ಬಲಿಯೇಂದ್ರನ ಮರೆತು ಓಣಂ ಆಚರಿಸಿದೆವು!


Team Udayavani, Sep 24, 2017, 7:58 AM IST

24-STATE-11.jpg

ಓಣಂ ಹಬ್ಬದ ಸಮ್ಮೊಹನಕ್ಕೆ ಒಳಗಾದ ತುಳುನಾಡಿನ ಜನತೆ ತೆಂಕಣದವರನ್ನು ಅನುಕರಿಸಿ ತೆಂಕಣ ಕೇರಳೀಯರಿಗಿಂತಲೂ ಉತ್ಸಾಹದಿಂದ ಓಣಂ ಆಚರಿಸತೊಡಗಿದ್ದಾರೆ! 

“”ಓಣಂ ಹಬ್ಬಕ್ಕೆ ಸಮಾನವಾದ ಪುಲಿಯೇಂದ್ರ ಹಬ್ಬದ ಆಚರಣೆ ಕಾಸರಗೋಡಿನಲ್ಲಿದೆ. ಇದೇ ನಿಜವಾದ ಓಣಂ ಆಗಿದೆ. ನಮ್ಮ ಬಾಲ್ಯಕಾಲದಲ್ಲಿ ಪುಲಿಯೇಂದ್ರ ಹಬ್ಬವನ್ನು ಆಚರಿಸುತ್ತಿದ್ದೆವು. ತಂದೆಯ ಬಳಿ ಕೇಳಿದರೆ ಆ ಹಬ್ಬದ ಹಿನ್ನೆಲೆ ತಿಳಿದಿಲ್ಲ ಎಂದರು. ಕನ್ನಡ ಮಾತನಾಡುವ ಜನರ ಬಳಿ ವಿಚಾರಿಸಿದಾಗ ಅವರು ಬಲಿಯೇಂದ್ರ ಎಂಬ ಹೆಸರಿನಲ್ಲಿ ಅದನ್ನು ಆಚರಿಸುತ್ತಿದ್ದಾರೆ ಎಂದು ತಿಳಿಯಿತು. ಈ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸಿದ ಬಳಿಕ ಪುಲಿಯೇಂದ್ರ ಅಥವಾ ಬಲಿಯೇಂದ್ರ ಹಬ್ಬವೇ ನಿಜವಾದ ಓಣಂ ಎಂದು ತಿಳಿಯಿತು. ನಿಜವಾದ ಓಣಂ ಸಿಂಹಮಾಸದಲ್ಲಿ ಅಲ್ಲ, ತುಲಾಮಾಸದಲ್ಲಿ ಬರುತ್ತದೆ. ಮಹಾಬಲಿಯನ್ನು ಸ್ವಾಗತಿಸುವ ಈ ಹಬ್ಬ ಉತ್ತರದ ಕಾಸರಗೋಡಿನಲ್ಲಿ ಇಂದಿಗೂ ನಡೆಯುತ್ತಿದೆ. ಸಿಂಹಮಾಸದಲ್ಲಿ ಆಚರಿಸುವ ಹಬ್ಬ ವಾಮನನ ದಿನವಾಗಿದೆ. ಈಗ ಸೋತ (ತುಳಿತಕ್ಕೀಡಾದ) ಮಹಾಬಲಿಯ ದಿನವನ್ನು ಆಚರಿಸುವ ಬದಲು ಓಣಂ ಹೆಸರಿನಲ್ಲಿ ಜಯಿಸಿದವನ (ತುಳಿದವನ) ದಿನವನ್ನು ಆಚರಿಸಲಾಗುತ್ತಿದೆ.” ಮೇಲಿನ ಮಾತುಗಳನ್ನು ಹೇಳಿದವರು ಕೇರಳರಾಜ್ಯದಲ್ಲೇ ಪ್ರಸಿದ್ಧರಾದ ಕಾಸರಗೋಡಿನ ಪ್ರಮುಖ ಮಲಯಾಳಂ ಪ್ರಗತಿಶೀಲ ಸಾಹಿತಿ ಅಂಬಿಕಾ ಸುತನ್‌ ಮಾಂಗಾಡ್‌. ಏಷ್ಯಾನೆಟ್‌ ನ್ಯೂಸ್‌ ವಾಹಿನಿಯ “ಎಂದೆ ಕೇರಳಂ’ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಕುರಿತಾದ ಭಾಗದಲ್ಲಿ ಹೇಳಿದ ಮಾತಿದು. ಯು ಟ್ಯೂಬಿನಲ್ಲಿ ಹುಡುಕಿದರೆ ಈ ಎಪಿಸೋಡ್‌ ದೊರೆಯುತ್ತದೆ. ಆದರೆ ದುರದೃಷ್ಟಕರ ವಿಷಯವೆಂದರೆ ಆ ಲೇಖಕರು ತುಲಾಮಾಸದಲ್ಲಿ ಆಚರಿಸುವ ನಿಜವಾದ ಒಣಂ ಎಂದು ಹೇಳಿದ ಬಲಿಯೇಂದ್ರ ಪರ್ಬವನ್ನು ತುಳುನಾಡಿನ ಜನತೆ ಈಗ ಮರೆತುಬಿಟ್ಟಿದ್ದಾರೆ. ತೆಂಕಣದ ತುಳುನಾಡಾದ ಕಾಸರಗೋಡಿನ ಮೂಲೆ ಮೂಲೆಗಳಲ್ಲಿ ತೆಂಕಣ ಕೇರಳದ ಓಣಂ ಆಚರಿಸಲು ತೊಡಗಿದ್ದಾರೆ.

ವಿಪರ್ಯಾಸವೆಂದರೆ ತುಳಿತಕ್ಕೊಳಗಾದವನ ಪರ ನಿಲ್ಲುವ ತಾತ್ವಿಕ ನಿಲುವುಳ್ಳವರು ತುಳಿದವನ ದಿನವನ್ನು ಇಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಿಜವಾಗಿ ಓಣಂ ಬದಲು ಬಲಿಯೇಂದ್ರ ಪರ್ಬವನ್ನೇ ತೆಂಕಣ ಕೇರಳದ ಜನರು ಅನುಸರಿಸಬೇಕಿತ್ತು. ಆದರೆ ಓಣಂ ಹಬ್ಬದ ಸಮ್ಮೊಹನಕ್ಕೆ ಒಳಗಾದ ತುಳುನಾಡಿನ ಜನತೆ ತೆಂಕಣದವರನ್ನು ಅನುಕರಿಸಿ ತೆಂಕಣ ಕೇರಳೀಯರಿಗಿಂತಲೂ ಉತ್ಸಾಹದಿಂದ ಓಣಂ ಆಚರಿಸತೊಡಗಿದ್ದಾರೆ! ತಮ್ಮ ಬಲಿಯೇಂದ್ರನನ್ನು ಕೈಬಿಟ್ಟು ಪೂಕಳಂ ಹಾಕತೊಡಗಿದ್ದಾರೆ. ಹಬ್ಬದೂಟವನ್ನು ಬಿಟ್ಟು ಓಣಸದ್ಯವನ್ನು ಭುಜಿಸತೊಡಗಿದ್ದಾರೆ. ಸತ್ಯದ ಸ್ವಂತ ಹಬ್ಬವನ್ನು ಕೈಬಿಟ್ಟು ತೆಂಕಣದ ಹಬ್ಬವನ್ನು ಆಚರಿಸತೊಡಗಿದ್ದಾರೆ. ಕೇರಳದ ರಾಜ್ಯಹಬ್ಬವಾಗಿ ಓಣಂ ಆಚರಿಸೋಣ. ಆದರೆ ಓಣಂ ಆಚರಿಸಿದರೆ ಸಾಕಲ್ಲ, ದೀಪಾವಳಿ ಯಾಕೆ ಬೇಕು ಎಂದು