ಸೈನಿಕರಿಗೆ ಈ ಗತಿ ಬಾರದಿರಲಿ


Team Udayavani, Aug 25, 2018, 6:00 AM IST

15.jpg

ಇತ್ತೀಚೆಗೆ ಸಂಸದ ವರುಣ್‌ ಗಾಂಧಿಯವರು ಉಚ್ಚ ತಾಂತ್ರಿಕ ಜ್ಞಾನ ಹಾಗೂ ಅನುಭವವಿರುವ ಮಾಜಿ ಸೈನಿಕರನೇಕರು ನಿವೃತ್ತಿಯ ನಂತರ ಕುಟುಂಬ ಪೋಷಣೆಗಾಗಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ದುಡಿಯುತ್ತಿರುವ ಕುರಿತು ಲೇಖನ ಬರೆದು, ಸೈನಿಕರಿಗೆ ಸಮರ್ಪಕ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವ ಅಗತ್ಯದ ಕುರಿತು ದೇಶದ ಗಮನ ಸೆಳೆದರು. ದುರ್ಗಮ ಗುಡ್ಡಗಾಡುಗಳಲ್ಲಿ, ವಿಷಮ ಹವಾಮಾನದ ನಡುವೆ ಸೇವೆ ಸಲ್ಲಿಸುವ ನಮ್ಮ ಯೋಧರು ಕೌಟುಂಬಿಕ ಹಿತ ಅಲಕ್ಷಿಸಿ ತಮ್ಮ ತುಂಬು ತಾರುಣ್ಯವನ್ನು ರಾಷ್ಟ್ರ ರಕ್ಷಣೆಗಾಗಿ ಮುಡಿಪಾಗಿಡುತ್ತಾರೆ. ಜೀವನದ ಸುವರ್ಣಕಾಲವನ್ನು (ಸಾಮಾನ್ಯವಾಗಿ 18-45ರ ವಯಸ್ಸು) ರಾಷ್ಟ್ರರಕ್ಷಣೆಗಾಗಿ ವ್ಯಯಿಸುವ ಹಾಗೂ ಸೇನೆಯ ಶಿಸ್ತಿನ ಕಟ್ಟುಪಾಡಿಗೊಳಗಾಗಿ ಸ್ವಹಿತಕ್ಕಾಗಿ ದನಿ ಎತ್ತಲಾಗದ ಸ್ಥಿತಿಯಲ್ಲಿರುವ (ನಾಗರಿಕ ನೌಕರರಂತೆ ಮುಷ್ಕರ,ಪ್ರತಿಭಟನೆ ಮಾಡಲಾಗದ) ಸೈನಿಕರ ಜೀವನ ಮಟ್ಟ (standard of living) ಸುಧಾರಿಸಲು ಸರಕಾರ ನಿರಂತರ ಪ್ರಯತ್ನಿಸುತ್ತಿರುವುದು ಸಂತಸದ ವಿಷಯ. ಇತ್ತೀಚೆಗಷ್ಟೆ ಕೇಂದ್ರ ಸರಕಾರ ಮಾಜಿ ಸೈನಿಕರ ಬಹು ದಿನಗಳ ಒನ್‌ ರ್‍ಯಾಂಕ್‌ ಒನ್‌ ಪೆನ್ಶನ್‌ ಬೇಡಿಕೆಯನ್ನು ಈಡೇರಿಸುವ ಮೂಲಕ ಸೈನಿಕರ ಕುರಿತು ತನ್ನ ಸಹಾನುಭೂತಿ ಹಾಗೂ ಸಂವೇದನೆ ತೋರಿಸಿದೆ. ಸೇವೆಯಲ್ಲಿರುವ ಮತ್ತು ಸೇವೆಯಿಂದ ನಿವೃತ್ತರಾದ ಸೈನಿಕರ ಹಿತರಕ್ಷಣೆ ಮಾಡಬೇಕಾದದ್ದು ಸರಕಾರದ ಹಾಗೂ ಸಮಾಜದ ಕರ್ತವ್ಯವೂ ಹೌದು. ಸೇವೆಯಲ್ಲಿರುವ ಸೈನಿಕರನ್ನು ಮತ್ತು ಮಾಜಿ ಸೈನಿಕರನ್ನು ಸಮಾಜದಲ್ಲಿ ಗೌರವದಿಂದ ನೋಡುವಂತಾದಾಗ ಮತ್ತು ನಿವೃತ್ತರ ಸಮ್ಮಾನಜನಕ ಪುನರ್ವಸತಿ ಸಾಧ್ಯವಾದಾಗ ಮಾತ್ರ ನಮ್ಮ ಯುವ ಪೀಳಿಗೆ ಸೇನೆ ಸೇರಲು ಮುಂದೆ ಬರುವರು. 

ಸರಕಾರದ ಪ್ರಯತ್ನದ ಜತೆಯಲ್ಲಿ ನಾಗರಿಕ ಸಮಾಜದ ಪ್ರಯತ್ನ ಮತ್ತು ಪುನರ್ವಸತಿಯಂತಹ ವಿಷಯದಲ್ಲಿ ಉದ್ಯಮ ಜಗತ್ತು (corporate world) ಕೈ ಜೋಡಿಸಿದಾಗ ಮಾಜಿ ಸೈನಿಕರ ಬದುಕಿನ ಸಂಜೆ ನೆಮ್ಮದಿದಾಯಕವಾಗುವುದರಲ್ಲಿ ಸಂದೇಹವಿಲ್ಲ. 

ಸಮ್ಮಾನಜನಕ ಸ್ಥಾನಮಾನ
ಸೇವೆಯಲ್ಲಿರುವ ಸೈನಿಕರ ಸ್ಥಾನಮಾನ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇತ್ತೀಚೆಗೆ ಆದೇಶವೊಂದರ ಮೂಲಕ ವಾಯು,ಜಲ ಮತ್ತು ಭೂ ಸೇನೆಯಲ್ಲಿನ ಸುಮಾರು 64,000 ಜೆಸಿಓಗಳನ್ನು (Junior Commissioned Officers) ಗೆಜೆಟೆಡ್‌ ಅಧಿಕಾರಿಗಳು ಎಂದು ಸ್ಪಷ್ಟಪಡಿಸಿದ ಕ್ರಮ ಶ್ಲಾಘನೀಯ. 2011ರಲ್ಲಿ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಜೆಸಿಓಗಳು ಗೆಜೆಟೆಡ್‌ ಅಧಿಕಾರಿಗಳಲ್ಲ ಎನ್ನುವ ಉತ್ತರ ನೀಡಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸಿ ಅನುಭವಿ ಕಿರಿಯ ಅಧಿಕಾರಿಗಳಿಗೆ ಇದೀಗ ಸರಕಾರ ನ್ಯಾಯ ಒದಗಿಸಿದೆ. ಸಾಮಾನ್ಯ ಯೋಧನೋರ್ವ ಕಠಿಣ ದೈಹಿಕ ಅರ್ಹತೆ, ಹಿರಿತನ, ಅನುಭವ, ಕುಶಲತೆ, ದಕ್ಷತೆಯ ಮಾನದಂಡದ ಆಧಾರದ ಮೇಲೆ ಭಾರತದ ರಾಷ್ಟ್ರಪತಿಯಿಂದ ಸೇನೆಯಲ್ಲಿ ಜ್ಯೂನಿಯರ್‌ ಕಮಿಷನ್‌ ಅಧಿಕಾರಿಯಾಗಿ ನೇಮಕಗೊಳ್ಳುತ್ತಾನೆ. ಬ್ರಿಟಿಷ್‌ ಸೇನೆಯಲ್ಲಿ ಭಾರತೀಯ ಜವಾನರು ಮತ್ತು ಆಂಗ್ಲ ಅಧಿಕಾರಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಈ ಕಿರಿಯ ಅಧಿಕಾರಿಗಳು ತಮ್ಮ ಅಪಾರ ಅನುಭವ ಮತ್ತು ಉತ್ಕೃಷ್ಟ ವೃತ್ತಿಪರತೆಯಿಂದಾಗಿ ಸೇನೆಯಲ್ಲಿ ಆಂತರಿಕವಾಗಿ ಇಂದಿಗೂ ಉಚ್ಚ ಅಧಿಕಾರಿಗಳಿಂದಲೂ “ಸಾಹಬ್‌’ ಎಂದು ಗೌರವಾನ್ವಿತರಾಗಿ ಸಂಬೋಧಿಸಲ್ಪಡುತ್ತಾರೆ. ತರಬೇತಿ ಮುಗಿಸಿ ಬೆಟಾಲಿಯನ್ನಿಗೆ ಕಾಲಿಡುವ ಯುವ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ ಅವರನ್ನು ಪರಿಪಕ್ವತೆಯೆಡೆಗೆ ಕೊಂಡೊಯ್ಯುವವರೂ ಇದೇ ಜೆಸಿಓಗಳು. ಬೆಟಾಲಿಯನ್‌ ಕಮಾಂಡರ್‌ಗಳು ತನ್ನ ಅಧೀನಸ್ಥ ಕಂಪೆನಿಯ ಕಾರ್ಯದಲ್ಲಿನ ಯಾವುದೇ ಸಫ‌ಲತೆ-ವಿಫ‌ಲತೆಯ ಕುರಿತಾಗಿ ಕಂಪನಿ ಕಮಾಂಡರ್‌ ಹೊಣೆ ಹೊತ್ತಿರುವ ಯುವ ಕಮಿಷನ್‌x ಅಧಿಕಾರಿ ( ಸಾಮಾನ್ಯವಾಗಿ ಕ್ಯಾಪ್ಟನ್‌ ಅಥವಾ ಮೇಜರ್‌)ಗಿಂತ ಕಂಪೆನಿಯ ಸೀನಿಯರ್‌ ಜೆಸಿಓಗಳ ಮಾತಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಸೈನಿಕ ಅಪರೇಶನ್‌ಗಳಲ್ಲಿ, ಯುದ್ಧ ತರಬೇತಿಯಲ್ಲಿ ಈ ಹಿರಿಯ ಜೆಸಿಓಗಳ ವೃತ್ತಿ ಕೌಶಲವನ್ನು ಉನ್ನತ ಕಮಾಂಡರ್‌ಗಳು ಕೂಡಾ ಸುಲಭವಾಗಿ ಕಡೆಗಣಿಸುವ ಸಾಹಸ ಮಾಡುವುದಿಲ್ಲ. 

