ಸೀಮೆಎಣ್ಣೆ ಸಿಗದು, ಬದಲಾಯಿಸಿಕೊಳ್ಳಿ ಮೀನುಗಾರರಿಗೆ ಸಚಿವರ ಸಲಹೆ
Team Udayavani, Jul 18, 2018, 3:04 PM IST
ಮಂಗಳೂರು: ಪಡಿತರ ಸೀಮೆಎಣ್ಣೆ ಸ್ಥಗಿತಗೊಂಡಿದೆ. ಮುಕ್ತ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಮೀನುಗಾರರು ಪರ್ಯಾಯ ವ್ಯವಸ್ಥೆಗೆ ಬದಲಾಯಿಸಿಕೊಳ್ಳಬೇಕು ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಮಂಗಳೂರು ಬಂದರು ಭೇಟಿಯ ಬಳಿಕ ಮೀನುಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಮೀನುಗಾರ ಮುಖಂಡರ ಜತೆಗೆ ಸಭೆ ನಡೆಸಿ ಮಾತನಾಡಿದರು. ಸದ್ಯ ಸೀಮೆಎಣ್ಣೆ ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿದೆ. ಮುಂದೆ ಡೀಸೆಲ್ ಅಥವಾ ಎಲೆಕ್ಟ್ರಿಕ್ ಬೋಟ್ಗಳಿಗೆ ಬದಲಾಯಿಸಿಕೊಳ್ಳುವುದು ಉತ್ತಮ ಎಂದರು.
ಗೋವಾ ಬಂದರಿನಲ್ಲಿ ಇರುವ ಸಮುದ್ರದ ನಡುವಣ ಜೆಟ್ಟಿ ನಿರ್ಮಾಣ ಯೋಜನೆಯನ್ನು ರಾಜ್ಯದಲ್ಲೂ ಅಳವಡಿಸುವ ಬಗ್ಗೆ ಚಿಂತಿಸಲಾಗುವುದು. ಅಳಿವೆ ಬಾಗಿಲಿನಲ್ಲಿ ಹೂಳೆತ್ತದೆ ದೋಣಿ ಅವಘಡ ನಡೆಯುತ್ತಿದೆ. ಸಮುದ್ರ ಜೆಟ್ಟಿ ನಿರ್ಮಾಣ ಮಾಡಲಾಗುವುದು.ಜತೆಗೆ 50 ಮೀ.ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕೆ 50 ಟನ್ ಭಾರ ಹೊರುವ ಸಾಮರ್ಥ್ಯವಿದ್ದು, 50 ವರ್ಷ ಬಾಳಿಕೆ ಬರಬಹುದು ಎಂದರು.
ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಪೂರ್ಣಗೊಳಿಸಲು ಸರಕಾರ ಬದ್ಧ. ಕೇಂದ್ರ ಸರಕಾರದ ಅನುದಾನ ಬರಬೇಕಿದೆ. ಇನ್ನಷ್ಟು ಭೂಮಿ ಅಗತ್ಯವಿದ್ದು, ಚರ್ಚಿಸಲಾಗುವುದು ಎಂದರು.
ಮೀನುಗಾರ ಮುಖಂಡರಾದ ಮನೋಹರ್ ಬೋಳೂರು, ನಿತಿನ್ ಕುಮಾರ್, ವಾಸುದೇವ ಬೋಳೂರು, ಜಗನ್ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು, ಮೋಹನ್ ಬೆಂಗ್ರೆ, ಅಲಿ ಹಸನ್ ಸಮಸ್ಯೆಗಳನ್ನು ವಿವರಿಸಿದರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ಎಚ್.ಎಸ್. ವೀರಪ್ಪ ಗೌಡ, ಉಪನಿರ್ದೇಶಕ ಮಹೇಶ್ ಕುಮಾರ್, ಸಚಿವರ ಆಪ್ತ ಕಾರ್ಯ ದರ್ಶಿ ವಿರೂಪಾಕ್ಷ, ವಿ. ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಕೆಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ದೊಡ್ಮಣಿ, ಉಡುಪಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್ ಉಪಸ್ಥಿತರಿದ್ದರು.
ಸಚಿವರು ಮೀನುಗಾರಿಕಾ ಬಂದರಿನ ಘಟಕಗಳಿಗೆ, ಜೆಟ್ಟಿ ಸ್ಥಾವರ, ಮಂಜುಗಡ್ಡೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶೂನ್ಯ ಬಂಡವಾಳ ಕೃಷಿ ಮಾದರಿ ಅಳವಡಿಕೆಗೆ ಚಿಂತನೆ
ಮಂಗಳೂರು: ರೈತರಿಗೆ ಶೂನ್ಯ ಬಂಡವಾಳ ಕೃಷಿ ಮಾದರಿ ಪರಿಚಯಿಸಲಿದ್ದು, ಅಧ್ಯಯನಕ್ಕಾಗಿ ಆಂಧ್ರಪ್ರದೇಶಕ್ಕೆ ನಿಯೋಗ ತೆರಳಲಿದೆ ಎಂದು ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಮೀನುಗಾರಿಕಾ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಮಹಾರಾಷ್ಟ್ರದಲ್ಲಿ ಸುಭಾಷ್ ಪಾಳೇಕರ್ ಶೂನ್ಯ ಬಂಡವಾಳ ಕೃಷಿ ಮಾದರಿ ಪ್ರಾರಂಭಿಸಿದರು. ಆಂಧ್ರದಲ್ಲೂ ಯಶಸ್ವಿಯಾಗಿದ್ದು, ಪ್ರತ್ಯೇಕ ಇಲಾಖೆ ರಚಿಸಿದೆ. ಅಲ್ಲಿನ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ಮಾಹಿತಿ ನೀಡಿದ್ದಾರೆ ಎಂದರು.