ಉದಾಸೀನರಾಗಿದ್ದಾರೆ. ಇಂದಿನ ತುಳುನಾಡಿನ ಮಕ್ಕಳಿಗೆ ಬಲಿಯೇಂದ್ರ ಹಬ್ಬದ ಆಚರಣೆಯ ಬಗ್ಗೆ ಪ್ರಬಂಧ ಬರೆಯಲು ಹೇಳಿದರೆ ತಬ್ಬಿಬ್ಟಾದಾರು. ಆದರೆ ಓಣಂ ಬಗ್ಗೆ ಪುಟಗಟ್ಟಲೆ ಬರೆದಾರು. ಆಚರಿಸಲು ಯಾವ ಹಬ್ಬವಾದರೇನು ಎನ್ನುವವರ ಪಾಲಿಗೆ ಇದೇನೂ ದೊಡ್ಡ ವಿಷಯವಲ್ಲ. ಆದರೆ ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ, ಸಾಂಸ್ಕೃತಿಕ ವೈಶಿಷ್ಟ್ಯದ ಬಗ್ಗೆ ಕಾಳಜಿಯುಳ್ಳವರಿಗೆ ಇಂದಿನ ತಲೆಮಾರಿನ ಗತಿಯನ್ನು ಕಂಡು ವ್ಯಥೆಯಾಗದಿರದು.

ಮಲೆಯಾಳದ ತುಲಾಮಾಸದಲ್ಲಿ ತುಳುನಾಡಿನಲ್ಲಿ ಬೆಳೆದ ತೆನೆ ಮನೆಬಾಗಿಲಿಗೆ ಬರುವ ಸಮಯ. ಬಲಿಯನ್ನು ಇದಿರುಗೊಳ್ಳುವ ಸಮಯ. ಅದೇ ಸಮಯದಲ್ಲಿ ಅವರು ತಮ್ಮ ಸಮೃದ್ಧಿಯ ಹಬ್ಬವಾದ ಬಲಯೇಂದ್ರ ಪರ್ಬವನ್ನು ಆಚರಿಸುತ್ತಿದ್ದರು, ದೀಪಾವಳಿಯೂ ಇದೇ ಸಮಯದಲ್ಲಿ ಬರುತ್ತಿದ್ದು ಕ್ರಮೇಣ ದೀಪಾವಳಿಯ ಆಚರಣೆಯೊಂದಿಗೆ ಬಲಿಯೇಂದ್ರ ಪರ್ಬವೂ ಸಮ್ಮಿಳಿತಗೊಂಡಿತು. ನರಕಚತುರ್ದಶಿಯೊಂದಿಗೆ ಉತ್ತರ ಭಾರತದಿಂದ ಬಂದ ತುಳಸಿಪೂಜೆ, ಗೋಪೂಜೆ, ಲಕ್ಷ್ಮೀಪೂಜೆಗಳೂ ಇದರೊಂದಿಗೆ ಸೇರಿಕೊಂಡವು. ಜಾತಿ, ಭಾಷೆಗಳ  ಭೇದವಿಲ್ಲದೆ ಹಲವೊಮ್ಮೆ ಮತಭೇದವನ್ನೂ ಮರೆತು ತುಳುನಾಡಿಗರೆಲ್ಲ ಬಲಿಪರ್ಬವನ್ನು ಆಚರಿಸುತ್ತಿದ್ದರು. ಬಲಿಯೇಂದ್ರನನ್ನು ಕೂರಿಸುವುದು ಹಾಗೂ ಅಲಂಕರಿಸುವುದು ಮಕ್ಕಳಿಗೆಲ್ಲ ಖುಷಿಯ ವಿಷಯವಾಗಿತ್ತು. ಪಾಲೆ ಮರದ ರೆಂಬೆಯಿಂದ ಅಥವಾ ಬಾಳೆದಿಂಡಿನಿಂದ ಬಲಿಯೇಂದ್ರನನ್ನು ತಯಾರಿಸಿ ಅದನ್ನು ಪಾರೆ ಹೂ, ಚೆಂಡು ಹೂ, ತುಳಸಿ ಹೂ ಮಾಲೆಗಳಿಂದ ಅಲಂಕರಿಸಿ ಪೂಜಿಸಿ ಅಕ್ಕಿ ಅಥವಾ ಹೂಗಳನ್ನು ಚೆಲ್ಲಿ ಬಲಿಯೇಂದ್ರ (ಕೆಲವೆಡೆ ಪೊಲಿಯೇಂದ್ರ) “ಬಲಿಯೇಂದ್ರ ಅರಿಯೋ ಅರಿ’ (ಹರಿಯೋ ಹರಿ) ಎನ್ನುತ್ತಿದ್ದರು, ಇದೇ ಸಮಯದಲ್ಲಿ ಎಣ್ಣೆ ಸ್ನಾನ, ಉದ್ದು- ಅಕ್ಕಿಗಳಿಂದ ತಯಾರಿಸಿದ 

ವಿಶೇಷ ತಿನಸುಗಳ ಭೋಜನ, ಸಿಹಿತಿಂಡಿ, ಹೊಸಬಟ್ಟೆ, ಹಣತೆ, ಪಟಾಕಿಗಳ ಸಂಭ್ರಮ ಹಬ್ಬದ ಕಳೆಯನ್ನು ಏರಿಸುತ್ತಿತ್ತು. ಹಬ್ಬಗಳ ರಾಜನಾದ ಬಲಿಯೇಂದ್ರ ಪರ್ಬವನ್ನು “ಪರ್ಬ’ ಎಂದರೆ ಸಾಕಾಗುತ್ತಿತ್ತು. ಆದರೆ ಇಂದು ಬಲಿಯೇಂದ್ರನನ್ನು  ಕೂರಿಸುವವರೂ ಇಲ್ಲ. “ಪರ್ಬ’ವನ್ನು ಆಚರಿಸುವವರೂ ಇಲ್ಲ. ಕಾಸರಗೋಡಿನಲ್ಲಿ ಪರಂಪರಾಗತವಾಗಿ ತುಳುನಾಡಿನ ಸಂಸ್ಕೃತಿಯನ್ನು ರೂಢಿಸಿಕೊಂಡ ಸ್ಥಳೀಯ ಮಲೆಯಾಳ ಮನೆಮಾತಿನವರೂ ಕೂಡ ಓಣಂ ಆಚರಿಸದೆ ದೀಪಾವಳಿ ಆಚರಿಸುತ್ತಿದ್ದ ಕಾಲವೊಂದಿತ್ತು. ಆದರೆ ತುಳುವರೂ ದೀಪಾವಳಿ ಆಚರಿಸದೆ ಓಣಂ ಆಚರಿಸುವಂತಾಗಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕಾಸರಗೋಡಿನ ಶಾಲಾಮಕ್ಕಳಿಗೆ ತಾವು ಆಚರಿಸದ ಓಣಂಗೆ ಒಂದುವಾರ ರಜೆ ನೀಡುತ್ತಿದ್ದುದೂ ತಾವು ಆಚರಿಸುವ ದೀಪಾವಳಿಗೆ ಒಂದೇ ದಿನ ರಜೆ ನೀಡುತ್ತಿದುದೂ ಬಗೆಹರಿಯದ ಒಗಟಾಗಿತ್ತು. ಆದರೆ ಇಂದಿನ ಮಕ್ಕಳಿಗೆ ದೀಪಾವಳಿ ಎಂದರೆ ಪಟಾಕಿ ಎಂಬಷ್ಟರಮಟ್ಟಿಗೆ ತಿಳಿದಿರಬಹುದಾದರೂ ಬಲಿಯೇಂದ್ರ  ಎಂದರೆ ಏನಪ್ಪ ಎಂದು ಕೇಳಬಹುದು. ಆದರೆ ಓಣಂ ಎಂದರೆ ಪೂಕಳಂ, ತಿರುವಾದಿರ, ದೋಣಿಸ್ಪರ್ಧೆ, ಓಣಸದ್ಯ ಹೀಗೆ ಎಲ್ಲವೂ ಗೊತ್ತಾಗಿದೆ! ಇದನ್ನು ಸಾಂಸ್ಕೃತಿಕ ಪಲ್ಲಟವೆನ್ನಬೇಕೆ? ಸಾಂಸ್ಕೃತಿಕ ಆಕ್ರಮಣವೆನ್ನಬೇಕೆ? 