ಆಂತರಿಕವಾಗಿ ಇಷ್ಟೆಲ್ಲಾ ಗೌರವ ಪಡೆಯುವ ಸೇನೆಯ ಬೆನ್ನೆಲುಬಿನಂತಿರುವ ಜೆಸಿಓಗಳು ಇದುವರೆಗೆ ಸೇನೆಯ ಹೊರಗೆ ನಾಗರಿಕ ನೌಕರರು-ಅಧಿಕಾರಿಗಳ ನಡುವೆ ಅಧಿಕೃತವಾಗಿ ಸ್ಥಾನಮಾನವಿಲ್ಲದೆ ಕಡೆಗಣಿಸಲ್ಪಡುತ್ತಿದ್ದರು. ಸೇನಾ ಮುಖ್ಯಾಲಯ, ರೆಕಾರ್ಡ್‌ ಆಫೀಸ್‌, ತರಬೇತಿ ಕೇಂದ್ರಗಳು, ಸ್ಟೇಷನ್‌ ಹೆಡ್‌ ಕ್ವಾರ್ಟರ್ನಂತಹ ಕಾರ್ಯಾಲಯಗಳಲ್ಲಿ, ಎಲ್ಲೆಲ್ಲಿ ನಾಗರಿಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಬೇಕಾಗುತ್ತದೋ ಅಲ್ಲೆಲ್ಲಾ ಸೇನೆಯ ಈ ಅಧಿಕಾರಿಗಳು ಇದುವರೆಗೆ ಕೀಳರಿಮೆಗೊಳಗಾಗಬೇಕಾಗುತ್ತಿತ್ತು. ಒಂದೆರಡು ದಶಕಗಳ ಹಿಂದೆ ಸೇನೆ ಸೇರುವವರಲ್ಲಿ ಅಧಿಕಾಂಶರು ಹತ್ತನೇ ತರಗತಿಗಿಂತಲೂ ಕಡಿಮೆ ಶಿಕ್ಷಣಾರ್ಹತೆ ಹೊಂದಿರುತ್ತಿದ್ದರು. ಸೂಕ್ತ ಶೈಕ್ಷಣಿಕ ಹಿನ್ನೆಲೆಯೂ ಇಲ್ಲದೆ, ಅಧಿಕೃತವಾಗಿ ಗೆಜೆಟೆಡ್‌ ಅಧಿಕಾರಿಗಳ ಸ್ಥಾನಮಾನವೂ ಇಲ್ಲದೆ ನಾಗರಿಕ ನೌಕರರಿಂದಾಗುವ ಬೇಧ-ಭಾವವನ್ನು ಸಹಿಸಿಕೊಂಡು ತಮ್ಮ ನೋವನ್ನು, ಅಪಮಾನವನ್ನು ನುಂಗಿಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸೇನೆಗೆ ಸೇರುವವರಲ್ಲಿ ಉನ್ನತ ಶಿಕ್ಷಣ ಪಡೆದಿರುವವರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಅವರ ಮಾನಸಿಕ ಸ್ಥಿತಿಗತಿಯಲ್ಲಿ ಸ್ವಾಭಾವಿಕವಾಗಿಯೇ ಗುರುತರ ಬದಲಾವಣೆ ಕಾಣಬಹುದಾಗಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಉಚ್ಚ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು, ಸೈನ್ಯ ಉಪಕರಣಗಳನ್ನು ನಿರ್ವಹಣೆ ಮಾಡುವ ಸೈನಿಕರು ಹಿಂದೆಂದಿಗಿಂತಲೂ ಇಂದು ಹೆಚ್ಚು ಕುಶಲರೂ, ತಾಂತ್ರಿಕ ನೈಪುಣ್ಯತೆಯನ್ನು ಪಡೆದ ವೃತ್ತಿಪರರೂ ಆಗಿದ್ದಾರೆ. ಸೇನೆಯಿಂದ ನಿವೃತ್ತಿಯ ನಂತರ ಪುನರ್ವಸತಿಯ ಹಂತದಲ್ಲೂ ತಮ್ಮ ಸ್ಥಾನಮಾನಗಳ ಕುರಿತಾದ ಅಸಮಾನತೆ ಅವರಲ್ಲಿ ಹತಾಶೆಯನ್ನು ಉಂಟುಮಾಡುತ್ತದೆ. 

