ತಪ್ಪಿತಸ್ಥರಿಗೆ ಎಚ್ಚರಿಕೆ ಕೊಡುವ ಯಮ-ಮಾಂಡವ್ಯರು
Team Udayavani, Jan 4, 2018, 11:35 AM IST
ತಪ್ಪುಗಳನ್ನು ಗುಟ್ಟಾಗಿ ಮಾಡಿದರೆ ಬಚಾವಾಗಬಹುದು ಎಂಬ ತಪ್ಪು ಕಲ್ಪನೆ ಇದೆ. ಇದು ಅಸಾಧ್ಯ, ಗುಟ್ಟಾಗಿ ಯಾವುದನ್ನೂ ಮಾಡಲು ಆಗದು, ಅದು ಭಗವಂತನಿಗೆ ತಿಳಿಯುತ್ತದೆ ಎಂದವರು ಕನಕದಾಸರು. ಅರಿವಿಲ್ಲದೆಯೂ ಬೆಂಕಿಗೆ ಕೈ ಹಾಕಿದರೆ ರಿಯಾಯಿತಿ ತೋರುತ್ತದೆಯೆ? ಹಾಗೆ ತಪ್ಪಿಗೆ ಶಿಕ್ಷೆ ಇರುತ್ತದೆ ಮತ್ತು ಅನ್ಯಾಯವಾಗಿ ಶಿಕ್ಷೆ ಕೊಟ್ಟರೆ ಅದೂ ಮುಳುವಾಗುತ್ತದೆ ಎಂಬ ಉದಾಹರಣೆ ಮಾಂಡವ್ಯ ಋಷಿ ಮತ್ತು ಯಮದೇವನ ವೃತ್ತಾಂತದಲ್ಲಿದೆ. ಇದು ಎಲ್ಲ ಕಾಲದಲ್ಲಿ ಎಲ್ಲರಿಗೂ ಉತ್ತಮ ಪಾಠ. ಇಲ್ಲಿ ಕೇವಲ ಮಾಂಡವ್ಯರ ಸ್ಮರಣೆ ಮಾತ್ರದಿಂದ ಕಥಾಸಂದೇಶ ನೀಡುತ್ತಾರೆ ರಾಜರಾಜೇಶ್ವರಯತಿಗಳು, “ಮಂಗಲಾಷ್ಟಕ’ ಮೂಲಕ.
ಮಾಂಡವ್ಯೋ ಜಮದಗ್ನಿ ಗೌತಮ ಭರದ್ವಾಜಾದಯಸ್ತಾಪಸಾಃ
ಶ್ರೀಮದ್ವಿಷ್ಣುಪದಾಂಬು ಜೈಕಶರಣಾಃ ಕುರ್ವಂತು ನೋ ಮಂಗಲಮ್||
ಮಾಂಡವ್ಯ ಋಷಿಯ ಕಥೆಯನ್ನು ಕೇಳಿದರೆ ಈಗಿನ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ತಮ್ಮ ನಡವಳಿಕೆಯಲ್ಲಿ ತಪ್ಪಿದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕು. ಮಾಂಡವ್ಯರು ಒಮ್ಮೆ ಆಶ್ರಮದಲ್ಲಿ ತಪಸ್ಸಿಗೆ ಕುಳಿತಾಗ ಕಳ್ಳರು ಬಂದರು, ರಾಜಭಟರು ಬೆನ್ನಟ್ಟಿದಾಗ ಕದ್ದ ಮಾಲನ್ನು ಆಶ್ರಮದಲ್ಲಿರಿಸಿದರು. ಮಾಂಡವ್ಯ ಧ್ಯಾನದಲ್ಲಿದ್ದ ಕಾರಣ ರಾಜಭಟರಿಗೆ ಏನನ್ನೂ ಹೇಳಲಿಲ್ಲ. ಭಟರಿಗೆ ಕದ್ದ ಮಾಲು ಸಿಕ್ಕಿತು. ಈತನ ಮೇಲೂ ಕಳ್ಳತನದ ಆರೋಪ ಬಂತು. ರಾಜ ಶೂಲಕ್ಕೇರಿಸಲು ಆಜ್ಞಾಪಿಸಿದ. ಉಳಿದ ಕಳ್ಳರು ಸತ್ತರೂ ಮಾಂಡವ್ಯ ಮಾತ್ರ ಶೂಲದ ಮೊನೆಯಲ್ಲಿ ನೇತಾಡುತ್ತ ಧ್ಯಾನಸ್ಥನಾಗಿದ್ದ. ರಾಜನಿಗೆ ಸುದ್ದಿ ಹೋಯಿತು. ತಪ್ಪಿನ ಅರಿವಾಗಿ ಕೆಳಗಿಳಿಸಿದ. ಶೂಲದ ಚೂಪೊಂದು ತುಂಡಾಗಿ ಆತನ ದೇಹದಲ್ಲಿ ಉಳಿಯಿತು. ಇದರಿಂದಾಗಿ ಅಣಿ ಮಾಂಡವ್ಯ, ಆಣಿ ಮಾಂಡವ್ಯನೆಂದು ಪ್ರಸಿದ್ಧನಾದ. ಒಮ್ಮೆ ಯಮನ ಬಳಿ ಹೋಗಿ ಯಾವ ತಪ್ಪಿಗಾಗಿ ಈ ಶಿಕ್ಷೆಯಾಯಿತು ಎಂದು ಪ್ರಶ್ನಿಸಿದ.
