ಬಿಎಸ್‌ವೈ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತೇವೆ


Team Udayavani, Jan 26, 2018, 4:49 AM IST

26-21.jpg

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರು ಕಮಲ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಭರವಸೆಯಲ್ಲಿದ್ದಾರೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ. “ಹಿಂದುಸ್ತಾನ್‌ ಟೈಮ್ಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಪಕ್ಷ 2019ರ ಚುನಾವಣೆಯನ್ನು ಎದುರಿಸಲಿರುವ ಪರಿ ಮತ್ತು ಮೋದಿ ಆಡಳಿತದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ…

19 ರಾಜ್ಯಗಳಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ  ಈ ಸಂಖ್ಯೆ 21 ಅಥವಾ 22ಕ್ಕೆ ಏರಬಹುದು. ಹೀಗಾಗಿ 2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಲು ಉಳಿದೆಲ್ಲ ಪಕ್ಷಗಳು ಕೈಜೋಡಿಸಬಹುದು ಅನಿಸುತ್ತದಾ?
ಈಗಲೇ ಆ ಬಗ್ಗೆ ಭವಿಷ್ಯ ನುಡಿಯುವುದು ಸೂಕ್ತವಲ್ಲ, ಆದರೂ  ಇದು ಈಗಲ್ಲದಿದ್ದರೆ ನಾಳೆ  ಆಗುವಂಥದ್ದೆ. ನಾವು ವಿಸ್ತರಣೆಗೆ ಮುಂದಾಗುತ್ತೀವಿ ಎಂದಾದರೆ, ಸಹಜವಾಗಿಯೇ ಪ್ರತಿ ರಾಜ್ಯದಲ್ಲೂ ಹೋರಾಡಬೇಕಾಗುತ್ತದೆ. 2014ರಲ್ಲಿ ನಮ್ಮವು ಆರು ಸರ್ಕಾರಗಳಿದ್ದವು, ಒಂದು ವೇಳೆ 2019ರಲ್ಲಿ 22 ಸರ್ಕಾರಗಳೊಂದಿಗೆ ಅಖಾಡಕ್ಕಿಳಿಯುತ್ತೇವೆ ಎಂದರೆ, ಅವಿಷ್ಟೂ ರಾಜ್ಯಗಳಲ್ಲೂ ಹೋರಾಡಲೇಬೇಕಾಗುತ್ತದೆ.  

ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರುವುದು ಅವಶ್ಯಕವಲ್ಲವೇ? 
ಹೌದು, ಆದರೆ ಅದು ನಮ್ಮ ಜವಾಬ್ದಾರಿಯಲ್ಲ. 

ಆದರೂ, ಹೊಸ ತಲೆಮಾರಿನ ಅಪೋಸಿಷನ್‌ ಎದುರಾಗಬಹುದು ಎಂದನಿಸುತ್ತಾ?
ಇದು ಸಹಜ ಪ್ರಕ್ರಿಯೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಿಜೆಪಿ ಹುಟ್ಟಿಕೊಂಡಿತಲ್ಲ. ಅಂತೆಯೇ ಅಪೋಸಿಷನ್‌ ತಲೆ ಎತ್ತುತ್ತದೆ.

ಉತ್ತರ ಪ್ರದೇಶ ಮತ್ತು ಇತರೆ ಭಾಗಗಳಲ್ಲಿನ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಾ? 
ಉಳಿಸಿಕೊಳ್ಳುತ್ತೇವೆ ಎನ್ನುವ ಆತ್ಮವಿಶ್ವಾಸ ನಮಗಿದೆ. ಇಷ್ಟೊಂದು ಬೃಹತ್‌ ದೇಶದಲ್ಲಿ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಯಾವುದನ್ನೂ ಊಹೆಯ ಮೇಲೆ ಹೇಳುವುದು ಸರಿಯಲ್ಲ. ಆದರೂ ಒಂದು ವೇಳೆ ಇವತ್ತು ಚುನಾವಣೆಯೇನಾದರೂ ನಡೆದರೆ, ಮತ್ತೆ ನಾವು ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. 

