ಇಕ್ಕಟ್ಟಾದ ರಸ್ತೆ, ನಗರದ ಮುಖ್ಯ ರಸ್ತೆ ಅವ್ಯವಸ್ಥೆಯಿಂದ ಸಂಚಾರ ಸಂಕಷ್ಟ
Team Udayavani, Aug 6, 2018, 11:31 AM IST
ನಗರ: ಇಕ್ಕಟ್ಟಾದ ರಸ್ತೆ, ಹೆಚ್ಚಿದ ವಾಹನಗಳ ಸಂಖ್ಯೆಯಿಂದ ನಗರದಲ್ಲಿ ಸಂಚಾರ ಸಮಸ್ಯೆ ಉಂಟಾಗಿರುವುದು ಹೌದು. ಇದರ ಜತೆಗೆ ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆ ಅವ್ಯವಸ್ಥೆಯ ಪಾಲೂ ಪುತ್ತೂರು ನಗರದೊಳಗಿನ ಸಂಚಾರ ಸಂಕಷ್ಟಕ್ಕೆ ಕಾರಣವಾಗಿದೆ.
ನಗರದ ಗಾಂಧಿಕಟ್ಟೆಯ ಬಳಿಯಿಂದ ಮಿಲಿಟ್ರಿ ಹೊಟೇಲ್ ತನಕದ ಅಂದಾಜು 100 ಮೀ. ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ದೊಡ್ಡ ಗಾತ್ರದ ಹೊಂಡಗಳು, ಡಾಮರು ಕಿತ್ತು ಹೋದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸವಾಲಾಗಿದೆ. ನಗರದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪರ್ಯಾಯ ಕ್ರಮಗಳನ್ನು ತಾತ್ಕಾಲಿಕವಾಗಿ ಅಳವಡಿಸಿ ಬಹುತೇಕ ಯಶಸ್ವಿಯಾಗಿದೆ. ಇದೇ ರೀತಿ ವಾಹನಗಳ ದಟ್ಟಣೆಗೆ ಕಾರಣ ವಾಗುವ ಗಾಂಧಿಕಟ್ಟೆ ಬಳಿಕದ 100 ಮೀ. ರಸ್ತೆ ಅವ್ಯವಸ್ಥೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ.
ಈ ಹಿಂದೆ ನಗರೋತ್ಥಾನದಲ್ಲಿ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಗುಣಮಟ್ಟದಲ್ಲಿ ನಡೆಸಿಲ್ಲ. ಈ ಕುರಿತು ಜಿಲ್ಲಾಧಿಕಾರಿಯವರಿಗೂ ದೂರು ನೀಡಲಾಗಿದೆ. ಹೆದ್ದಾರಿಯನ್ನು ಸಮರ್ಪ ಕಗೊಳಿಸಿ ನೀಡದ ಹೊರತು ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ವಿನಂತಿಸಲಾಗಿದೆ ಎಂಬ ಉತ್ತರ ಸ್ಥಳೀಯಾಡಳಿತ ನೀಡುತ್ತದೆ.
ಸ್ಥಳೀಯಾಡಳಿತ ವಿಫಲ?
ವರ್ಷಕ್ಕೆ ಮೂರು ಬಾರಿ ರಸ್ತೆ ಹದೆಗೆಡುವ ಸ್ಥಿತಿ ನಿರ್ಮಾಣವಾಗುವುದು ಮಾಮೂಲು. ಪ್ಯಾಚ್ ವರ್ಕ್ಗೆ ಮಾತ್ರ ಆದ್ಯತೆ ನೀಡಿ ಹಣ ವ್ಯಯ ಮಾಡುವ ಸ್ಥಳೀಯಾಡಳಿತ ಶಾಶ್ವತ ಪರಿಹಾರ ಕೈಗೊಳ್ಳು ವಲ್ಲಿ ಮಾತ್ರ ವಿಫಲವಾಗಿದೆ. ಗಾಂಧಿಕಟ್ಟೆಯ ಬಳಿಯ ಅಶ್ವತ್ಥ ಮರ ಕೆಳಗೆ ರಸ್ತೆಯಲ್ಲಿ ಬೃಹತ್ ಗಾತ್ರದ ನೀರು ಹರಿಯುವ ಕಣಿಗಳು ನಿರ್ಮಾಣವಾಗಿವೆ. ರಸ್ತೆಯ ಗುಣಮಟ್ಟ ಸರಿಯಾಗಿಲ್ಲದೇ ಇರುವುದರಿಂದ ಮತ್ತೆ ಮತ್ತೆ ಗುಂಡಿಗಳು ಬೀಳುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ತ್ವರಿತ ಕ್ರಮ ಕೈಗೊಳ್ಳಿ
ಗಾಂಧಿಕಟ್ಟೆಯಿಂದ ಕೆಳ ಭಾಗದ 100 ಮೀ. ವ್ಯಾಪ್ತಿಯಲ್ಲಿ ಇನ್ನೊಂದು ವಾರ ಕಳೆದರೆ ಸಂಚಾರವೇ ಅಸಾಧ್ಯ. ವಾಹನ ದಟ್ಟಣೆಯ ಸಂದರ್ಭದಲ್ಲಿ ಈ ನೂರು ಮೀ. ಕ್ರಮಿಸಲು ಕನಿಷ್ಟ 10 ನಿಮಿಷವಾದರೂ ಬೇಕು. ಈ ಕುರಿತು ಸಂಬಂಧಪಟ್ಟವರು ತ್ವರಿತ ಕ್ರಮ ಕೈಗೊಳ್ಳಬೇಕು. ನಗರದ ಮಧ್ಯ ಭಾಗದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ ಹೇಗೆ ?
– ಗುರುಕಿರಣ್,
ವಾಹನ ಸವಾರ