ಬಾಲಕನಾಗಿದ್ದಾಗ ಚಿಟ್ಟೆ ಮರಿಗಳಿಗೆ ಮುಳ್ಳು ಚುಚ್ಚಿ ನೋಯಿಸಿದ್ದಕ್ಕೆ ಈ ಶಿಕ್ಷೆ ಅನುಭವಿಸುವಂತಾಯಿತು ಎಂದು ಯಮ ಉತ್ತರಿಸಿದ. “12 ವರ್ಷದೊಳಗೆ ಮಾಡಿದ ತಪ್ಪಿಗೆ ಈ ಶಿಕ್ಷೆಯೇ? ಇದು ಅರಿವು ಮೂಡದ ಕಾಲ. ಇಷ್ಟು ಚಿಕ್ಕ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟೆಯಲ್ಲ? ನಿನಗೂ ಒಂದು ಶಿಕ್ಷೆಯಾಗಲಿ. ಭೂಮಿಯಲ್ಲಿ ದಾಸಿಪುತ್ರನಾಗಿ ಹುಟ್ಟು’ ಎಂದು ಮಾಂಡವ್ಯ ಶಾಪ ಕೊಟ್ಟ. ಯಮ ಈ ಕಾರಣಕ್ಕಾಗಿ ವಿದುರನಾಗಿ ಜನಿಸಿದ. ಇಷ್ಟೊಂದು ಸಣ್ಣ ತಪ್ಪಿಗೆ ಯಮ ಒಂದು ಜನ್ಮವನ್ನೇ ಕೊಡಬೇಕಾಯಿತು. ಮಾಂಡವ್ಯರು ತಾನಿತ್ತ ಶಾಪಕ್ಕಾಗಿ ಗಳಿಸಿದ ಪುಣ್ಯವನ್ನು ಕಳೆದುಕೊಳ್ಳಬೇಕಾಯಿತು. ನಿತ್ಯವೂ ನಾವು ಎಷ್ಟೊಂದು ತಪ್ಪುಗಳನ್ನು ಮಾಡುತ್ತಿದ್ದೇವೆ? ಎಷ್ಟು ಅನ್ಯಾಯದ ತೀರ್ಮಾನ ಕೈಗೊಳ್ಳುತ್ತಿದ್ದೇವೆ? ನಮಗೆಲ್ಲರಿಗೂ ಉತ್ತಮ ಪಾಠ ಮಾಂಡವ್ಯ- ಯಮನಿಂದ ಸಿಗುತ್ತದೆ.
ಋಚೀಕ ಋಷಿ ಮತ್ತು ಸತ್ಯವತಿ ದಂಪತಿ. ಋಚೀಕ ಪುತ್ರ ಸಂತಾನಕ್ಕಾಗಿ ಯಾಗ ಮಾಡಿಸಿದ. ಆಗ ತಯಾರಿಸಿದ ಎರಡು ಚರುಗಳಲ್ಲಿ ಒಂದನ್ನು ತನ್ನ ಪತ್ನಿ ಸತ್ಯವತಿಗೆ, ಇನ್ನೊಂದನ್ನು ಅತ್ತೆಗೆಂದು ಕೊಟ್ಟ. ತನಗೆ ಬ್ರಹ್ಮರ್ಷಿ ಮಗ, ಅತ್ತೆಗೆ ಕ್ಷಾತ್ರತೇಜದ ಮಗ ಹುಟ್ಟಬೇಕೆಂಬ ಸಂಕಲ್ಪವಿತ್ತು. ಅತ್ತೆ ಮತ್ತು ಪತ್ನಿ ಚರುವನ್ನು ಅದಲು ಬದಲು ಮಾಡಿಕೊಂಡರು. ಇದರ ಪರಿಣಾಮ ಅತ್ತೆಗೆ ವಿಶ್ವಾಮಿತ್ರ ಜನಿಸಿದ. ಅದಲು ಬದಲು ಮಾಡಿಕೊಂಡದ್ದು ಗೊತ್ತಾದಾಗ ಋಚೀಕ ಪರಿಹಾರ ಕೊಟ್ಟ. ಆದರೂ ಮಗನ ಮಗ ಕ್ಷಾತ್ರ ತೇಜಸ್ಸಿನವ ಜನಿಸುತ್ತಾನೆಂದ. ಪತ್ನಿಗೆ ಬ್ರಹ್ಮಜ್ಞಾನಿ ಜಮದಗ್ನಿ ಜನಿಸಿದ, ಜಮದಗ್ನಿಗೆ ಕ್ಷಾತ್ರವಂತನಾದ ಪರಶುರಾಮ ಜನಿಸಿದ.