ಕಾಸರಗೋಡಿನಲ್ಲಿ ಓಣಂ ಪರಂಪರಾಗತ ಹಬ್ಬವಲ್ಲ. ಅದಿಲ್ಲಿ ಜನಪ್ರಿಯತೆ ಪಡೆದುದು ಹೆಚ್ಚೆಂದರೆ ಇಪ್ಪತ್ತು ವರ್ಷಗಳಿಂದೀಚೆಗೆ. ಚಂದ್ರಗಿರಿ ನದಿಯ ಉತ್ತರಕ್ಕೆ ಕಡಿಮೆ ಸಂಖ್ಯೆಯಲ್ಲಿರುವ ನಾಯರ್‌ ಸಮುದಾಯದವರನ್ನು ಬಿಟ್ಟರೆ ಉಳಿದ ಸ್ಥಳೀಯ ಮಿಶ್ರ ಮಲೆಯಾಳ ಮನೆಮಾತಿನ ಜನರೂ ತುಳು-ಕನ್ನಡ ಸಂಸ್ಕೃತಿಯನ್ನು ಪರಂಪರಾಗತವಾಗಿ ಆಚರಿಸುತ್ತಿದ್ದರು. ಓಣಂ ಇಲ್ಲಿ ಜನಪ್ರಿಯತೆ ಪಡೆಯಲು ಆ ಹಬ್ಬದ ಆಚರಣೆಯಲ್ಲಿನ ಸರಳತೆ. ಜಾತ್ಯತೀತತೆ, ಪೂಕಳಂ-ಓಣಭೋಜನದ ಆಕರ್ಷಣೆ ಮೊದಲಾದವುಗಳನ್ನು ಕಾರಣಗಳನ್ನಾಗಿ ಹೇಳಲಾಗುತ್ತದೆ. ಆದರೆ ಇದಕ್ಕೂ ಮೀರಿದ ರಾಜಕೀಯ ವಾಣಿಜ್ಯ ಕಾರಣಗಳೂ ಇವೆ. ಕೇರಳದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಎಡಪಕ್ಷಗಳಿಗೆ ಮಲಯಾಳಂ ಭಾಷೆ ಸಂಸ್ಕೃತಿ ಹೊಸ ರಾಜಕೀಯ ಅಸ್ತ್ರವಾಗಿದೆ. ಇದಕ್ಕೆ ಇಂಗ್ಲೀಷಿನ ವಿರುದ್ಧ ಹೋರಾಡುತ್ತಿರುವ ಕೇರಳದ ಸಾಹಿತಿ ಬುದ್ಧಿಜೀವಿಗಳ ಬೆಂಬಲವೂ ದೊರೆಯುತ್ತಿದೆ. ಕೇರಳದಲ್ಲಿ ಜನರನ್ನು ಒಗ್ಗೂಡಿಸಿ ತಮ್ಮ ರಾಜಕೀಯ ನಿಲುವನ್ನು ಸ್ಥಾಪಿಸಲು ಮಲೆಯಾಳ ಕಡ್ಡಾಯ, ಓಣಂ ಪ್ರಚಾರ ಸಾಧನಗಳಾಗಿವೆ. ತಮ್ಮ ಕಾರ್ಯಕರ್ತರು ಹಾಗೂ ಸಂಪರ್ಕಜಾಲದ ಮೂಲಕ ತುಳು ಸಂಸ್ಕೃತಿಯ ಗ್ರಾಮಗಳಲ್ಲೂ ಓಣಂ ಆಚರಿಸಲು, ಮಲೆಯಾಳ ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ. ಈವರೆಗೂ ಮುಖ್ಯ ಹಬ್ಬಗಳ ಆಚರಣೆಯಿಂದ ದೂರವಿದ್ದ ತಳಮಟ್ಟದ ಸಮುದಾಯಗಳನ್ನು, ಆದಿವಾಸಿ-ದಲಿತರನ್ನು ಓಣಂ ಹಾಗೂ ಮಲೆಯಾಳದ ಮೂಲಕ ಒಗ್ಗೂಡಿಸಲು ಪ್ರಯತ್ನ ನಡೆಯುತ್ತದೆ. ಇದು ರಾಜಕೀಯ ಕಾರಣವಾದರೆ ವಾಣಿಜ್ಯ ಸಂಸ್ಥೆಗಳೂ ತಮ್ಮ ವ್ಯಾಪಾರೋದ್ದೇಶದ ಸ್ವಾರ್ಥಕ್ಕಾಗಿ ಓಣಂಗೆ ಭರ್ಜರಿ ಪ್ರಚಾರ ನೀಡುತ್ತಿವೆ.  

ಈ ಹೇರಿಕೆಯಿಂದ ಬೆದರಿಕೆಯುಂ ಟಾಗಿರುವುದು ಕಾಸರಗೋಡಿನಂತಹ ತುಳು- ಕನ್ನಡ ಪ್ರದೇಶಗಳ ಭಾಷಾ ಸಾಂಸ್ಕೃತಿಕ ವೈವಿಧ್ಯಕ್ಕೆ. ಅದರಲ್ಲೂ ತುಳುಭಾಷೆ ಸಂಸ್ಕೃತಿಯನ್ನು ಮಲೆಯಾಳದೊಂದಿಗೆ ಹಲವು ಸಾಮ್ಯತೆಗಳಿರುವ ಸೋದರ ಭಾಷೆ ಸಂಸ್ಕೃತಿಯೆನ್ನುತ್ತ ತನ್ನೊಳಗೆ ಜೀರ್ಣಿಸಿಕೊಂಡು ವಿಸ್ತರಿಸುವ ಬಹುಸಂಖ್ಯಾಕರ ಭಾಷೆಯ ಪ್ರವೃತ್ತಿ ನಿರ್ಲಕ್ಷಿಸುವಂತಹುದಲ್ಲ. ಇಂದು ಕಾಸರಗೋಡಿಗೆ ಸಂಭವಿಸಿರುವುದು ನಾಳೆ ಕರ್ನಾಟಕದ ಕರಾವಳಿಯಲ್ಲೂ ಸಂಭವಿಸಬಹುದು. ಈವರೆಗೂ ಕಾಸರಗೋಡಿನ ಕನ್ನಡ ಹೋರಾಟದ ಪ್ರತಿರೋಧದಿಂದ ಮಲಯಾಳೀಕರಣದ ವಿಸ್ತರಣೆಗೆ ಒಂದಿಷ್ಟು ತಡೆಯುಂಟಾಗಿತ್ತು. ಆದರೆ ಕಾಸರಗೋಡಿನ ಕನ್ನಡ ಚಳುವಳಿ ದುರ್ಬಲವಾಗುತ್ತಿರುವಂತೆ ಕಾಸರಗೋಡಿನಲ್ಲಿ ಮಲಯಾಳೀಕರಣ ಪೂರ್ಣಗೊಂಡು ಕರ್ನಾಟಕದ ಕರೆನಾಡನ್ನು ಆವರಿಸುವ ದಿನಗಳು ದೂರವಿಲ್ಲ.

ನರೇಶ್‌ ಮುಳ್ಳೇರಿಯಾ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.