ಬಸ್-ತೂಫಾನ್ ಢಿಕ್ಕಿ: 8 ಮಂದಿಗೆ ಗಾಯ
Team Udayavani, May 29, 2018, 10:31 AM IST
ಕಾರ್ಕಳ: ಬಸ್ ಹಾಗೂ ತೂಫಾನ್ ಟೆಂಪೋ ಮುಖಾಮುಖೀ ಢಿಕ್ಕಿ ಹೊಡೆದು 8 ಮಂದಿ ಗಾಯಗೊಂಡಿರುವ ಘಟನೆ ಕಾರ್ಕಳ ಬೈಲೂರು ಸಮೀಪದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ತೂಫಾನ್ನಲ್ಲಿದ್ದ ಗಂಗಮ್ಮ (60), ನಿಂಗಮ್ಮ (60), ಹನುಮಂತ ಗೌಡ (34), ಮಂಜುನಾಥ(47), ಸಿದ್ದಪ್ಪ (70), ಗುರು (37), ಲಲಿತ್ (39), ರಮೇಶ್ (28) ಗಾಯಗೊಂಡವರು. ಈ ಪೈಕಿ ಚಾಲಕ ರಮೇಶ್ ಅವರ ಮುಖಕ್ಕೆ ತೀವ್ರ ತರಹದ ಗಾಯವಾಗಿವೆ. ಇದರಲ್ಲಿ ಒಟ್ಟು 11 ಮಂದಿಯಿದ್ದು, ಮೂವರು ಮಕ್ಕಳು ಗಾಯಗಳಿಲ್ಲದೆ ಪಾರಾಗಿದ್ದಾರೆ.
ಗಾಯಾಳುಗಳನ್ನು 108 ಆ್ಯಂಬುಲೆನ್ಸ್ ಮೂಲಕ ನಗರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಹುಬ್ಬಳ್ಳಿಯ ವಾಹನ
ಹುಬ್ಬಳ್ಳಿಯ ಕೇಶವಪುರದಿಂದ ತೂಫಾನ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಇವರು ದೇವರ ದರ್ಶನ ಮುಗಿಸಿ ಬಳಿಕ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದರು.
ರಸ್ತೆ ಹೊಂಡ ಕಾರಣ
ರಸ್ತೆಯಲ್ಲಿದ್ದ ಹೊಂಡ ತಪ್ಪಿಸಲು ಹೋದುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮುಖ್ಯರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಕೆಲ ಹೊತ್ತು ವಾಹನಗಳ ಸುಗಮ ಸಂಚಾರ ವ್ಯತ್ಯಯವಾಯಿತು.