ಗುಜರಾತ್‌ ಚುನಾವಣೆಯ ನಂತರ ಕಾಂಗ್ರೆಸ್‌ ಬಹಳ ಲವಲವಿಕೆಯಿಂದ ಇದೆಯಲ್ಲ…
ಕರ್ನಾಟಕ ಚುನಾವಣೆ  ನಂತರ ಏನಾಗುತ್ತೋ ನೋಡೋಣ.

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ದುರ್ಬಲ ವಾಗುತ್ತಿರುವ ಸಂಕೇತ ಕಳುಹಿಸುತ್ತಿವೆ. ರಜನೀಕಾಂತ್‌ಅವರದ್ದು ಹೊಸ ಪ್ರವೇಶ. ಇದನ್ನೆಲ್ಲ ಹೇಗೆ ಅವಲೋಕಿಸುತ್ತೀರಿ?
ನಾವು ಇದನ್ನೆಲ್ಲ ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಸರಿಯಾದ ಸಮಯದಲ್ಲಿ ನಮ್ಮ ರಾಜ್ಯ ಘಟಕದೊಂದಿಗೆ ಚರ್ಚಿಸುತ್ತೇವೆ. 

ಒಟ್ಟಾರೆಯಾಗಿ, 2019ರ  ಚುನಾವಣೆಯ ಬಗ್ಗೆ ಕಂಫ‌ರ್ಟೆಬಲ್‌ ಆಗಿದ್ದೀರಾ?
ನಿಸ್ಸಂಶಯವಾಗಿ! ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರತಿಯೊಬ್ಬ ನಾಗರಿಕನಲ್ಲೂ ಭವಿಷ್ಯದ ಬಗ್ಗೆ ಶಂಕೆಯಿತ್ತು.  ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಯುವಕರಿಗೆ ಗೊತ್ತಿರಲಿಲ್ಲ. ಮಹಿಳೆಯರಿಗೆ ಸುರಕ್ಷತೆಯಿರಲಿಲ್ಲ. ನಮ್ಮ ಗಡಿಗಳು ಭದ್ರವಾಗಿರಲಿಲ್ಲ. ಜಗತ್ತಿನ ಎದುರು ದೇಶದ ನಿಲುವು ಕುಸಿದಿತ್ತು. ಸರ್ಕಾರದ ಮಟ್ಟದಲ್ಲಿ ನೀತಿ ನಿರೂಪಣೆಗೆ ಗರ ಬಡಿದಿತ್ತು. ಯುಪಿಎ ಸರ್ಕಾರದ ಕೊನೆಯ ಆರು ವರ್ಷಗಳಲ್ಲಿ ಸುಮಾರು 8 ಸಂದರ್ಭಗಳಲ್ಲಿ ಬೆಳವಣಿಗೆ ದರ 5.7 ಪ್ರತಿಶತ ಅಥವಾ ಅದಕ್ಕಿಂತಲೂ ಕೆಳಕ್ಕೆ ಕುಸಿದಿತ್ತು. ಒಂದು ಸಮಯದಲ್ಲಂತೂ ಭಾರತವನ್ನು ಜಾಗತಿಕ ಆರ್ಥಿಕತೆಯ  ಹೊಸ ಗುಂಪಿನಲ್ಲಿ ಸೇರಿಸಲಾಯಿತು. ಆದರೆ ಅದು ಜಿ-7, ಜಿ-8 ಅಥವಾ ಜಿ-20 ರೀತಿಯ ಗುಂಪಾಗಿರಲಿಲ್ಲ. ಆ ಗುಂಪಿನ ಹೆಸರು “ಫ್ರಾಜೈಲ್‌ 5′(ದುರ್ಬಲ 5) ಎಂದಾಗಿತ್ತು!  ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಇಡೀ ಜಗತ್ತೇ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇದಕ್ಕೆ ಕಾರಣ ಮೋದೀಜಿ. ಹಣಕಾಸಿನ ಕೊರತೆಯಿರಲಿ, ವ್ಯಾಪಾರ ಕೊರತೆಯಿರಲಿ ಅಥವಾ ಹಣದುಬ್ಬರವಾಗಿರಲಿ ಮೋದಿಯವರ ನಾಯಕತ್ವದ ಸರ್ಕಾರದಲ್ಲಿ ಮತ್ತು ಅರುಣ್‌ ಜೇಟ್ಲಿಯವರ ನಾಯಕತ್ವದ ವಿತ್ತ ಇಲಾಖೆ ಅಡಿಯಲ್ಲಿ ಎಲ್ಲಾ ರೀತಿಯ ಆರ್ಥಿಕ ಅಂಕಿಸಂಖ್ಯೆಗಳು ಸರಿ ದಾರಿಯಲ್ಲಿ ಸಾಗಿವೆ. ಸೆನ್ಸೆಕ್ಸ್‌ ಗಗನವನ್ನು ಮುಟ್ಟುತ್ತಿದೆ. ಇಂದು ಭಾರತ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಮೂರು ಅಥವಾ ಎರಡು ರಾಷ್ಟ್ರಗಳಲ್ಲಿ ಒಂದು. ನಮ್ಮ ದೇಶ ಹೂಡಿಕೆಗೆ ಅತ್ಯುತ್ತಮ ಜಾಗವಾಗಿ ಮಾರ್ಪಟ್ಟಿದೆ. ಯುಪಿಎ ಸರ್ಕಾರ ಅಧಿಕಾರದಿಂದ ಕೆಳಕ್ಕಿಳಿದಾಗ, ಅಂದರೆ 2013-14ರಲ್ಲಿ, ವಿದೇಶಿ ವಿನಿಮಯ ಮೀಸಲು 294.4 ಶತಕೋಟಿ ಡಾಲರ್‌ನಷ್ಟಿತ್ತು. ಅದೀಗ 402 ಶತಕೋಟಿ ಡಾಲರ್‌ ದಾಟಿದೆ. 2013-14ರಲ್ಲಿ ಯುಪಿಎ ಸರ್ಕಾರ ದಿನಕ್ಕೆ 69 ಕಿಲೋಮೀಟರ್‌ ರಸ್ತೆ ನಿರ್ಮಿಸಿತ್ತು. 2016-17ರಲ್ಲಿ ಪ್ರತಿ ದಿನ 130 ಕಿಲೋಮೀಟರ್‌ ರಸ್ತೆ ನಿರ್ಮಾಣವಾಗಿದೆ. 2014ರಲ್ಲಿ ಸಾಮಾನ್ಯ ಜನರಿಗೆ ಗೃಹ ಸಾಲ 10-12 ಪ್ರತಿಶತ ಬಡ್ಡಿದರದಲ್ಲಿ ಸಿಗುತ್ತಿತ್ತು. ಈಗ 8-9 ಪ್ರತಿಶತ ಬಡ್ಡಿಗೆ ಅವರಿಗೆ ಗೃಹ ಸಾಲ ಸಿಗುತ್ತಿದೆ.  ನಮ್ಮದು ಪಾರದರ್ಶಕ ಸರ್ಕಾರ.  ಜಿಎಸ್‌ಟಿಯಿರಲಿ, ನೋಟು ಅಮಾನ್ಯತೆಯಿರಲಿ, ಸರ್ಜಿಕಲ್‌ ಸ್ಟ್ರೈಕ್‌ ಇರಲಿ ಅಥವಾ 
ಸಮಾನ ಶ್ರೇಣಿ ಸಮಾನ ವೇತನವಿರಲಿ ನಾವು ಧೈರ್ಯದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ. ಅದಕ್ಕೇ ದೇಶದ ಮೂಡ್‌ ಬದಲಾಗಿದೆ.

ವಿರೋಧ ಪಕ್ಷಗಳಿಂದ ಅಥವಾ ಬೇರೆಡೆಯಿಂದ ಬರಬಹುದಾದ ಸಮಸ್ಯೆಗಳ ಬಗ್ಗೆ ನೀವು ಮೌಲ್ಯಮಾಪನ ಮಾಡುತ್ತಿರಬಹುದಲ್ಲವೇ? ಕಳೆದ 12-18 ತಿಂಗಳಿಂದ ದಲಿತರ ಸಮೀಕರಣ ಹೆಚ್ಚಾಗುತ್ತಿದೆ. ಈ ಬಗ್ಗೆ ಏನಂತೀರಿ?
ಸ್ವಲ್ಪ ತಿದ್ದುಪಡಿ ಮಾಡಿಕೊಳ್ಳಿ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗು ತ್ತಿದೆಯಷ್ಟೆ.. 

