ಮಲೇಷ್ಯಾ ಪ್ರಜೆಗೆ ಮಂಗಳೂರಿನಲ್ಲಿ ಆಧಾರ್ ಕಾರ್ಡ್ !
Team Udayavani, Jan 30, 2018, 6:00 AM IST
ಮಂಗಳೂರು: ಮಲೇಷ್ಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ “ಆಧಾರ್’ ಚೀಟಿ ಮಾಡಿಸಿಕೊಟ್ಟಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗೆ ಬಹುಸುಲಭವಾಗಿ ಭಾರತದ ಗುರುತಿನ ಚೀಟಿ ನೀಡಿರುವ ಈ ದೇಶವಿರೋಧಿ ಚಟುವಟಿಕೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಥ್ ನೀಡಿ ರುವ ಅನುಮಾನವೂ ಆರೋಪವೂ ಕೇಳಿಬಂದಿದೆ!
ಮಂಗಳೂರಿನಲ್ಲಿ ವೈದ್ಯ ಶಿಕ್ಷಣ ಪಡೆಯುವುದಕ್ಕಾಗಿ “ಸ್ಟಡಿ ವೀಸಾ’ದಲ್ಲಿ ಬಂದಿರುವ ಮಲೇಷ್ಯಾದ ಹೋಹ್ ಜಿಯಾನ್ ಮೆಂಗ್ (25) ಆಧಾರ್ ಕಾರ್ಡ್ ಪಡೆದು ಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಮೂಲಕ ಅಕ್ರಮವಾಗಿ ಭಾರತೀಯ ಪ್ರಜೆ ಎಂದು ಈತ ಗುರುತಿಸಿಕೊಂಡಿರುವುದು ಅತ್ಯಂತ ಗಂಭೀರ ವಿಚಾರ. ಅತ್ಯಂತ ಸುಶಿಕ್ಷಿತರಿರುವ ಜಿಲ್ಲೆ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ಇಂತಹ ದೇಶದ್ರೋಹ ಕೃತ್ಯ ನಡೆದಿರುವುದು ನಿಜಕ್ಕೂ ತಲೆತಗ್ಗಿಸಬೇಕಾದ ವಿಷಯ.
ಇವೆಲ್ಲಕ್ಕಿಂತಲೂ ಗಂಭೀರ ಅಂಶವೆಂದರೆ, ಒಬ್ಬ ವ್ಯಕ್ತಿ ಆಧಾರ್ನಂಥ ಮಹತ್ವದ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕಾದರೆ ಭಾರತೀಯ ಪ್ರಜೆ ಹಾಗೂ ವಾಸ್ತವ್ಯ ದೃಢೀಕರಣಕ್ಕೆ ಪೂರಕ ದಾಖಲೆ ನೀಡುವುದು ಕಡ್ಡಾಯ. ಒಂದು ವೇಳೆ ವ್ಯಕ್ತಿ ನಕಲಿ ದಾಖಲೆ ಸಲ್ಲಿಸಿದ್ದರೆ, ಅದನ್ನು ಪರಿಶೀಲಿಸುವ ಸರಕಾರಿ ಅಧಿಕಾರಿ ಅಂಥ ಅರ್ಜಿಗಳನ್ನು ತಿರಸ್ಕರಿಸಬೇಕು. ಆದರೆ ಈ ಪ್ರಕರಣದಲ್ಲಿ ವಿದೇಶಿ ಪ್ರಜೆ ಸಲ್ಲಿಸಿದ್ದ ಅರ್ಜಿಯನ್ನು ಆತನ ಪೂರ್ವಾಪರ ವಿಚಾರಿಸದೆ ಪುರಸ್ಕರಿಸಿ, ಏಕಾಏಕಿ ಆಧಾರ್ ಕಾರ್ಡ್ ನೀಡಿರುವುದು ಈ ಜಾಲದ ಹಿಂದೆ ರಾಜ್ಯ ಸರಕಾರದ ಅಧಿಕಾರಿಗಳ ಕೈವಾಡ ಹಾಗೂ ಸ್ಥಳೀಯ ರಾಜಕೀಯ ಮುಖಂಡರ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಉದಯವಾಣಿಗೆ ಬಂದ ದೂರು: ಮಂಗಳೂರಿನ ಹಂಪನಕಟ್ಟೆಯ ಫ್ಲಾ éಟ್ ಒಂದರಲ್ಲಿ ಹೊಹ್ ಜಿಯಾನ್ ಮೆಂಗ್ ನೆಲೆಸಿದ್ದು, ಆತನ ಸ್ಥಳೀಯ ವಿಳಾಸಕ್ಕೆ ಆಧಾರ್ ಕಾರ್ಡ್ ಬಂದಿರುವ ವಿಚಾರವನ್ನು ಸ್ಥಳೀಯರೊಬ್ಬರು “ಉದಯವಾಣಿ’ಯ ಗಮನಕ್ಕೆ ತಂದರು. ಈ ಮಾಹಿತಿಯ ಜಾಡು ಹಿಡಿದು ಹೋದಾಗ, ಈತನ ಹೆಸರಿಗೆ ಬಂದಿರುವ ಆಧಾರ್ ಕಾರ್ಡ್ ಪ್ರತಿ ಪತ್ರಿಕೆಗೆ ಲಭಿಸಿದೆ. ಇದರಲ್ಲಿ “ಹೋಹ್ ಜಿಯಾನ್ ಮೆಂಗ್, ಸನ್ ಆಫ್ ಹೋಹ್ ಡೆಂಗ್ ಕಿಯೋಂಗ್, ನಂ.012, ಬಲ್ಮಠ ರಸ್ತೆ, ಮಹಾರಾಜ ರೆಸಿಡೆನ್ಸಿ, ಹಂಪನಕಟ್ಟೆ, ಮಂಗಳೂರು, ದಕ್ಷಿಣ ಕನ್ನಡ. ಮೊಬೈಲ್: 9901857238′ ಎಂಬುದಾಗಿ ವಿವರ ಇದೆ. ಹೊಹ್ ಜಿಯಾನ್ ಮೆಂಗ್ ಭಾರತೀಯ ಪ್ರಜೆ ಅಲ್ಲ ಎಂಬುದು ಮೇಲ್ನೋಟಕ್ಕೆ ಅರಿವಿಗೆ ಬಂದಿದೆ. ಪತ್ರಿಕೆ ಆತನ ಪೂರ್ವಾಪರದ ಬಗ್ಗೆ ವಿಚಾರಿಸಿದಾಗ ಆತ ಮಲೇಷ್ಯಾದವನು, ವೈದ್ಯಕೀಯ ಶಿಕ್ಷಣಕ್ಕಾಗಿ ಹಂಪನಕಟ್ಟೆಯ
ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದಾನೆ.
ಈತನ ಸಾಮಾಜಿಕ ಜಾಲ ತಾಣಗಳ ಖಾತೆಗಳನ್ನು ಪರಿಶೀಲಿಸಿದಾಗ ಜಿಯಾನ್ ಮಂಗಳೂರಿ ನಲ್ಲೇ ವಾಸ್ತವ್ಯ ಹೂಡಿರುವ ಉಲ್ಲೇಖ ಇರುವುದು ಪತ್ತೆಯಾಗಿದೆ. ಹೀಗಾಗಿ ಹೊಹ್ ಜಿಯಾನ್ ಭಾರತೀಯ ಪ್ರಜೆ ಅಲ್ಲ ಎಂಬುದು ಶತಸ್ಸಿದ್ಧವಾಗಿದೆ. ಈ ನಡುವೆ ಪತ್ರಿಕೆ ಆತನ ಮೊಬೈಲ್ಗೆ ಕರೆ ಮಾಡಿದಾಗ ಆತ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.
