‘ಅಭಿವೃದ್ಧಿಗೆ ಸ್ವಾತಂತ್ರ್ಯ ಪ್ರೇರಣೆ’
Team Udayavani, Aug 16, 2018, 12:10 PM IST
ಬೆಳ್ತಂಗಡಿ: ತಾ|ನ 17 ಗ್ರಾಮಗಳಿಗೆ ಕಸ್ತೂರಿ ರಂಗನ್ ವರದಿ ಜಾರಿ ಕರಿನೆರಳು ಬಿದ್ದಿದ್ದು, ಅವರಿಗೆ ನ್ಯಾಯ ಒದಗಿಸುವುದು, ಮಳೆಯಿಂದ ಕಂಗಾಲಾಗಿರುವ ಜನತೆಗೆ, ಕೃಷಿಕರಿಗೆ ಪರಿಹಾರ ಒದಗಿಸುವ ಜತೆಗೆ ತಾ|ನ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಸ್ವಾತಂತ್ರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬುಧವಾರ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ತಾ| ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ-ಮತಗಳ ವಿಭಜನೆ, ಬಡವ – ಬಲ್ಲಿದ ಭೇದ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಕಲ್ಪನೆ ನಮ್ಮದಾಗಬೇಕು. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯುವ ಜನತೆ ಆದರ್ಶ ಜೀವನ ನಡೆಸಿ, ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ತಹಶೀಲ್ದಾರ್ ಮದನ್ ಮೋಹನ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡಿ ದರು. ಮುಖ್ಯ ಅತಿಥಿ ಗಳಾದ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ಭಟ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್ ಶುಭಹಾರೈಸಿದರು.
ಎಂಡೋ ಸಂತ್ರಸ್ತರಿಗೆ ಅರ್ಪಣೆ
ಶಾಸಕನಾಗಿ ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು, ಈ ಬಾರಿಯ ಸ್ವಾತಂತ್ರ್ಯವನ್ನು ಯಾರದೋ ತಪ್ಪಿನಿಂದ ಪ್ರಸ್ತುತ ನರಕಯಾತನೆ ಜೀವನ ನಡೆಸುತ್ತಿರುವ ಎಂಡೋ ಸಂತ್ರಸ್ತರಿಗೆ ಅರ್ಪಣೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಅವರಿಗೆ ಸೌಲಭ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಹರೀಶ್ ಪೂಂಜ ತಿಳಿಸಿದರು.