ಸರಿ, ಅದು ಪ್ರಯತ್ನವೇ ಇರಬಹುದು. ಆದರೆ ಈ ವಿದ್ಯಮಾನಗಳನ್ನು ನೀವು ಹೇಗೆ ನೋಡುತ್ತೀರಿ. ಹಿಂದೆ, ಇದೆಲ್ಲ ಚದುರಿಹೋಗಿತ್ತು. 
ನಿಮ್ಮ ವಿಶ್ಲೇಷಣೆ ಸರಿಯಾಗಿಲ್ಲ. ಇದೆಲ್ಲ ರಾಜಕೀಯ ಪ್ರಯತ್ನವೇ ಹೊರತು ದಲಿತರ ಉದ್ಧಾರಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನವಲ್ಲ. ಕಾಂಗ್ರೆಸ್‌ ಮೊದಲಿನಿಂದಲೂ ಅಂಬೇಡ್ಕರ್‌ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅಂಬೇಡ್ಕರ್‌ ಮರಣಾ ನಂತರವೂ ಕಾಂಗ್ರೆಸ್‌ ಅವರಿಗೆ ಗೌರವ ಕೊಡಲಿಲ್ಲ. ಅವರಿಗೆ ಭಾರತ ರತ್ನವನ್ನೂ ಕೊಟ್ಟಿಲ್ಲ. ಸಂಸತ್ತಿನಲ್ಲಿ ಅಂಬೇಡ್ಕರ್‌ರ ಫೋಟೋಕ್ಕೆ ಅನುಮತಿ ಕೊಡಲಿಲ್ಲ. ಅದ್ಹೇಗೆ ಈಗ ಕಾಂಗ್ರೆಸ್‌ ಮಾತನಾಡಬಲ್ಲದು? ದಲಿತರಿಗೂ ಇದೆಲ್ಲಾ ಅರ್ಥವಾಗುತ್ತದೆ. ಪ್ರಜಾಪ್ರಭುತ್ವ ಪ್ರೌಢವಾಗಿದೆ. 

ತ್ರಿವಳಿ ತಲಾಖ್‌ ವಿಷಯದಲ್ಲಿ ಸರ್ಕಾರದ ನಡೆಯನ್ನು ನೋಡಿ, ಸಮಾನ ನಾಗರಿಕ ಸಂಹಿತೆಯ ಕುರಿತೂ ಚರ್ಚೆ ಶುರುವಾಗಿದೆಯಲ್ಲ…
ಈ ವಿಷಯದಲ್ಲಿ ನಾವಿನ್ನೂ ನಿರ್ಧಾರ ಕೈಗೊಂಡಿಲ್ಲ. ತ್ರಿವಳಿ ತಲಾಖ್‌ ವಿಷಯದಲ್ಲಿ ನಾವು ತೆಗೆದುಕೊಂಡ ನಿರ್ಧಾರವೂ ಕಾಂಗ್ರೆಸ್‌ನ ತಕರಾರಿನಿಂದ ರಾಜ್ಯ ಸಭೆಯಲ್ಲಿ ನಿಂತಿದೆ. ಮುಂದಿನ ಅಧಿವೇಶನದಲ್ಲಾದರೂ ಅದು ಕಾನೂನಾಗಬೇಕು ಎನ್ನುವುದು ನಮ್ಮ ಪ್ರಯತ್ನವಾಗಿರಲಿದೆ. ತ್ರಿವಳಿ ತಲಾಖ್‌ ಕಾನೂನು ಅನುಮೋದನೆಗೊಳ್ಳುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಹಿಂದೆಯೂ ಅಷ್ಟೆ,  ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ತಿರಸ್ಕರಿಸಲು ಅದು ಒಂದು  ಕಾನೂನನ್ನು ತಂದಿತ್ತು. 

