾಜಿಕ ವ್ಯವಸ್ಥೆ ನಮಗೆ ಮುಖ್ಯ. ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಬೇಕಾದ ಲಕ್ಷಣಗಳು ಇಂದು ನಿನ್ನೆಯದಲ್ಲ. 800 ವರ್ಷಗಳಿಂದ ಇವೆ. ಸರಕಾರಿ ದಾಖಲೆಗಳಲ್ಲಿಯೂ ಲಿಂಗಾಯತ ಧರ್ಮ ಸ್ವತಂತ್ರ ಹಾಗೂ ಹಿಂದೂ ಧರ್ಮಕ್ಕಿಂತ ಭಿನ್ನ ಎಂಬುದಿದೆ. ಅಲ್ಪಸಂಖ್ಯಾತ ಧರ್ಮವಾದರೆ ಸರಕಾರಿ ಸೌಲಭ್ಯ ಸಿಕ್ಕರೆ ಬೇಡ ಎನ್ನುವುದೇಕೆ? ಸಮಾಜಕ್ಕೆ ಹಿತಕ್ಕೆ, ಭವಿಷ್ಯದ ಜನಾಂಗಕ್ಕೆ ಒಳ್ಳೆಯಾದರೆ ಆಗಲಿ.

ಲಿಂಗಾಯತ ಸ್ವತಂತ್ರ ಧರ್ಮವೆಂಬುದು ಕೇವಲ ರಾಜಕೀಯ ದಾಳವಾದರೆ?
ಮುಖ್ಯಮಂತ್ರಿಯಾಗಿ ಲಿಂಗಾಯತ ಸಮಾಜದವರು ಮಾಡದ ಬಹುದೊಡ್ಡ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಡಿ ಇರಿಸಿದ್ದು, ಎದೆಗಾರಿಕೆ ತೋರಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಬಸವಣ್ಣವರ ಭಾವಚಿತ್ರ, ಮಹಿಳಾ ವಿವಿಗೆ ಅಕ್ಕಮಹಾದೇವಿ ನಾಮಕರಣ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಶಿಫಾರಸ್ಸು ಭರವಸೆ ಉತ್ತಮ ಕಾರ್ಯ. ಕಬ್ಬಿಣ ಕಾದಾಗಲೇ ಬಡಿಯಬೇಕು. ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸಿಗೆ ಸಿದ್ಧವೆಂದಿದೆ. ಸಮಾಜ ಈಗಲಾದರೂ ಅನ್ಯ ದಾಸ್ಯಗಳಿಂದ ಹೊರಬಂದು ಬಸವಾದಿ ಶರಣರ ಆಶಯ ಈಡೇರಿಕೆ, ಹಿಂದೂ ಎಂಬ ಸಮುದ್ರದ ಅಲೆಗಳ ಹೊಡೆತಕ್ಕೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಬದಲು ಸ್ವತಂತ್ರ ಲಿಂಗಾಯತ ಧರ್ಮದ ಮೂಲಕ ಜಗವೇ ನಮ್ಮತ್ತ ನೋಡುವಂತೆ ಮಾಡುವುದಕ್ಕೆ ಸಂಘಟಿತ ಮುಂದಡಿ ಇರಿಸಬೇಕಾಗಿದೆ.

ಶಿವನಲ್ಲ, ಪರಶಿವನ ಸ್ಮರಣೆ
ಲಿಂಗಾಯತ ಸ್ವತಂತ್ರ ಧರ್ಮದ ಕುರಿತಾಗಿ ಉಡುಪಿಯ ಪೇಜಾವರ ಶ್ರೀಗಳು ಶಿವನನ್ನು ಆರಾಧಿಸುತ್ತೀರಿ, ಹಿಂದೂ ಧರ್ಮದ ಭಾಗವಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ವಚನಕಾರರು ಹಾಗೂ ಲಿಂಗಾಯತರು ಆರಾಧಿಸುವ ಶಿವ ಹಿಂದೂ ಧರ್ಮ ಪರಿಕಲ್ಪನೆಯ ಪಾರ್ವತಿ ಪತಿ ಶಿವನಲ್ಲ. ಬದಲಾಗಿ ಪರಶಿವ, ಸೃಷ್ಟಿಕರ್ತ, ಜಗದಗಲದ ಚೇತನವೇ ವಿನಹ ಅನಿಷ್ಟ ಆಚರಣೆಗಳದ್ದಲ್ಲ ಎಂಬುದು ಡಾ| ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ಅವರ ಅನಿಸಿಕೆ.

ಸಂದರ್ಶನ: ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.