ಕೆಟ್ಟದ್ದನ್ನು ನೋಡಬಹುದು, ಕೇಳಬಹುದು!
Team Udayavani, Nov 3, 2017, 7:00 PM IST
“ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಹೇಳಬಾರದು..! “ಹಾಲು ತುಪ್ಪ’ ಚಿತ್ರದ ಪೋಸ್ಟರ್ನಲ್ಲಿ ಈ ಮೇಲಿನ ಸಾಲುಗಳಿಗೆ ಅನ್ವಯವಾಗುವಂತೆ, ಕಣ್ಣು ಮುಚ್ಚಿಕೊಂಡಿರುವ ಚಿತ್ರದ ನಾಯಕನೊಂದಿಗೆ ಹಿರಿಯ ಕಲಾವಿದರಾದ ಗಡ್ಡಪ್ಪ ಹಾಗು ಸೆಂಚುರಿಗೌಡ ಕಿವಿ ಮತ್ತು ಬಾಯಿ ಮುಚ್ಚಿಕೊಂಡು ಫೋಸ್ವೊಂದನ್ನು ಕೊಟ್ಟಿದ್ದಾರೆ. ಹೊರಗಡೆ ಈ ಪೋಸ್ಟರ್ ನೋಡಿ, ಸಿನಿಮಾ ನೋಡಿದವರಿಗೆ ಪೋಸ್ಟರ್ನಲ್ಲಿರುವ ತಾತ್ಪರ್ಯಕ್ಕೂ ಚಿತ್ರದೊಳಗಿರುವ ವಿಷಯಕ್ಕೂ ಸಿಕ್ಕಾಪಟ್ಟೆ “ಉಲ್ಟಾ’ ಅನ್ನೋದು ಗೊತ್ತಾಗುತ್ತೆ.
ಇಲ್ಲಿ ಎಗ್ಗಿಲ್ಲದೆ ಆಗಾಗ ಅದೆಲ್ಲವನ್ನೂ ನೋಡಬಹುದು, ಅವೆಲ್ಲವನ್ನು ಕೇಳಬಹುದು ಮತ್ತೆ ಅದನ್ನೆಲ್ಲಾ ಹೇಳಬಹುದು! ಇಲ್ಲಿ ಅದೆಲ್ಲ ನೋಡಿ, ಕೇಳಿ, ಹೇಳುವುದು ಏನು ಎಂಬ ಅನುಮಾನವಿದ್ದರೆ, “ಹಾಲು ತುಪ್ಪ’ ನೋಡಿದರೆ ಆ “ಅನುಭವ’ ತಾನೇ ಗೊತ್ತಾಗುತ್ತೆ. ಇದೊಂದು ಹಳ್ಳಿ ಸೊಗಡಿನ ಚಿತ್ರ. ಆದರೆ, ಅಂತಹ ಹಳ್ಳಿ ಸೊಗಡಿನ ಚಿತ್ರದಲ್ಲಿ ಏನಿರಬೇಕೋ ಆ ಸ್ಪಷ್ಟತೆ ಇಲ್ಲಿಲ್ಲ, ಏನಿರಬಾರದೋ ಅದೇ ಹೇರಳವಾಗಿದೆ. ಒಂದು ಸಿನಿಮಾದಲ್ಲಿ ಮನರಂಜನೆ ಇರಬೇಕು ನಿಜ. ಅದಿಲ್ಲಿ ಅತಿಯಾಗಿರುವುದರಿಂದಲೋ ಏನೋ, ನೋಡುಗ ಅರಗಿಸಿಕೊಳ್ಳೋದು ತುಸು ಕಷ್ಟ.
ಸಿನಿಮಾ ಶುರುವಾದಾಗ ಏನಾಗುತ್ತಿದೆ ಅಂತ ತಿಳಿದುಕೊಳ್ಳೋಕೆ ಮುಕ್ಕಾಲು ತಾಸು ಬೇಕು. ಅಲ್ಲಿಯವರೆಗೆ ಕಥೆಗೆ ತಡಬುಡವೇ ಇಲ್ಲ. ನಿರ್ದೇಶಕರ ಕಲ್ಪನೆಯ ಪಾತ್ರಗಳಿಗೆ ಲಂಗು-ಲಗಾಮು ಇಲ್ಲದಿರುವುದೇ ಚಿತ್ರದ ಓಗಕ್ಕೆ ಅರ್ಥವಿಲ್ಲದಂತಾಗಿದೆ. ಚಿತ್ರದ ಮೊದಲರ್ಧ ಬರೀ ಓತ್ಲ ಹೊಡೆಯೋ ಪಾತ್ರಗಳಿಗೇ ಹೆಚ್ಚು ಆದ್ಯತೆ ಕೊಡಲಾಗಿದೆ. ಡಬ್ಬಲ್ ಮೀನಿಂಗ್ ಮಾತುಗಳಿಗಂತೂ ಕಡಿವಾಣವಿಲ್ಲ. ಕೆಲ ದೃಶ್ಯಗಳಿಗೆ ಕತ್ತರಿಯ ಅಗತ್ಯವಿತ್ತು. ಸುಖಾ ಸುಮ್ಮನೆ ಕಾಣಿಸಿಕೊಳ್ಳುವ ಹಾಸ್ಯ ದೃಶ್ಯಗಳು ಕೆಲವೊಮ್ಮೆ ಅಪಹಾಸ್ಯಕ್ಕೀಡಾಗುತ್ತವೆ.
ಆಗಾಗ ಆ ಹಿರಿಯ ಕಲಾವಿದರ ಬಾಯಲ್ಲಿ ಹೊರ ಬೀಳುವ ದ್ವಂದಾರ್ಥದ ಮಾತುಗಳು ಬೇಕಿತ್ತಾ ಎನಿಸುವುದುಂಟು. ಆ ಹಿರಿಯ ಕಲಾವಿದರನ್ನೆಲ್ಲಾ ಕಂಪ್ಯೂಟರ್ “ಗ್ರಾಮರ್’ ಹೇಳಿಕೊಡಲು ಬರುವ ಆ “ಗ್ಲಾಮರ್’ ಟೀಚರಮ್ಮನ ಹಿಂದೆ ಬೀಳುವಂತೆ ಮಾಡುವ ದೃಶ್ಯಗಳು ಒಂದಷ್ಟು ಕಿರಿಕಿರಿ ಎನಿಸುವುದುಂಟು. ಇಷ್ಟೆಲ್ಲಾ ಬೇಡಗಳ ನಡುವೆ, ಚಿತ್ರದಲ್ಲೊಂದು ಬೇಕೆನ್ನುವ ಗುಣವೂ ಇದೆ. ಅದೊಂದೇ ಕಾರಣಕ್ಕೆ “ಹಾಲು ತುಪ್ಪ’ವನ್ನು ಮೆಚ್ಚಬೇಕೇ ಹೊರತು, ಇನ್ಯಾವ ಕಾರಣಕ್ಕೂ ಅಲ್ಲ.
ಆದರೆ, ಆ “ಬೇಕೆನ್ನುವ ಗುಣ’ ಯಾವುದು ಎಂಬ ಕುತೂಹಲವಿದ್ದರೆ, “ಹಾಲು ತುಪ್ಪ’ ಸವಿಯಲ್ಲಡ್ಡಿಯಿಲ್ಲ. ಇಲ್ಲಿ ಕಥೆಗೆ ಒಂದು ಚೌಕಟ್ಟು ಇಲ್ಲ. ಎಲ್ಲವೂ ಚೌಕಟ್ಟು ಮೀರಿರುವುದರಿಂದ ನೋಡುಗನ ಹಿಡಿತಕ್ಕೆ ಯಾವುದೂ ಸುಲಭವಾಗಿ ಸಿಗೋದಿಲ್ಲ. ಆದರೂ, ಮಾನವೀಯತೆ ಸಾರುವ, ಮನುಕುಲ ತಿದ್ದಿಕೊಳ್ಳುವ ಒಂದು ಸಣ್ಣ ಸಂದೇಶವಿದೆ. ಅದೊಂದೇ ಚಿತ್ರದ ಜೀವಾಳ. ನಮ್ಮ ಸುತ್ತಲು ನಡೆಯೋ ನೈಜ ಸನ್ನಿವೇಶದಂತೆಯೇ ಕಾಣಬರುವ ಕೆಲ ದೃಶ್ಯಗಳಿಂದಾಗಿ ದ್ವಿತಿಯಾರ್ಧ ನೋಡುಗನನ್ನು ಕೂರಿಸುತ್ತದೆ.
ಉಳಿದಂತೆ ಸಾಕಷ್ಟು ಎಡವಟ್ಟುಗಳಿದ್ದರೂ, ಅವೆಲ್ಲವನ್ನೂ ತೆರೆಯ ಮೇಲೆ ಬರುವ ಒಂದು ಹಾಡು ಪಕ್ಕಕ್ಕಿರಿಸುತ್ತದೆ. ಉಳಿದಂತೆ ಆ ಹಳ್ಳಿಯ ಪರಿಸರ, ಅಲ್ಲಿನ ಭಾಷೆ, ಆ ಜನರ ಗುಣ, ದ್ವೇಷ, ಅಸೂಯೆ ಅದರ ನಡುವಿನ ಪ್ರೀತಿ, ಪ್ರೇಮ, ತಲ್ಲಣ ಸಿನಿಮಾದ ವೇಗಕ್ಕೆ ಹೆಗಲು ಕೊಟ್ಟಿವೆ. ಶಿವನಹಳ್ಳಿ ಹಾಗೂ ಪಾರ್ವತಿಪುರ ಜನರ ನಡುವೆ ಹಳೇ ದ್ವೇಷ. ಆದರೆ, ಆ ಊರಿನ ಹುಡುಗಿ, ಈ ಊರಿನ ಹುಡುಗನ ನಡುವೆ ಪ್ರೀತಿ ಚಿಗುರಿ, ಅದು ಎರಡು ಗ್ರಾಮಗಳ ಮಧ್ಯೆ ಮತ್ತಷ್ಟು ವಿರೋಧಕ್ಕೆ ಕಾರಣವಾಗುತ್ತೆ.
