ಉಪ್ಪಿನಂಗಡಿ: ಚುನಾವಣೆ ಘೋಷಣೆ ಬೆನ್ನಲ್ಲೇ ಬಸ್ ಗಳ ಕೊರತೆ
Team Udayavani, Apr 26, 2018, 11:16 AM IST
ಉಪ್ಪಿನಂಗಡಿ: ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಉಪ್ಪಿನಂಗಡಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಕೊರತೆ ಕಂಡು ಬರುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಪುತ್ತೂರು ತಾಲೂಕಿನ ಬೆಳೆಯುತ್ತಿರುವ ನಗರಗಳಲ್ಲಿ ಉಪ್ಪಿನಂಗಡಿಯೂ ಒಂದಾಗಿದ್ದು, ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವೂ ಆಗಿದೆ. ಮಂಗಳೂರಿಗೆ ಇಲ್ಲಿಂದ 10 ನಿಮಿಷಕ್ಕೆ ಒಂದ ರಂತಿದ್ದ ಕೆಎಸ್ಸಾರ್ಟಿಸಿ ಬಸ್ ಈಗ ಗಂಟೆಗೊಂದು ಆಗಿದೆ. ಇನ್ನೊಂದೆಡೆ ಕಾಂಕ್ರೀಟ್ ಕಾಮಗಾರಿಗಾಗಿ ಶಿರಾಡಿ ಘಾಟ್ ಬಂದ್ ಆಗಿರುವುದರಿಂದ ನೆಲ್ಯಾಡಿ, ಉದನೆ, ಶಿರಾಡಿ, ಗುಂಡ್ಯ ಭಾಗದ ಕಡೆ ಬಸ್ಗಳೇ ಪಯಣಿಸುತ್ತಿಲ್ಲ. ಈ ಭಾಗದ ಜನರು ಸಾರಿಗೆ ಸಮಸ್ಯೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.
ವೇಳಾಪಟ್ಟಿಯಲ್ಲಿದ್ದರೂ ಚುನಾವಣೆಯ ಕೆಲಸ ಹಾಗೂ ಇತರ ಕಾರಣಗಳಿಂದಾಗಿ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಜನ ಸಾಮಾನ್ಯರು ಪರದಾಡುವ ಸ್ಥಿತಿ ಬಂದಿದೆ
ನಿಲ್ದಾಣವೇ ಗತಿ!
ಸಂಜೆ ಏಳು ಗಂಟೆಯ ಬಳಿಕ ಉಪ್ಪಿನಂಗಡಿಯಿಂದ ಮಂಗಳೂರು, ಧರ್ಮಸ್ಥಳ, ನೆಲ್ಯಾಡಿ, ಉದನೆ, ಶಿರಾಡಿ ಹಾಗೂ ಗುಂಡ್ಯದ ಕಡೆಗೆ ಬಸ್ ಗಳನ್ನು ಬಿಡುತ್ತಿಲ್ಲ. ಮಂಗಳೂರಿಗೆ ಬಸ್ ಇಲ್ಲದ್ದರಿಂದ ಬಿಳಿಯೂರು, ಪೆರ್ನೆ, ಮಾಣಿ, ಬಿ.ಸಿ. ರೋಡ್ ಕಡೆಗೆ ಹೋಗುವವರಿಗೂ ತೊಂದರೆಯಾಗಿದೆ. ಧರ್ಮಸ್ಥಳ ಕಡೆಗೂ ಬಸ್ ಇಲ್ಲದೆ ಕರಾಯ, ಕಲ್ಲೇರಿ, ಕುಪ್ಪೆಟ್ಟಿ, ಗೇರುಕಟ್ಟೆ, ಗುರುವಾಯನಕೆರೆ, ಬೆಳ್ತಂಗಡಿ ಭಾಗದ ಜನರಿಗೂ ಬಿಸಿ ತಟ್ಟಿದೆ.
ಸರಿಪಡಿಸುತ್ತೇವೆ
ಚುನಾವಣೆಯ ಕೆಲಸಗಳಿಗಾಗಿ ಬಸ್ ಗಳನ್ನು ನೀಡಲಾಗಿದೆ. ಬಸ್ಗಳ ಕೊರತೆಯಿಂದಾಗಿ ಕೆಲವು ಕಡೆ ಸಾರಿಗೆ ಸಂಚಾರ ವನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದಿದೆ. ಎರಡು ಅಥವಾ ಮೂರು ದಿನಗಳಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು.
– ವಿಭಾಗೀಯ ನಿಯಂತ್ರಣಾಧಿಕಾರಿ