ಗಾಂಧೀಜಿಯವರ ರಾಜಕೀಯ ತತ್ವಜ್ಞಾನ 


Team Udayavani, Oct 1, 2017, 10:20 PM IST

gandi.jpg

ಗಾಂಧೀಜಿಯವರು ಚಿಂತನೆ ಹಾಗೂ ಬದುಕನ್ನು ಪ್ರತ್ಯೇಕ ಘಟಕಗಳನ್ನಾಗಿ ಎಂದೂ ನೋಡಿರಲಿಲ್ಲ. ಅವುಗಳ ನಡುವಿನ ಅವಿಚ್ಛಿನ್ನ ಸಂಬಂಧದ ಅರಿವಿನಲ್ಲಿ ಮತ್ತು ನಂಬಿಕೆಯಲ್ಲಿ ಅವರ ರಾಜಕೀಯ ತತ್ವಶಾಸ್ತ್ರ ಅನಾವರಣಗೊಳ್ಳುತ್ತದೆ. ಚಿಂತನೆ ಹಾಗೂ ಬದುಕು ಒಂದನ್ನೊಂದು ಬೆಸೆದುಕೊಂಡಿದೆ ಎನ್ನುವ ಗಾಂಧೀಜಿಯವರ ವಿಶ್ವದೃಷ್ಟಿಯನ್ನು ಸದ್ಯಕ್ಕೆ ನಮ್ಮ ಅನು ಕೂಲಕ್ಕಾಗಿ ಸಮಗ್ರತೆಯ ಕುರಿತಾದ ಅಥವಾ ದ್ವಂದ್ವಾತೀತವಾದ ದೃಷ್ಟಿಕೋನವೆಂದು ಕರೆಯಬಹುದು. ಈ ದೃಷ್ಟಿಕೋನದ ಅನೇಕ ಸಂಕೀರ್ಣ ಪದರಗಳನ್ನು ಗುರುತಿಸುವ ಪ್ರಯತ್ನ ನನ್ನದು.

ಚಿಂತನೆ ಮತ್ತು ಬದುಕಿನ ನಡುವಿನ ಅವಿನಾಭಾವ ಸಂಬಂಧದ ಕುರಿತಾದ ಗಾಂಧೀಜಿಯವರ ವಿಶ್ವದೃಷ್ಟಿ ಅವರ ಚಿಂತನೆಯ ಎಲ್ಲ ರೂಪಗಳಲ್ಲಿ ಮತ್ತು ಕ್ರಿಯಾಚರಣೆಯ ಎಲ್ಲ ಪ್ರಕಾರಗಳಲ್ಲಿ ನಿರಂತರವಾಗಿ ವ್ಯಕ್ತಗೊಂಡಿದೆ. ತತ್ವಜ್ಞಾನ ಮತ್ತು ರಾಜಕೀಯ ಗಳ ನಡುವಿನ ಅವಿಚ್ಛಿನ್ನ ಸಂಬಂಧ ಗಾಂಧೀಜಿಯವರಲ್ಲಿ ಮೊತ್ತಮೊದಲಿಗೆ ಕಾಣಿಸುತ್ತದೆ. ಬಹುಶಃ ಕಾರ್ಲ್ಮಾರ್ಕ್ಸ್ ರಂತೆ ಗಾಂಧೀಜಿ ಕೂಡ ತನ್ನಷ್ಟಕ್ಕೇ, ತನ್ನಲ್ಲಿಯೇ ಸ್ವತಂತ್ರವಾದ ತತ್ವಶಾಸ್ತ್ರವನ್ನು ಮನ್ನಿಸುವುದಿಲ್ಲ. ತತ್ವಶಾಸ್ತ್ರಜ್ಞರು ಈ ಜಗತ್ತನ್ನು ಬಹುರೀತಿಯಲ್ಲಿ ವಿವರಿಸಿದ್ದಾರೆ. ಆದರೆ ಮುಖ್ಯವಾದುದು ಈ ಜಗತ್ತನ್ನು ಬದಲಾಯಿಸುವುದು ಎನ್ನುವ ಮಾರ್ಕ್ಸ್ನ ಪ್ರಸಿದ್ಧ ಉದ್ಗಾರ ನಮ್ಮೆಲ್ಲರಿಗೂ ತಿಳಿದಿದೆ. ಗಾಂಧೀಜಿಯವರೂ ಕೂಡ ಬಹು ಮಟ್ಟಿಗೆ ಮಾರ್ಕ್ಸ್ರಂತೆ ತತ್ವಜ್ಞಾನದ ಜಾಗತಿಕ ಕ್ರಿಯಾಶೀಲ ಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತಾರೆ.