ಈ ನಡುವೆ ಒಂದು ಊರಿನ ಹಿರಿಯ ಜೀವವನ್ನು ಅಪಾರವಾಗಿ ಮೆಚ್ಚಿಕೊಳ್ಳುವ ಆ ಊರ ಜನ, ಆ ಹಿರಿಯ ಜೀವಕ್ಕೆ ಒಂದು ಖಾಯಿಲೆ ಇದೆ ಅಂತ ಗೊತ್ತಾದಾಗ, ದೂರ ಸರಿಯುವ ಮೂಲಕ ಆ ಮನಸ್ಸಿಗೆ ನೋವುಂಟು ಮಾಡುತ್ತಾರೆ. ಅಂತಹ ಜನರ ಮನಸ್ಥಿತಿ ಅರಿತು ಊರಾಚೆ ಹೋಗುವ ಆ ಹಿರಿಯಜ್ಜನಿಗೆ ನಿಯಮ ಮೀರಿ, ಪಾರ್ವತಿಪುರಕ್ಕೆ ಹೋಗಿದ್ದಕ್ಕೆ ಊರ ಪಂಚಾಯ್ತಿಯಿಂದ ಒಂಭತ್ತು ತಿಂಗಳು ಬಹಿಷ್ಕಾರ ಹಾಕುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ. ಸೆಂಚುರಿ ಗೌಡರ ಪಾತ್ರದಲ್ಲಿ ಮತ್ತದೇ ಮಾತುಗಳನ್ನು ಬಿಟ್ಟರೆ, ಬೇರೇನನ್ನೂ ನಿರೀಕ್ಷಿಸುವಂತಿಲ್ಲ.
ಗಡ್ಡಪ್ಪ ಪಾತ್ರದಲ್ಲಿ ಗಟ್ಟಿತನವಿದೆ. ಅಲ್ಲಲ್ಲಿ ಕಣ್ಣು ಒದ್ದೆ ಮಾಡುವಲ್ಲಿ ಯಶಸ್ವಿ. ಪವನ್ ಸೂರ್ಯ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಸಂಹಿತಾ ವಿನ್ಯಾ ಗಮನಸೆಳೆಯೋದು ಕಷ್ಟ. ಹೊನ್ನವಳ್ಳಿ ಕೃಷ್ಣ, ಜಯರಾಮ್ ಆಕರ್ಷಿಸಿದರೆ, ನಾಗರಾಜ್ಕೋಟೆ ಮತ್ತಿತರರ ಪಾತ್ರ ಅತಿಯೆನಿಸುತ್ತೆ. ಉಳಿದಂತೆ ಕಾಣಸಿಗುವ ಪಾತ್ರಗಳ್ಯಾವೂ ಗಮನಸೆಳೆಯಲ್ಲ. ಆರ್.ವಿ.ನಾಗೇಶ್ವರರಾವ್ ಕ್ಯಾಮೆರಾದಲ್ಲಿ ಹಳ್ಳಿಯ ಸೊಬಗಿದೆ. ಇಂದ್ರಸೇನ ಸಂಗೀತದಲ್ಲಿ ಹಾಡೊಂದು ಗುನುಗುವಂತಿದೆ.
ಚಿತ್ರ: ಹಾಲು ತುಪ್ಪ
ನಿರ್ಮಾಣ: ದೊಡ್ಮನೆ ವೆಂಕಟೇಶ್
ನಿರ್ದೇಶನ: ಶಶಾಂಕ್ ರಾಜ್
ತಾರಾಗಣ: ಪವನ್ ಸೂರ್ಯ, ಸಂಹಿತಾ ವಿನ್ಯಾ, ಹೊನ್ನವಳ್ಳಿ ಕೃಷ್ಣ, ಸೆಂಚುರಿ ಗೌಡ, ಗಡ್ಡಪ್ಪ, ಬಸವರಾಜ್ ಕಟ್ಟಿ ಮುಂತಾದವರು
* ವಿಜಯ್ ಭರಮಸಾಗರ