ಬಿಜೆಪಿಯ ವಿರುದ್ಧ ಮುಸಲ್ಮಾನರಲ್ಲಿನ ಶಂಕೆ ಇನ್ನೆಷ್ಟು ಕಾಲ ಮುಂದುವರಿಯಲಿದೆ? ಇದನ್ನು ಹೇಗೆ ತೊಡೆದುಹಾಕುತ್ತೀರಿ? 
ನಾವು ಶಂಕೆ ನಿವಾರಿಸಲು ಪ್ರಯತ್ನಿಸುತ್ತಿಲ್ಲ. ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇಂದಲ್ಲ ನಾಳೆ, ಇದೆಲ್ಲ ಕೊನೆಯಾಗುತ್ತದೆ. ನಾವು ಮತದಾರರನ್ನು ಧರ್ಮದ ಆಧಾರದಲ್ಲಿ ಎಂದೂ ನೋಡಿದವರಲ್ಲ. ಓಲೈಕೆ ರಾಜಕಾರಣವನ್ನು ವಿರೋಧಿಸುತ್ತಿರುವವರೇ ನಾವು. 

ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳಲಿದ್ದೀರಾ?
ಇಲ್ಲ, ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ. ಭಾರತೀಯ ಜನತಾ ಪಾರ್ಟಿ ಕರಪ್ರತಿಯೊಂದು ಸ್ಥಾನಕ್ಕೂ ಸ್ಪರ್ಧಿಸಲಿದೆ. 

ಕರ್ನಾಟಕದ ಚುನಾವಣೆ ಕಷ್ಟಕರವಾಗಲಿದೆಯೇ?
ಯಾವ ಚುನಾವಣೆಯೂ ಸುಲಭವಾಗಿರುವುದಿಲ್ಲ. ಆದರೂ ನಿಸ್ಸಂಶಯವಾಗಿಯೂ ನಾವು ಯಡಿಯೂರಪ್ಪಾಜಿ ಅವರ ನೇತೃತ್ವದಲ್ಲಿ ಉತ್ತಮ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದು ನನಗನಿಸುತ್ತದೆ. 

ಯಡಿಯೂರಪ್ಪ ಅವರದ್ದು ಕರ್ನಾಟಕದಲ್ಲಿ ಬಹಳ ವಿವಾದಾತ್ಮಕ ವ್ಯಕ್ತಿತ್ವ. ಅವರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿರುವುದೂ ಇದಕ್ಕೆ ಕಾರಣ. ಜನರು ಬಿಜೆಪಿಯನ್ನು “ಭ್ರಷ್ಟಾಚಾರ ಮುಕ್ತ’ ಪಕ್ಷ ಎಂದು ಕರೆಯಬಹುದು. ಆದರೆ ಕರ್ನಾಟಕದ ವಿಷಯದಲ್ಲಿ ಹೀಗಿಲ್ಲವಲ್ಲ. 
ಯಡಿಯೂರಪ್ಪನವರ ವಿರುದ್ಧ ಮಾಡಲಾದ ಆರೋಪಗಳೆಲ್ಲ ವನ್ನೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಇದರ ನಂತರವೂ, ಯಾರಾದರೂ ತಕರಾರು ತೆಗೆದರೆ, ನಾವು ಉತ್ತರಿಸುತ್ತೇವೆ. 

ಇತ್ತೀಚೆಗೆ ಕೆಲವು ವಿವಾದಗಳು ಕಾಣಿಸಿಕೊಂಡವು. ಮೊದಲು ನಿಮ್ಮ ಮಗನ ವಿರುದ್ಧದ ಕೇಸು, ನಂತರ ಲೋಯಾ ಪ್ರಕರಣ..
ಅವೆರಡೂ ಪ್ರಕರಣಗಳೀಗ ನ್ಯಾಯಾಲಯದಲ್ಲಿವೆ. ಜಯ್‌(ಶಾ) ವಿಷಯಕ್ಕೆ ಬರುವುದಾದರೆ, ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ.  ತಕ್ಷಣ ಈ ಪ್ರಕರಣದಲ್ಲಿ ತೀರ್ಪು ಹೊರಬರಬೇಕು ಎನ್ನುವುದು ನಮ್ಮ ನಿಲುವು. ಏಕೆಂದರೆ 2019ರ ಚುನಾವಣೆಗೂ ಮುನ್ನವೇ ಜನರಿಗೆ ಸತ್ಯ ತಿಳಿಯಬೇಕು. ಇನ್ನು ಲೋಯಾ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ಅದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. 