ತತ್ವಜ್ಞಾನವೆನ್ನುವುದು ಚಿಂತಕನೊಬ್ಬ ತನ್ನ ಏಕಾಂತದಲ್ಲಿ ತೀರಾ ವ್ಯಕ್ತಿಗತವಾಗಿ ಗಳಿಸಿಕೊಳ್ಳುವ ಜ್ಞಾನದ ಸಾûಾತ್ಕಾರವಲ್ಲ. ಬದಲಾಗಿ ಅದು ಜಗತ್ತಿನ ಸರ್ವರ ಕಲ್ಯಾಣವನ್ನು ಅಥವಾ ಸರ್ವೋದಯವನ್ನು ಸಾಧಿಸುವ ಮಾರ್ಗವೆಂದು ಗಾಂಧೀಜಿ ಪರಿಭಾವಿಸಿದ್ದರು. ಆದ್ದರಿಂದ, ಅವರ ತತ್ವಚಿಂತನೆ ಅಥವಾ ತತ್ವಜ್ಞಾನ ಅನಿವಾ ರ್ಯವಾಗಿ ಕ್ರಿಯಾಚರಣೆಯ ನೆಲೆಗಟ್ಟೊಂದನ್ನು ಅಥವಾ ರಾಜಕಾರಣದ ಮಾರ್ಗವೊಂದನ್ನು ಪ್ರತಿನಿಧಿಸುತ್ತದೆ. ಅಂದರೆ ಗಾಂಧೀಜಿಯವರಿಗೆ ತತ್ವಜ್ಞಾನ ವೈಯಕ್ತಿಕ ಮೋಕ್ಷದ ಸಿದ್ಧಿಯಾಗಿರದೆ ಸರ್ವಜನಹಿತದ ಸಾಧನವಾಗಿದೆ. ಈ ಸರ್ವಜನಹಿತದ ಸಾಧನವನ್ನೇ ನಾವು ರಾಜಕೀಯವೆಂದು ಕರೆಯುವುದಲ್ಲವೇ? ಈ ಅರ್ಥದಲಿ,É ಗಾಂಧೀಜಿಯವರ ತತ್ವಶಾಸ್ತ್ರದಲ್ಲಿ ಒಂದು ರಾಜಕೀಯ ಬೆಸೆದುಕೊಂಡಿದೆ ಅಥವಾ ಅವರ ರಾಜಕೀಯದಲ್ಲಿ ಒಂದು ತತ್ವಜ್ಞಾನ ಹುದುಗಿಕೊಂಡಿದೆ. ಇದನ್ನು ಇನ್ನೂ ಸರಳವಾಗಿ ಹೇಳುದಾದರೆ, ಗಾಂಧೀಜಿಯವರಲ್ಲಿ ಆಚಾರ-ವಿಚಾರಗಳೆರಡೂ ಬೇರ್ಪಡಿಸಲಾಗದ ರೀತಿಯಲ್ಲಿ ಒಂದನ್ನೊಂದು ಕೂಡಿಕೊಂಡಿವೆ. ಗಾಂಧೀಜಿಯವರ ವಿಶ್ವದೃಷ್ಟಿಯಲ್ಲಿ ಅವಿಭಜಿತವೆಂಬಂತಿ ರುವ ತತ್ವಜ್ಞಾನ ಮತ್ತು ರಾಜಕೀಯ ಅಥವಾ ವಿಚಾರ-ಆಚಾರ ಅಥವಾ ಚಿಂತನೆ-ಬದುಕು ಅವರ ರಾಜಕೀಯ ತತ್ವಜ್ಞಾನದ ಬಹುಮುಖ್ಯ ಆಯಾಮವಾದ ಗುರಿ ಮತ್ತು ಮಾರ್ಗ ಎನ್ನುವ ತತ್ವದಲ್ಲಿ ಪ್ರಖರವಾಗಿ ವ್ಯಕ್ತವಾಗುತ್ತದೆ. ಗಾಂಧೀಜಿಯವರಿಗೆ ಗುರಿ ಮತ್ತು ಅದನ್ನು