ಮಂಜುನಾಥೇಶ್ವರ ಖಾಸಗಿ ವಿವಿ ವಿಧೇಯಕಕ್ಕೆ ಅನುಮೋದನೆ
Team Udayavani, Feb 22, 2018, 6:25 AM IST
ವಿಧಾನಸಭೆ: ದಕ್ಷಿಣ ಕನ್ನಡ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಸೊಸೈಟಿ ಸ್ಥಾಪಿಸಲು ಉದ್ದೇಶಿಸಿರುವ ಖಾಸಗಿ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡುವ ಸಂಬಂಧದ ವಿಧೇಯಕ್ಕೆ ಬುಧವಾರ ಅಂಗೀಕಾರ ನೀಡಲಾಯಿತು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿಧೆಯಕ-
2018′ ಮಂಡಿಸಿ, ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಖಾಸಗಿ ವಿಶ್ವವಿದ್ಯಾಲಯಗಳು ನೆರವಾಗುತ್ತವೆ. ಈಗಾಗಲೇ 22 ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿದ್ದು 18 ಪ್ರಾರಂಭವಾಗಿವೆ ಎಂದು ಹೇಳಿದರು.
ಈ ವಿಧೇಯಕವು ಭಾಷೆಗಳು, ಜೀವ, ಶಾರೀರಿಕ ಮತ್ತು ಸಂಬಂಧಿತ ವಿಜ್ಞಾನ, ಗಣಕ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ತಾಂತ್ರಿಕ ಕೋರ್ಸ್ಗಳು, ವೈದ್ಯಕೀಯ ವಿಜ್ಞಾನಗಳು ಮತ್ತು ಸಂಬಂಧಿತ ವಿಭಾಗ, ವಾಣಿಜ್ಯ ಮತ್ತು ವ್ಯವಹಾರ ವ್ಯವಸ್ಥಾಪನೆಯಲ್ಲಿ ಪದವಿ, ಸ್ನಾತಕೋತ್ತರ, ಡಾಕ್ಟೊರಲ್ ಮತ್ತು ಪೋಸ್ಟ್ ಡಾಕ್ಟರೋಲ್ ಕೋರ್ಸ್ಗಳಿಗೆ ಮುಂದುವರಿಯುವ ಮತ್ತು ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ಪ್ರಗತಿಯನ್ನು ಮತ್ತು ಅನ್ವೇಷನೆಯನ್ನು ಬೆಂಬಲಿಸುವುದು, ಪ್ರೋತ್ಸಾಹಿಸುವುದು, ಈ ಕ್ಷೇತ್ರದ ಸಂಶೋಧನೆಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿಯ ಸುರೇಶ್ಕುಮಾರ್, ನಾರಾಯಣಸ್ವಾಮಿ ಹಾಗೂ ಹಿರಿಯ ಸದಸ್ಯ ಬಿ.ಆರ್.ಪಾಟೀಲ್ ಮಾತನಾಡಿ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು ಖಾಸಗಿ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಬಹುದು ಎಂದು ಹೇಳಿದರು.
ಸದನ ಒಮ್ಮತದ ಅಂಗೀಕಾರ ನೀಡಿತು.ಚರ್ಚೆ ಇದೇ ಉದ್ದೇಶದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ ವಿಧೇಯಕ-2018 ಮಂಡಿಸಲಾಯಿತಾದರೂ ಪ್ರತಿಪಕ್ಷ ಬಿಜೆಪಿ ಸದಸ್ಯರು ಈ ಕುರಿತು ಚರ್ಚೆ ಮಾಡಬೇಕು ಎಂದು ಕೇಳಿದ್ದರಿಂದ ಚರ್ಚೆ ನಂತರ ಅನುಮೋದನೆಗೆ ನಿರ್ಧರಿಸಲಾಯಿತು.
ಕರ್ನಾಟಕ ಆಧಾರ್ಗೆ ಅಂಗೀಕಾರ
“ಆಧಾರ್’ ಮೂಲಕ ಸಬ್ಸಿಡಿ, ಪ್ರಯೋಜನ ಸೇರಿದಂತೆ ಸರ್ಕಾರದ ಯೋಜನೆ ಹಾಗೂ ಸೇವೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಖಾತರಿಪಡಿಸುವ ಉದ್ದೇಶದ “ಕರ್ನಾಟಕ ಆಧಾರ್’ (ಹಣಕಾಸು ಮತ್ತು ಇತರೆ ಸಬ್ಸಿಡಿ, ಪ್ರಯೋಜನ ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ-2018 ಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ್ ವಿಧೇಯಕ ಮಂಡಿಸಿದರು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧೇಯಕ ಸ್ವಾಗತಿಸಿ, ಆಧಾರ್ ವಿತರಣೆಯಲ್ಲಿನ ಸಮಸ್ಯೆ ಬಗೆಹರಿಸಲು ಸಲಹೆ ನೀಡಿದರು. ನಂತರ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಕಾನೂನು ವಿವಿ ವಿಧೇಯಕಕ್ಕೆ ಅಸ್ತು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಎರಡೂ ವಿಧೇಯಕಗಳನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಂಡನೆ ಮಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸುವ ತಿದ್ದುಪಡಿಗೆ ವಿಧೇಯಕ ಮಂಡಿಸಲಾಯಿತು. ಅದೇ ರೀತಿ, ಕರ್ನಾಟಕ ರಾಜ್ಯ ಕಾನೂನು ವಿವಿ ವಿಧೇಯಕದಲ್ಲಿನ ಲೆಕ್ಕ ಪರಿಶೋಧಕರ ವರದಿಯನ್ನು ಪ್ರಶಾಸನ ಸಭೆಯು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು ಎಂಬ ಪದದ ಬದಲಾಗಿ ಪ್ರಶಾಸನ ಅನುಮೋದನೆಯೊಂದಿಗೆ ಸರ್ಕಾರಕ್ಕೆ ಕಳುಹಿಸತಕ್ಕದ್ದು ಎಂಬ ತಿದ್ದುಪಡಿಯೊಂದಿಗೆ ವಿಧೇಯಕ ಅಂಗೀಕರಿಸಲಾಯಿತು.