ಆಕ್ರಮಣ ನಮ್ಮ ಸಂಸ್ಕೃತಿಯಲ್ಲ ; ಆಕ್ರಮಿಸಿದರೆ ಹೊಡೆದು ಓಡಿಸುತ್ತೇವೆ
Team Udayavani, Jul 27, 2018, 6:20 AM IST
ಉಡುಪಿ: ಮೊದಲಾಗಿ ಆಕ್ರಮಣ ಮಾಡುವುದು ಭಾರತೀಯರ ಸಂಸ್ಕೃತಿ, ಸೌಜನ್ಯವಲ್ಲ. ಬೇರೆ ಯವರು ಆಕ್ರಮಣ ಮಾಡಿದರೆ ಹೊಡೆದೋಡಿಸುತ್ತೇವೆ ಎಂಬುದನ್ನು ಭಾರತೀಯ ಸೈನಿಕರು ಕಾರ್ಗಿಲ್ನಲ್ಲಿ ತೋರಿಸಿಕೊಟ್ಟಿದ್ದಾರೆ. ಬಲಿದಾನ ಗೈದವರನ್ನು ನೆನಪಿಸಿಕೊಳ್ಳದಿದ್ದರೆ ನಾವು ಭಾರತೀಯ ಪ್ರಜೆಗಳೇ ಅಲ್ಲ ಎಂದು ಉಡುಪಿಯ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ಗಿಲ್ಬರ್ಟ್ ಬ್ರಗಾಂಝ ಹೇಳಿದ್ದಾರೆ.
ಜು. 26ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಎದುರು ಸಂಚಲನ ತಂಡದ ನೇತೃತ್ವ ದಲ್ಲಿ ಜರಗಿದ “ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ವಿಜಯದ ಹಿಂದೆ ಹಲವರ ತ್ಯಾಗ, ಬಲಿದಾನಗಳಿರುತ್ತವೆ. ಮಕ್ಕಳ ಗೆಲುವಿನಲ್ಲಿ ಅವರ ಹೆತ್ತವರ ತ್ಯಾಗವಿದೆ. ದೇಶದ ವಿಜಯದಲ್ಲಿ ಸೈನಿಕರು, ನಾಗರಿಕರ ಬಲಿದಾನವಿದೆ. ಆದರೆ ಇಂದಿನ ಕೆಲವು ಮಕ್ಕಳಿಗೆ ಕಾರ್ಗಿಲ್ ವಿಜಯದ ದಿನವೂ ಗೊತ್ತಿಲ್ಲ. ಕಾರ್ಗಿಲ್ನಲ್ಲಿ ಸೈನಿಕರು ಗುಂಡಿನ ಮೊರೆತ, ಚಳಿಯ ನಡುವೆ ಹೋರಾಡಿ ದೇಶಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 527 ಮಂದಿ ಬಲಿದಾನಗೈದು 1,350 ಮಂದಿ ಗಾಯಗೊಂಡಿದ್ದಾರೆ. ಸೈನಿಕರಿಗೆ ಜಾಗ, ಹಣಕ್ಕಿಂತಲೂ ಗೌರವ ನೀಡುವುದು ಮುಖ್ಯ ಎಂದು ಬ್ರಗಾಂಝ ಹೇಳಿದರು.
ಅವಕಾಶ ಬಂದಾಗ ಇಲ್ಲವೆನ್ನಬೇಡಿ
ದೇಶ ರಕ್ಷಣೆಯ ಅವಕಾಶ ಬಂದಾಗ ಅದಕ್ಕೆ ಇಲ್ಲ ಎನ್ನಬಾರದು. ಸರಕಾರ ಸೈನಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಕುಟುಂಬಿಕರನ್ನೂ ಚೆನ್ನಾಗಿ ನೋಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ 1,200 ಮಂದಿ ನಿವೃತ್ತ ಸೈನಿಕರಿದ್ದಾರೆ. 700 ಮಂದಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾಭ್ಯಾಸ ಪಡೆದು ವಿದೇಶಕ್ಕೆ ತೆರಳುವ ಒಂದೇ ಉದ್ದೇಶವನ್ನಿಟ್ಟುಕೊಳ್ಳದೆ ಸೈನಿಕ ರಾಗಿ ದೇಶಸೇವೆ ಮಾಡುವತ್ತಲೂ ಗಮನ ನೀಡಬೇಕು ಎಂದು ಗಿಲ್ಬರ್ಟ್ ಬ್ರಗಾಂಝ ಅವರು ನೆರೆದಿದ್ದ ವಿದ್ಯಾರ್ಥಿ ಸಮೂಹದಲ್ಲಿ ಮನವಿ ಮಾಡಿದರು.
ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ
ಡಾ| ರೋಶನ್ ಶೆಟ್ಟಿ, ಡಾ| ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಶೆಟ್ಟಿ, ಸಂಚಲನ ತಂಡದ ಅಧ್ಯಕ್ಷ ಪ್ರೇಮ್ಪ್ರಸಾದ್ ಶೆಟ್ಟಿ, ಮಲಬಾರ್ ಗೋಲ್ಡ್ನ ಸ್ಟೋರ್ ಇನ್ಚಾರ್ಜ್ ಹಫೀಜ್ ಉಪಸ್ಥಿತರಿದ್ದರು. ಮಾಧವ ಮುದ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಸೀತಾಳೆ ಮರದ ಬೀಜಗಳನ್ನು ವಿತರಿಸಿದರು.
ಅವಕಾಶ ಕಳೆದುಕೊಂಡೆ
ಕಾರ್ಗಿಲ್ನಲ್ಲಿ ಪಾಕ್ ಸೈನಿಕರ ವಿರುದ್ಧದ ಕಾರ್ಯಾಚರಣೆ ಮೇನಲ್ಲಿ ಆರಂಭವಾಗಿತ್ತು. ಆದರೆ ನಾನು ಅದೇ ವರ್ಷ ಮಾರ್ಚ್ನಲ್ಲಿ ಸೇವಾ ನಿವೃತ್ತನಾದೆ. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡೆ ಎಂದು ಹೇಳುತ್ತಾ ಗಿಲ್ಬರ್ಟ್ ಅವರು ಗದ್ಗದಿತರಾದರು.
527 ಗಿಡ ನೆಡುವ ಯೋಜನೆ
ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ 527 ಭಾರತೀಯ ಸೈನಿಕರ ನೆನಪು ಅಜರಾಮರವಾಗಿಸುವ ಪ್ರಯತ್ನವಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನ ಪ್ರದೇಶದಲ್ಲಿ ಹಲಸು,ಮಾವು,ಬೇವು,ಪೇರಳೆ,ನೆಲ್ಲಿಕಾಯಿ ಮೊದಲಾದ 527 ಗಿಡಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು. ನೂರಾರು ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.