ತಲುಪುವ ಮಾರ್ಗ ಬೇರೆಯಲ್ಲ. ಸರಿ ಯಾದ ಗುರಿಯನ್ನು ತಲುಪಲು ಸರಿಯಾದ ಮಾರ್ಗ. ಇದು ಅವರ ಅತ್ಯಂತ ನಡುವಿನ ಪ್ರತಿಪಾದನೆ. ನನ್ನ ಗುರಿ ಸತ್ಯವಾದದ್ದು, ಶ್ರೇಷ್ಟವಾದದ್ದು ಅಥವಾ ಸಾಧುವಾದದ್ದು; ಆದ್ದರಿಂದ ಇದರ ಸಾಧನೆಗಾಗಿ ಅಥವಾ ಶೀಘ್ರ ಸಾಧನೆಗಾಗಿ ನಾನು ಯಾವ ಮಾರ್ಗವನ್ನಾದರೂ ಆಯ್ಕೆಮಾಡಿಕೊಳ್ಳಬಹುದು. ಅಂದರೆ ನನ್ನ ಗುರಿಯ ಸತ್ಯತೆ, ಸಮಂಜಸತೆ ಅಥವಾ ಶ್ರೇಷ್ಠತೆ ಮಾರ್ಗವನ್ನು ಪುಷ್ಟೀಕರಿಸುತ್ತದೆ. ಈ ನಿಲುವನ್ನು ಗಾಂಧೀಜಿ ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ಸತ್ಯದ ಗುರಿಯನ್ನು ಅಸತ್ಯತೆಯ ಮಾರ್ಗದ ಮೂಲಕ ತಲುಪಲು ಸಾಧ್ಯವಿಲ್ಲ. ಗಾಂಧೀಜಿಯವರಿಗೆ ಅಹಿಂಸೆಯೇ ಸತ್ಯ ಮತ್ತು ಹಿಂಸೆಯೇ ಅಸತ್ಯ. ಹಾಗಾಗಿ, ಹಿಂಸೆ ಎನ್ನುವ ಅಸತ್ಯದ ಮಾರ್ಗದಿಂದ ಅಹಿಂಸೆಯ ಸತ್ಯವನ್ನು ತಲುಪಲು ಸಾಧ್ಯವಿಲ್ಲ (ಹಿಂಸೆ ಹಾಗೂ ಅಹಿಂಸೆಯ ಕುರಿತು ತತ್ವಶಾಸ್ತ್ರೀಯ ನೆಲೆಯಲ್ಲಿ ಆಳವಾದ ಹಾಗೂ ಮೂಲ ಜಿಜ್ಞಾಸಿಕವಾದ ನಿಷ್ಕರ್ಷೆಯನ್ನು ನಡೆಸಿದ್ದಾರೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಅಹಿಂಸೆಯ ಕುರಿತಾದ ಅವರ ತತ್ವಶಾಸ್ತ್ರೀಯ ಜಿಜ್ಞಾಸೆಯಲ್ಲಿ ಅಹಿಂಸೆ ಗುರಿಯೂ ಹೌದೂ, ಮಾರ್ಗವೂ ಹೌದು. ಹೀಗೆ ಅವರು ತಮ್ಮ ರಾಜಕೀಯ ಚಿಂತನೆಯ ಸನ್ನಿವೇಶದಲ್ಲಿ ಗುರಿ ಹಾಗೂ ಮಾರ್ಗದ ನಡುವಿನ ಅಥವಾ ಸಿದ್ಧಿ ಹಾಗೂ ಸಾಧನೆಯ ನಡುವಿನ ಕಂದಕವನ್ನು ದಾಟುತ್ತಾರೆ. ಗಾಂಧೀಜಿಯವರ ರಾಜಕೀಯ ತತ್ವಶಾಸ್ತ್ರದಲ್ಲಿ ವ್ಯಕ್ತಗೊಳ್ಳುವ ಇನ್ನೊಂದು ಬಹುಮುಖ್ಯ ದೃಷ್ಟಿಕೋನ ಸತ್ಯ ಮತ್ತು ಸತ್ಯಾಗ್ರಹಕ್ಕೆ ಸಂಬಂಧಿಸಿದ್ದು. ಇದೂ ಕೂಡ ವಿಚಾರ ಮತ್ತು ಆಚಾರಗಳ ನಡುವಿನ ದ್ವಂದ್ವವನ್ನು ದಾಟಿ ನಿಲ್ಲುತ್ತದೆ. ಮೇಲುನೋಟಕ್ಕೆ ಗಾಂಧೀಜಿಯವರ ಸತ್ಯದ ಪ್ರತಿಪಾದನೆ ಸರಳವಾಗಿ ಕಾಣಿಸಿದರೂ  ಆಳವಾಗಿ ಪರಿಶೀಲಿಸಿದರೆ ಅದು ಸತ್ಯದ ಸ್ವರೂಪದ ಕುರಿತು ತತ್ವಶಾಸ್ತ್ರೀಯವಾಗಿ ಗಹನವಾದ ದೃಷ್ಟಿಕೋನವೊಂದನ್ನು ಮುಂದಿರಿಸುತ್ತದೆ. ಅತ್ಯಂತ ಪ್ರಸಿದ್ಧವಾದ ಅವರ ಆತ್ಮಕಥೆಯ ಶೀರ್ಷಿಕೆ ಸತ್ಯದ ಕುರಿತಾದ ಅವರ ಈ ನಿಲುವನ್ನು ಪ್ರತಿಬಿಂಬಿಸುತ್ತದೆ. ಸತ್ಯದ ಪ್ರಯೋಗಗಳ ಕುರಿತು ಮಾತನಾಡುವ ಗಾಂಧೀಜಿ ಸತ್ಯದ ಸ್ವರೂಪವನ್ನು ಹೇಗೆ ನಿರೂಪಿಸುತ್ತಾರೆ ಅಥವಾ ನಿರ್ವಚಿಸುತ್ತಾರೆ ಎನ್ನುವುದು ನಿಜಕ್ಕೂ ಕುತೂಹಲಕಾರಿಯಾದ ಅಂಶವಾಗಿದೆ. ಸತ್ಯದ ಪ್ರಯೋಗಶೀಲತೆಯ ಕುರಿತಾದ ಗಾಂಧೀಜಿಯವರ ಒತ್ತಾಸೆ ಅದರ ಸಾರ್ವತ್ರಿಕತೆಯನ್ನು ನಿರಾಕರಿಸುತ್ತದೆ ಎನ್ನುವಂತಿಲ್ಲ. ಸತ್ಯವನ್ನು ನಿರಂತರವಾಗಿ ಪ್ರಯೋಗಗಳಲ್ಲಿ ಸಾಧಿಸಿ ಕಂಡು ಕೊಳ್ಳಬೇಕು ಎನ್ನುವುದು ಅವರ ವಾದವೆಂದಾದರೆ ಈ ಪ್ರಯೋಗಶೀಲತೆಯಲ್ಲಿ ಮೂಡಿಬರುವ ಸತ್ಯದ ಸಾಕ್ಷಾತ್ಕಾರ ಸಾರ್ವಕಾಲಿಕ ಎಂದು ತಿಳಿದುಕೊಳ್ಳುವ ಸತ್ಯದ ಕಲ್ಪನೆಯನ್ನು ನಾವು ನಮ್ಮ ಬದುಕಿನ ನಿರ್ದಿಷ್ಟತೆಯಲ್ಲಿ ಮರುನಿರ್ವಚಿಸಿಕೊಳ್ಳಬೇಕು ಎಂದಾಗುತ್ತದೆಯೇ ಹೊರತು, ಅವರವರು ಅವರವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ಸತ್ಯಗಳನ್ನು ಕಂಡುಕೊಳ್ಳಬಹುದು ಎನ್ನುವ ಸಾಪೇಕ್ಷವಾದವನ್ನು ಮಂಡಿಸಿದಂತಾಗುವುದಿಲ್ಲ. ಗಾಂಧೀಜಿ ಸಾಪೇಕ್ಷವಾದಿಯಲ್ಲವೆನ್ನುವುದೇ ನನ್ನ ದೃಢವಾದ ತಿಳಿವಳಿಕೆ. ಆದರೆ ಸತ್ಯ ಸಿದ್ಧ ರೂಪದಲ್ಲಿ ನಮ್ಮ ಅನುಭವ ಮತ್ತು ಅಸ್ತಿತ್ವಗಳ ಆಚೆ ಸ್ವತಂತ್ರವಾಗಿ ತೇಲಾಡುವ ವಸ್ತುವೂ ಅಲ್ಲ ಎನ್ನುವುದೂ ಗಾಂಧೀಜಿಯವರ ಸತ್ಯದ ಪ್ರತಿಪಾದನೆಯಲ್ಲಿ ನಿಹಿತವಾಗಿದೆ. ಆದ್ದರಿಂದ, ಸಾರ್ವಕಾಲಿಕವಾದ ಸತ್ಯವನ್ನು ಕಾಲನಿರ್ದಿಷ್ಟವಾಗಿ, ಸಂದರ್ಭಕ್ಕೆ ಅನುಗುಣವಾಗಿ ಮರುನಿರ್ವಚಿಸುವ ಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಕೊಂಡಾಗ ಸತ್ಯದ ಸಾಕ್ಷಾತ್ಕಾರವಾಗುತ್ತದೆ ಎನ್ನುವುದು ಅವರ ನಿಲುವು. ಗಾಂಧೀಜಿ ಯುಗಧರ್ಮದ ಪ್ರತಿಪಾದಕರಾಗಿದ್ದರು ಹಾಗೂ ಧರ್ಮ ಗ್ರಂಥಗಳಿಗೆ ನಿರ್ದಿಷ್ಟ ಮತ್ತು ಕಾಲಬದ್ಧ ನಿರ್ವಚನಗಳನ್ನು ಕೊಡುವ ಅಗತ್ಯ ಮತ್ತು ಕೊಡಬಹುದಾದ ಸ್ವಾತಂತ್ರÂ ನಮಗೆಲ್ಲರಿಗೂ ಇದೆ ಎಂದು ತಿಳಿದಿದ್ದರು. ಸತ್ಯದ ಕುರಿತಾದ ಅವರ ಈ ಪ್ರತಿಪಾದನೆ ವೈಕಂ ಸತ್ಯಾಗ್ರಹದ ಕಾಲಘಟ್ಟದಲ್ಲಿ ಅವರು ತಿರುವಾಂಕೂರು ಪಂಡಿತರ ಜತೆಗೆ ನಡೆಸಿದ ವಾದ ವಾಗ್ವಾದಗಳಲ್ಲಿ ವ್ಯಕ್ತಗೊಂಡಿದೆ. ಅನೇಕ ಸಾರಿ ತನ್ನನ್ನು ಸನಾತನಿ ಎಂದು ಕರೆದುಕೊಂಡಿರುವ ಗಾಂಧೀಜಿ ಸನಾತನವನ್ನು ನಿತ್ಯ ನೂತನವೆನ್ನುವ ಅರ್ಥದಲ್ಲಿ ಗ್ರಹಿಸಿದ್ದರು. 