ಸ್ಥಳೀಯರ ಆರೋಪವೇನು?: ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ನಾಲ್ಕೈದು ತಿಂಗಳ ಹಿಂದೆ ಈ ಫ್ಲಾ éಟ್ಗೆ ಮಹಿಳೆಯೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿಕೊಂಡು ಬಂದಿದ್ದರು. ಆದರೆ ಅಲ್ಲಿನ ಭದ್ರತಾ ಸಿಬಂದಿ ಆಕೆಯನ್ನು ಫ್ಲಾ éಟ್ನಲ್ಲಿರುವ ಮನೆಗಳಿಗೆ ತೆರಳಲು ಅನುಮತಿ ನಿರಾಕರಿಸಿದ್ದರು. ಈ ಸಂದರ್ಭ ಸ್ಥಳೀಯ ಶಾಸಕರದ್ದು ಎನ್ನಲಾದ ದೂರವಾಣಿ ಕರೆ ಭದ್ರತಾ ಸಿಬಂದಿಗೆ ಬಂದಿದ್ದು, “ಪಕ್ಷದ ಕಡೆಯಿಂದ ಮಹಿಳೆಗೆ ಗುರುತಿನ ಚೀಟಿ ಮಾಡಿಸುವುದಕ್ಕೆ ಅವಕಾಶ ನೀಡಬೇಕು’ ಎಂದು ಸೂಚಿಸಿದ್ದರು. ಅನಂತರ ಭದ್ರತಾ ಸಿಬಂದಿ ಆ ಮಹಿಳೆಗೆ ಒಳತೆರಳಲು ಅವಕಾಶ ನೀಡಿದ್ದರು. ಆದರೆ ಈಗ ವಿದೇಶಿ ಪ್ರಜೆಗೆ ಅಕ್ರಮವಾಗಿ ಭಾರತೀಯ ಪೌರತ್ವ ಒದಗಿಸುವ ಇಂಥದೊಂದು ಪ್ರಕರಣ ಬೆಳಕಿಗೆ ಬಂದಿರುವುದರಿಂದ ಅಂದು ಫ್ಲಾ éಟ್ಗೆ ಆಧಾರ್ ಮಾಡಿಸಿಕೊಡುವುದಕ್ಕೆ ಬಂದಿದ್ದ ಮಹಿಳೆ ಯಾರು ಮತ್ತು ಅವರು ಯಾವ ಪಕ್ಷಕ್ಕೆ ಸೇರಿದವರು ಹಾಗೂ ಕರೆ ಮಾಡಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಆಧಾರ್ ಕೊಟ್ಟಿರುವುದು ಮಂಗಳೂರು ಒನ್: ಜಿಯಾನ್ಗೆ ಮಂಗಳೂರಿನ “ಮಂಗಳೂರು ಒನ್’ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆದಿದೆ.
ಬಂಧನ ಸಾಧ್ಯತೆ
ಸುಳ್ಳು ಮಾಹಿತಿ ನೀಡಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಇಲ್ಲಿ ಅಕ್ರಮವಾಗಿ ನೆಲೆಸುವುದಕ್ಕೆ ಯತ್ನಿಸಿರುವ ಆರೋಪದ ಮೇಲೆ ಜಿಯಾನ್ ಮೆಂಗ್ನನ್ನು ಪೊಲೀಸರು ತತ್ಕ್ಷಣ ಬಂಧಿಸುವ ಸಾಧ್ಯತೆಯಿದೆ. ಈತ ಯಾವ ಕಾರಣಕ್ಕೆ ಈ ರೀತಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾನೆ ಎಂಬ ಬಗ್ಗೆಯೂ ಆಳವಾದ ತನಿಖೆಯಾಗಬೇಕಿದೆ.
ವಿದೇಶೀಯರಿಗೆ ಮನೆಬಾಗಿಲಿಗೆ ಆಧಾರ್
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಈ ರೀತಿ ವಿದೇಶಿಗರಿಗೂ ಆಧಾರ್ ಗುರುತಿನ ಚೀಟಿ ಮಾಡಿಸಿಕೊಡಲಾಗುತ್ತಿದೆ. ಎಷ್ಟೋ ಮಂದಿ ಭಾರತೀಯರು ಆಧಾರ್ ನೋಂದಣಿ ಕೇಂದ್ರಗಳ ಮುಂದೆ ದಿನಗಟ್ಟಲೆ ಸರತಿಯಲ್ಲಿ ನಿಂತು ಆಧಾರ್ ಕಾರ್ಡ್ ಮಾಡಿಸಿಕೊಂಡದ್ದಿದೆ. ಹಲವರಿಗೆ ಇನ್ನೂ ಸಿಕ್ಕಿಲ್ಲ. ಆದರೆ ಮಂಗಳೂರಿನಲ್ಲಿ ನೆಲೆಸಿರುವ ವಿದೇಶೀಯರ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಬಂದು ಬೀಳುತ್ತಿದೆ ! ಕೆಲವು ವಾರಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ಕೇರಳ ಸಹಿತ ಇತರ ರಾಜ್ಯಗಳ 3,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮತದಾನ ಗುರುತಿನ ಚೀಟಿ ಮಾಡಿಸುವುದಕ್ಕೆ ಅರ್ಜಿ ಸ್ವೀಕರಿಸಿರುವುದನ್ನು ಬಿಜೆಪಿ ಮುಖಂಡರು ಪತ್ತೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
- ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್