ಪದ್ಮಾವತ್‌ ಸಿನೆಮಾ ಎದುರಿಸುತ್ತಿರುವ ಅಡ್ಡಿಗಳ ಬಗ್ಗೆ ಏನಂತೀರಿ?
ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ತೀರ್ಪು ನೀಡಿದೆ. ಸರ್ಕಾರಗಳು ಈ ತೀರ್ಪನ್ನು ಪಾಲಿಸಬೇಕು. ಅವೂ ಕೂಡ ಒಪ್ಪಿಕೊಳ್ಳುತ್ತಿವೆ. ಈ ತೀರ್ಪು ಸರಿ ಇಲ್ಲ ಎಂದು ಯಾರಾದರೂ ಭಾವಿಸುತ್ತಾರೆಂದಾದರೆ ಅವರು ಕೋರ್ಟ್‌ಗೆ ಅಪೀಲು ಮಾಡಲಿ. ಸುಪ್ರೀಂ ತೀರ್ಪಿನ ನಂತರ ಎಲ್ಲಾ ಸರ್ಕಾರಗಳೂ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿವೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ..

ನ್ಯಾಯಾಂಗದಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿನ ಬಗ್ಗೆ ಏನಂತೀರಿ? 
ಈ ವಿಚಾರವನ್ನು ನ್ಯಾಯಾಂಗಕ್ಕೆ ಬಿಟ್ಟುಬಿಡಬೇಕು ಎಂದು ನನಗನಿಸುತ್ತದೆ. ಆಗ ಮಾತ್ರ ನ್ಯಾಯಾಂಗ ಸ್ವತಂತ್ರವಾಗಿರಬಲ್ಲದು. ನ್ಯಾಯಾಂಗದಲ್ಲಿನ ಜನರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. 

ದೆಹಲಿ  ಉಪಚುನಾವಣೆಗಳಿಗೆ ಸಿದ್ಧರಿದ್ದೀರಾ? ಇನ್ನೂ ನ್ಯಾಯಾಲಯದ ತೀರ್ಮಾನಕ್ಕೆ ನೀವು ಕಾಯಬೇಕಾದರೂ, ಚುನಾವಣಾ ಸಾಧ್ಯತೆಯಂತೂ ಇದ್ದೇ ಇದೆಯಲ್ಲ. 
ನೋಡಿ,ನಾವು ಅಷ್ಟಾಗಿ ಸಿದ್ಧವಾಗಿಲ್ಲ. ಸಿದ್ಧತೆ ಎಂದರೆ ಚುನಾವಣೆ ದೃಷ್ಟಿಯಿಂದ ಹೇಳುತ್ತಿದ್ದೇನಷ್ಟೆ. ಸಾಂಸ್ಥಿಕವಾಗಿ ನೋಡುವುದಾದರೆ ನಾವು ಯಾವತ್ತಿಗೂ ರೆಡಿ ಇದ್ದೇ ಇರುತ್ತೇವೆ.  ಕಳೆದ ಬಾರಿ ದೆಹಲಿಯಲ್ಲಿ ಎಂಸಿಡಿ ಚುನಾವಣೆಗಳು ನಡೆದಾಗ ನಮಗೆ ಒಳ್ಳೆಯ ಫ‌ಲಿತಾಂಶ ಸಿಕ್ಕಿತ್ತು. 

ಒಂದು ಸಮಯದಲ್ಲಿ ಆಮ್‌ ಆದ್ಮಿ ಪಾರ್ಟಿಯನ್ನು ದೇಶದ ಸಂಭಾವ್ಯ ಮೂರನೇ ಪ್ರಬಲ ಪಕ್ಷ ಎಂದು ಹೇಳಲಾಗುತ್ತಿತ್ತಲ್ಲ…
ಬೇರೆ ಯಾರೂ ಹೇಳಿಲ್ಲ,  ಮಾಧ್ಯಮಗಳಷ್ಟೇ ಹಾಗೆ ಹೇಳಿದ್ದು.

ಟಾಪ್ ನ್ಯೂಸ್

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.