ಆಳ, ಸಂಕೀರ್ಣ, ಚಲನಶೀಲ ಸತ್ಯದ ಕಲ್ಪನೆಯನ್ನು ತತ್ವಶಾಸ್ತ್ರೀಯ ಪರಿಪ್ರೇಕ್ಷ್ಯದಲ್ಲಿ ಮುಂದಿಡುವ ಗಾಂಧೀಜಿ ಈ 
ಸತ್ಯದ ಪರಿಕಲ್ಪನೆಯ ನೆಲೆಯಲ್ಲಿ ಸತ್ಯಾಗ್ರಹವೆನ್ನುವ ರಾಜಕೀಯ ಸಾಧನವೊಂದನ್ನು ರೂಪಿಸಿಕೊಳ್ಳುತ್ತಾರೆ  ಅಥವಾ ಸತ್ಯದ ಕುರಿತಾದ ಅವರ ತತ್ವಶಾಸ್ತ್ರೀಯ ದೃಷ್ಟಿಕೋನ ಅತ್ಯಂತ ಮಾರ್ಮಿಕವಾದ ಸತ್ಯಾಗ್ರಹ ವೆನ್ನುವ ರಾಜಕೀಯ ಸಾಧನವೊಂದನ್ನು ಹೊರಚೆಲ್ಲುತ್ತದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಅವರು ನಡೆಸಿದ ವರ್ಣಭೇದ ನೀತಿಯ ವಿರುದ್ಧದ ರಾಜಕಾರಣದಲ್ಲಿ ಸು#ಟಗೊಳ್ಳುತ್ತದೆ. ಈ ಸತ್ಯಾಗ್ರಹದ ಪಾಠವನ್ನು ತಾನು ತನ್ನ ಮಡದಿಯಿಂದ ಪಡೆದುಕೊಂಡೆನೆಂದು ಗಾಂಧೀಜಿ ಹೇಳಿದ್ದಾರೆ. ಅದೇನೇ ಇದ್ದರೂ, ಸತ್ಯದ ಪ್ರತಿಪಾದನೆಯ ರಾಜಕೀಯ ಅಸ್ತ್ರವೇ ಸತ್ಯಾಗ್ರಹ ಎನ್ನುವುದು ಸ್ಪಷ್ಟ. ಇಲ್ಲಿ ಸತ್ಯ ಸತ್ಯವನ್ನು ಆಗ್ರಹಿಸುವುದು ಎಂದರೆ ಸತ್ಯವನ್ನು ಶೋಧಿಸುವುದು, ಖಚಿತಪಡಿಸಿಕೊಳ್ಳುವುದು ಮತ್ತು ಅದರ ಸಾಧನೆಗಾಗಿ ನಿರಂತರವಾಗಿ ಹೋರಾಡುವುದು ಎಂದಾಗುತ್ತದೆ. ಸತ್ಯದ ಚಲನಶೀಲತೆ ಈ ಶೋಧನೆಯನ್ನು ಮತ್ತು ಖಚಿತಪಡಿಸಿಕೊಳ್ಳುವಿಕೆಯನ್ನು ಒಂದು ಸಂಕೀರ್ಣ ವಿದ್ಯಮಾನವಾಗಿ ಪರಿವರ್ತಿಸುತ್ತದೆ. ಗಾಂಧೀಜಿಯವರಲ್ಲಿ ಸತ್ಯಾ ಗ್ರಹ ಆಂತರಿಕ ಶೋಧನೆಯ ನೈತಿಕ ಪ್ರಕ್ರಿಯೆಯೂ ಹೌದು ಅಂತೆಯೇ, ಬಹಿರಂಗ ಸಂಘರ್ಷದ ರಾಜಕೀಯ ಕ್ರಿಯೆಯೂ ಹೌದು. ಚಿಂತನೆ ಮತ್ತು ಕ್ರಿಯಾಚರಣೆಯ ಸಮಗ್ರತೆಯನ್ನು ಪ್ರತಿನಿಧಿಸುವ ಗಾಂಧೀಜಿಯವರ ತತ್ವಜ್ಞಾನದ ಮತ್ತೂಂದು ಅಂಶವನ್ನು ನಾವು ಅವರ ಸ್ವ ಹಾಗೂ ಸ್ವರಾಜ್ಯದ ಕಲ್ಪನೆಗಳಲ್ಲಿ ಕಂಡುಕೊಳ್ಳಬಹುದು. ಬಹುಶಃ, ಭಾರತೀಯ ಚಿಂತನ ಪರಂಪರೆಯಲ್ಲಿ ಸ್ವದ ಕುರಿತು ಅತ್ಯಂತ ಸಂಕೀರ್ಣವಾದ ಚಿಂತನೆ ಯನ್ನು ನಡೆಸಿದವರಲ್ಲಿ ಗಾಂಧೀಜಿ ಪ್ರಮುಖರು. ಸ್ವವನ್ನು ಅವರು ವೈಯಕ್ತಿಕ ನೆಲೆಯ/ ವ್ಯಕ್ತಿವಾದೀ ಸ್ವರೂಪದ ಅರ್ಥದಲ್ಲಷ್ಟೇ ಪರಿಭಾವಿಸುವುದಿಲ್ಲ. ಅವರಿಗೆ ಸ್ವ ಅಥವಾ ಸ್ವಂತಿಕೆ ಆಳವಾದ ನೈತಿಕತೆಯಿಂದ ರೂಪು ತಳೆಯುವಂತಹುದು.

ಅಂತೆಯೇ, ಸಾಮುದಾಯಿಕತೆಯಲ್ಲಿ ತಲ್ಲೀನವಾಗಿರುವಂತಹುದು. ಈ ಕಾರಣದಿಂದಲೇ, ಗಾಂಧೀಜಿ ಸ್ವಾತಂತ್ರÂವನ್ನು ಪಾಶ್ಚಿಮಾತ್ಯ ರಾಜಕೀಯ ಪರಿಭಾಷೆಯಿಂದ ಬೇರೆಯಾಗಿ ಕಾಣುತ್ತಾರೆ. ಅವರಿಗೆ ಸ್ವಾತಂತ್ರÂ ಸ್ವಾಭಿವ್ಯಕ್ತಿಯ ನೆಲೆ ಎನ್ನುವುದಕ್ಕಿಂತಲೂ ಸಂಯಮದ ಅಥವಾ ಸ್ವನಿಯಂತ್ರಣದ ಪ್ರತೀಕವಾಗಿದೆ. ಸ್ವದ ನಿಯಂತ್ರಣವನ್ನು ಸಾಧಿಸಲು ಸೂಕ್ತವಾದ ರಾಜಕೀಯ ಪರಿಪ್ರೇಕ್ಷ್ಯವನ್ನು ಗಾಂಧೀಜಿ ಸ್ವರಾಜ್ಯದಲ್ಲಿ ಕಾಣುತ್ತಾರೆ. 