ಗೌತಮರು ವೇದವ್ಯಾಸರ ಹುಟ್ಟಿಗೆ ಕಾರಣರಾಗುತ್ತಾರೆ. ಬೇರೆಡೆ ಕ್ಷಾಮವಿದ್ದ ಕಾರಣ ಕ್ಷಾಮವಿಲ್ಲದ ಗೌತಮ ಋಷಿಗಳ ಆಶ್ರಮದಲ್ಲಿ ಇತರ ವೈದಿಕರು ಬಂದು 12 ವರ್ಷ ವಾಸಿಸುತ್ತಾರೆ. ಕ್ಷಾಮ ಹೋದ ಬಳಿಕ ಹೊರಡಲು ಅನುವಾದರು. ಗೌತಮರು ಬೇಡ, ಇಲ್ಲೇ ಇರಿ ಎಂದರು. ತಾವು ಹೋಗಬೇಕೆಂದು ವೈದಿಕರು ಒಂದು ಉಪಾಯ ಹೂಡಿದರು. ಕೃತಕ ಹಸುವೊಂದನ್ನು ಸೃಷ್ಟಿಸಿ ಅದನ್ನು ಗೌತಮರು ಮುಟ್ಟಿದಾಕ್ಷಣ ಬಿದ್ದು ಸಾಯುವಂತೆ ಮಾಡಿದರು. ಗೋಹತ್ಯೆ ನಡೆದ ಕಾರಣ ತಾವಿನ್ನು ಇರುವುದಿಲ್ಲ ಎಂದು ವೈದಿಕರು ಹೊರಟರು. ಇದು ಗೌತಮರಿಗೆ ಗೊತ್ತಾಗಿ ವೈದಿಕರಿಗೆ ಜ್ಞಾನವೇ ಲೋಪವಾಗಿ ಹೋಗಲಿ ಎಂದು ಶಾಪವಿತ್ತರು. ವೈದಿಕರೆಲ್ಲರಿಗೂ ಜ್ಞಾnನ ಲೋಪವಾಯಿತು. ಇದು ಮತ್ತೆ ಉದಿಸಬೇಕಾದರೆ ವೇದವ್ಯಾಸರು ಉದಿಸಬೇಕಾಯಿತು. ವೇದವ್ಯಾಸರು ಮತ್ತೆ ಕಳೆದು ಹೋದ ಜ್ಞಾನವನ್ನು ವೇದ, ಉಪನಿಷತ್ತುಗಳು, ಪುರಾಣಗಳಿಂದ ಮತ್ತೆ ಸಿಗುವಂತೆ ಮಾಡಿದರು. ಅದೇ ಹಸುವನ್ನು ಗಂಗೆಯನ್ನು ಹರಿಸುವ ಮೂಲಕ ಮತ್ತೆ ಬದುಕಿಸಿದರು ಗೌತಮರು, ಆ ಹರಿಯುವಿಕೆಯೇ ಗೋದಾವರಿ ನದಿಯಾಯಿತು.
ಭರದ್ವಾಜರು ಚಂದ್ರವಂಶಜ ರಾಜ. ಅನಂತರ ಅವರು ಋಷಿಗಳಾದರು. ಇವರು ಗೋತ್ರಪ್ರವರ್ತಕರು. ಹೀಗೆ ರಾಜರ್ಷಿಗಳು, ಬ್ರಹ್ಮರ್ಷಿಗಳೇ ದೊಡ್ಡವರು. ಇವರಿಂದಲೂ ವಂದಿತನಾಗುವ ಭಗವಂತ ಇನ್ನೆಷ್ಟು ದೊಡ್ಡವನು? ಇಂತಹವರು ನಮಗೆ ಮಂಗಲವನ್ನುಂಟುಮಾಡಲೆಂದು ರಾಜರಾಜೇಶ್ವರರು ಮಂಗಲಾಷ್ಟಕದಲ್ಲಿ ಪ್ರಾರ್ಥಿಸಿದ್ದಾರೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