ಬೆಂಗಳೂರಿಗೆ ಆಗಮಿಸಿದ್ದ ಕೃಷಿ ತಜ್ಞ ಡಾ| ಸ್ವಾಮಿನಾಥನ್ ಅವರ ಜತೆ ಚರ್ಚಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಸಲಹೆ ನೀಡಿದ್ದಾರೆ. ರೈತರ ಕೃಷಿ ವೆಚ್ಚದ ಮೇಲೆ ಶೇ. 50ರಷ್ಟು ಹೆಚ್ಚು ಬೆಲೆ ದೊರೆ ಯುವುದು ಅಗತ್ಯ. ಕೇಂದ್ರ ಸರಕಾರ ಕೆಲವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ, ದಾಸ್ತಾನು ಸಹಿತ ಗೊಂದಲಗಳಿವೆ ಎಂದರು.
ಫಾರ್ಮಾಲಿನ್ ಪತ್ತೆಯಾದರೆ ಕ್ರಮ
ಮೀನಿನಲ್ಲಿ ಫಾರ್ಮಾಲಿನ್ ಅಂಶ ಪತ್ತೆ ವರದಿ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಏಳು ಮೀನು ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಿಸಿದೆ. ಹೆಚ್ಚಿನ ಪರೀಕ್ಷೆಗಾಗಿ ಮೈಸೂರಿನ ಸಿಎಫ್ಟಿಆರ್ಐ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎರಡು ಸ್ಯಾಂಪಲ್ಗಳ ಫಲಿತಾಂಶ ಬಂದಿದ್ದು, ಫಾರ್ಮಾಲಿನ್ ಪತ್ತೆಯಾಗಿಲ್ಲ. ಉಳಿದ ವರದಿಗಾಗಿ ಕಾಯುತ್ತಿದ್ದೇವೆ. ಪತ್ತೆಯಾದರೆ ಆರೋಗ್ಯ ಇಲಾಖೆಯ ಸಹಕಾರ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಆರೋಗ್ಯ ಪ್ರತಿಕೂಲ ಕೃತ್ಯ ನಡೆದರೆ ಸುಮ್ಮನಿರಲ್ಲ ಎಂದರು.
ಡೀಸೆಲ್ ಸಬ್ಸಿಡಿ ಹಣ ವಾರದಲ್ಲಿ ಪಾವತಿ
ಕಳೆದ ಮೂರು ತಿಂಗಳಿನಿಂದ ಡೀಸೆಲ್ನ ಸಬ್ಸಿಡಿ ಹಣ ಬಾರದಿರುವುದು ಗಮನಕ್ಕೆ ಬಂದಿದೆ. ವಾರದೊಳಗಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಬಡ್ಡಿರಹಿತ ಸಾಲಕ್ಕೆ ಚಿಂತನೆ
ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಕುರಿತು ಚಿಂತನೆ ಯಿದೆ. ಸಹ ಕಾರ ಸಂಘಗಳು ಸದ್ಯ ನೀಡು ತ್ತಿರುವ ಸಾಲದ ಬಡ್ಡಿದರವನ್ನು ಇನ್ನಷ್ಟು ಕಡಿಮೆ ಮಾಡುವ ಕುರಿತು ಕ್ರಮ ಕೈಗೊಳ್ಳ ಲಾಗುವುದು. ಮೀನು ಗಾರರ ಹಾಗೂ ನೇಕಾರರ ಸಾಲ ವನ್ನೂ ಮನ್ನಾ ಮಾಡಲಾಗುತ್ತದೆ ಎಂದು ನಾಡ ಗೌಡ ಹೇಳಿದರು.
ಎಲೆಕ್ಟ್ರಿಕ್ ಬೋಟ್ ಪ್ರಾತ್ಯಕ್ಷಿಕೆ
ಎಲೆಕ್ಟ್ರಿಕ್ ಬೋಟ್ ಬಗ್ಗೆ ಮಲ್ಪೆ ಬಂದರಿನಲ್ಲಿ ಬುಧವಾರ ಪ್ರಾತ್ಯಕ್ಷಿಕೆ ನಡೆಯಲಿದೆ. ಇದರ ಇಂಜಿನ್ನ್ನು 3 ಗಂಟೆ ಚಾರ್ಜ್ ಮಾಡಿದರೆ 18 ತಾಸು ಬಳಸಬಹುದು. ಪ್ರಾತ್ಯಕ್ಷಿಕೆಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ನಾಡಗೌಡ ಹೇಳಿದರು.