ತತ್ವಜ್ಞಾನ ಮತ್ತು ರಾಜಕಾರಣದ ಪರಸ್ಪರಾವಲಂಬನೆಯ ಗಾಂಧೀಜಿಯವರ ಸಮಗ್ರ ದೃಷ್ಟಿಕೋನ ನಮ್ಮ ಕಾಲದ ಒಂದು ಭೀಕರ ಸಮಸ್ಯೆಗೆ ಪರಿಹಾರೋಪಾಯ ಸೂಚಿಸಬಲ್ಲದೇನೋ? ಮತಪಂಥಗಳ ನಡುವಿನ ವೈರುಧ್ಯಗಳಲ್ಲಿ ರೂಪುಗೊಳ್ಳುವ ಕೋಮುವಾದಿ ರಾಜಕಾರಣ ಮತ್ತು ಇದಕ್ಕೆ ಪ್ರತಿಯಾಗಿ ಧರ್ಮ ಮತ್ತು ರಾಜಕಾರಣಗಳ ಪ್ರತ್ಯೇಕತೆಯಲ್ಲಿ ಅಸ್ತಿತ್ವಕ್ಕೆ ಬಂದ ಸೆಕ್ಯುಲರ್‌ ರಾಜಕಾರಣಕ್ಕೆ ಪರ್ಯಾಯವಾಗಬಹುದಾದ ನೈತಿಕ ಯಾ ಧಾರ್ಮಿಕ ಆದರೆ ಪಂಥ ನಿರಪೇಕ್ಷ ದೃಷ್ಟಿಕೋನ ಗಾಂಧೀಜಿಯವರ ಸಮಗ್ರ ರಾಜಕೀಯ ತತ್ವಶಾಸ್ತ್ರದಲ್ಲಿ ಹುದುಗಿಕೊಂಡಿದೆ. ಅದು ಧರ್ಮ ಮತ್ತು ರಾಜಕಾರಣಗಳನ್ನು ಪ್ರತ್ಯೇಕ ಘಟಕಗಳೆಂದು ಭಾವಿಸದೆ ಮಾನವ ಸಮಾಜದ ಸಂಘಟನೆಯನ್ನು ಎರಡು ವಿಶಿಷ್ಟ ನೆಲೆಗಳಲ್ಲಿ ನಿರ್ವಹಿಸುವ ಒಂದೇ ವಿದ್ಯಮಾನದ 2 ಮುಖಗಳೆಂದು ತಿಳಿಯುತ್ತದೆ. ಗಾಂಧೀಜಿಯವರ ದೃಷ್ಟಿಯಲ್ಲಿ ಧರ್ಮ ಮಾನವ ಸಮುದಾ ಯದ ನೈತಿಕ ವ್ಯಕ್ತಿತ್ವವನ್ನು ಸಂಘಟಿಸಿದರೆ ರಾಜಕೀಯ ಮಾನವ ಸಮುದಾಯದ ಸಾಮಾಜಿಕ ಬದುಕನ್ನು ಸಂಘಟಿಸುತ್ತದೆ. ಅಂತೆಯೇ, ಧರ್ಮ ಒಳ್ಳೆಯದನ್ನು ಪ್ರಚೋದಿಸುವ ವಿದ್ಯಮಾನ ವಾದರೆ ರಾಜಕೀಯ ಕೆಟ್ಟದ್ದನ್ನು ವಿರೋಧಿಸುವ ಕ್ರಿಯಾಚರಣೆೆ. ಹೀಗೆ, ಧರ್ಮವನ್ನು ಸಾರ್ವಕಾಲಿಕ ರಾಜಕಾರಣವಾಗಿ ಹಾಗೂ ರಾಜಕಾರಣವನ್ನು ತತ್ಕಾಲೀನ ಧರ್ಮವಾಗಿ ಪರಿಭಾವಿಸುತ್ತಾರೆ. ಹೀಗೆ ಧರ್ಮ ಮತ್ತು ರಾಜಕಾರಣಗಳು ಒಂದನ್ನೊಂದು ಅವಲಂಬಿಸಿಕೊಂಡಿರುವ ಒಂದೇ ವಿದ್ಯಮಾನದ ಎರಡು ಕ್ರಿಯಾಚರಣೆಗಳಾಗಿ ಗಾಂಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಹುಶಃ, ಭಾರತದ ಸಮಕಾಲೀನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ವಿಪ್ಲವದ ಪರಿಹಾರಕ್ಕೆ ಗಾಂಧೀಜಿಯವರ ಈ ಸಮಗ್ರವಾದ ರಾಜಕೀಯ ತತ್ವಜ್ಞಾನ ಪ್ರತಿನಿಧಿಸುವ ಹೊಸ ಬಗೆಯ ಸೆಕ್ಯುಲರ್‌ ಚಿಂತನೆಯ ಸ್ಪರ್ಶದ ಅಗತ್ಯವಿದೆ.

– ರಾಜಾರಾಮ್‌ ತೋಳ್ಪಾಡಿ

ಟಾಪ್ ನ್ಯೂಸ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.