4 ವರ್ಷಗಳಲ್ಲಿ 17 ಲಕ್ಷ ರೂ. ದಂಡ ವಸೂಲಿ
Team Udayavani, May 21, 2018, 9:57 AM IST
ಮಹಾನಗರ: ಬಸ್ಗಳಲ್ಲಿ ಟಿಕೆಟ್ ರಹಿತ ವಾಗಿ ಪ್ರಯಾಣಿಸುವುದು ಕಾನೂನು ಉಲ್ಲಂಸಿದಂತೆ. ನಾಲ್ಕು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೆಎಸ್ಆರ್ಟಿಸಿ ವಿಭಾಗ ಟಿಕೆಟ್ರಹಿತ ಪ್ರಯಾಣಿಸುವುದವರಿಂದ 17 ಲಕ್ಷ ರೂ.ಗೂ ಹೆಚ್ಚಿನ ದಂಡ ವಸೂಲಿ ಮಾಡಿದೆ.
ಪ್ರಯಾಣಿಕರಿಗೆ ಅರಿವು ಮೂಡಿಸಿದರೂ ದಿನೇ ದಿನೇ ಟಿಕೆಟ್ ರಹಿತ ಪ್ರಯಾಣ ಮಾಡುವವರು ಸಂಖ್ಯೆ ಹೆಚ್ಚಾಗುತ್ತಿರುವುದು ಖೇದಕರ. ವರ್ಷದಿಂದ ವರ್ಷಕ್ಕೆ ದಂಡ ಪ್ರಮಾಣ ಹೆಚ್ಚಾಗುತ್ತಿದ್ದು, ಆದರೂ ಆದಾಯ ಸೋರಿಕೆ ತಪ್ಪಿಸಲು ನಿಗಮದಿಂದ ಸಾಧ್ಯವಾಗಲಿಲ್ಲ. ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಕಳೆದ ವರ್ಷ ಅತೀ ಹೆಚ್ಚಿನ ದಂಡ ವಸೂಲಾಗಿದೆ.
ಟಿಕೆಟ್ ಪಡೆದೇ ಪ್ರಯಾಣ ಮಾಡಬೇಕು ಎಂದು ಕೆಎಸ್ಆರ್ಟಿಸಿ ನಿಗಮದ ವತಿಯಿಂದ ಪ್ರಯಾಣಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಬಸ್ ಟಿಕೆಟ್ನಲ್ಲಿಯೇ ಟಿಕೆಟ್ ಪಡೆದು ಪ್ರಯಾಣಿಸಿ ಎಂದು ನಮೂದಾಗಿದ್ದು, ಪ್ರತಿಯೊಬ್ಬರೂ ಟಿಕೆಟ್ ಪಡೆದು ಪ್ರಯಾಣಿಸಬೇಕೆಂದು ಬಸ್ ಒಳಗಡೆ ಬರೆಯಲಾಗಿದೆ. ಇಷ್ಟೇ ಅಲ್ಲದೆ, ಬಸ್ ನಿಲ್ದಾಣಗಳಲ್ಲಿ ಇರುವಂತಹ ಎಲ್ಸಿಡಿಗಳಲ್ಲಿ ಸೇರಿದಂತೆ ಧ್ವನಿವರ್ಧಕ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಟಿಕೆಟ್ ಪಡೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸ.
ಟಿಕೆಟ್ ಪಡೆಯುವುದು ಪ್ರಯಾಣಿಕರ ಹೊಣೆ
ನಿರ್ವಾಹಕರು ಟಿಕೆಟ್ ಕೊಡಲಿಲ್ಲ ಎಂದು ಪ್ರಯಾಣಿಕರು ತಪ್ಪಿಸಿಕೊಳ್ಳುವ ಹಾಗಿಲ್ಲ. ಏಕೆಂದರೆ, ನಿರ್ವಾಹಕರು ಬಸ್ ಟಿಕೆಟ್ ಕೊಡದಿದ್ದರೂ ಟಿಕೆಟ್ ಕೇಳಿ ಪಡೆದುಕೊಳ್ಳುವುದು ಪ್ರಯಾಣಿಕರ ಜವಾಬ್ದಾರಿ ಎಂದು ಕಾನೂನು ಹೇಳುತ್ತದೆ. ಆದ್ದರಿಂದ ನಿರ್ವಾಹಕನ ಜತೆಗೆ ಪ್ರಯಾಣಿಕ ಕೂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಹತ್ತು ಪಟ್ಟು ದಂಡ
ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ವೇಳೆಯಲ್ಲಿ ಪ್ರಯಾಣಿಕರು ಟಿಕೆಟ್ ರಹಿತವಾಗಿ ಸಿಕ್ಕಿಬಿದ್ದರೆ ಟಿಕೆಟ್ ದರಕ್ಕಿಂತ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕ ದಂಡ ನೀಡಲು ಒಪ್ಪದಿದ್ದರೆ ಅವರನ್ನು ಹೆಚ್ಚಿನ ವಿಚಾರಣೆಗೆ ಹತ್ತಿರದ ಪೊಲೀಸರಿಗೆ ಒಪ್ಪಿಸಲಾಗುತ್ತದೆ.
ಪ್ರಯಾಣಿಕರ ಜವಾಬ್ದಾರಿ
ಪ್ರತಿಯೊಬ್ಬರೂ ಟಿಕೆಟ್ ಪಡೆದುಕೊಂಡೇ ಪ್ರಯಾಣಿಸಬೇಕು. ಟಿಕೆಟ್ ರಹಿತ ಪ್ರಯಾಣಕ್ಕೆ ಟಿಕೆಟ್ ದರದ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ. ಒಪ್ಪದಿದ್ದರೆ ಹೆಚ್ಚಿನ ವಿಚಾರಣೆಗೆ ಪೊಲೀಸರಿಗೆ ಒಪ್ಪಿಸಬಹುದು. ಕಾನೂನಿನ ಪ್ರಕಾರ ನಿರ್ವಾಹಕರು ಬಸ್ ಟಿಕೆಟ್ ನೀಡದಿದ್ದರೂ ಟಿಕೆಟ್ ಕೇಳಿ ಪಡೆದುಕೊಳ್ಳುವುದು ಪ್ರಯಾಣಿಕರ ಜವಾಬ್ದಾರಿ.
- ದೀಪಕ್ ಕುಮಾರ್, ಕೆಎಸ್ಆರ್ಟಿಸಿ
ಮಂಗಳೂರು ವಿಭಾಗಾಧಿಕಾರಿ
ನವೀನ್ ಭಟ್ ಇಳಂತಿಲ