ನಿವೃತ್ತರ ಅನುಭವ ವ್ಯರ್ಥವಾಗದಿರಲಿ
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ಸೈನ್ಯೋಪಕರಣಗಳನ್ನು ಹೊಂದಿದ ಇಂದಿನ ಸೇನೆಗೂ ಸಾಮಾನ್ಯ ಬಂದೂಕು, ರಾಕೆಟ್‌ ಲಾಂಚರ್‌, ಗ್ರೆನೇಡ್‌ಗಳನ್ನು ಹೊಂದಿದ ದಶಕಗಳ ಹಿಂದಿನ ಸೇನೆಗೂ ಅಜಗಜಾಂತರವಿದೆ. ಕೋರ್‌ ಆಫ್ ಇಲೆಕ್ಟ್ರಿಕಲ್‌ ಅಂಡ್‌ ಮೆಕ್ಯಾನಿಕಲ್‌ ಎಂಜಿನಿಯರ್, ಕೋರ್‌ ಆಫ್ ಸಿಗ್ನಲ್ಸ…, ಇಂಜಿನಿಯರ್, ಆರ್ಮಡ್‌ ಕೋರ್‌, ಮೆಡಿಕಲ್‌ ಕೋರ್‌, ಏರ್‌ ಡಿಫೆನ್ಸ್‌, ಆರ್ಟಿಲರಿ ಮೊದಲಾದ ತಾಂತ್ರಿಕ ವಿಭಾಗಗಳ ಕುರಿತು ಸಾಮಾನ್ಯರಿಗೆ ತಿಳಿದೇ ಇಲ್ಲ. ಇಂಜಿನಿಯರ್, EME ಯಂತಹ ಕೋರ್‌ಗಳಲ್ಲಿರುವ ಸಾವಿರಾರು ತಾಂತ್ರಿಕ ಹುದ್ದೆಗಳ ಕುರಿತು ಸರಿಯಾದ ಮಾಹಿತಿ ನಾಗರಿಕರಿಗಿಲ್ಲ. ಹೀಗಿರುವಾಗ ಉಚ್ಚ ತಂತ್ರಜ್ಞಾನದ ಸೈನಿಕರ ಕುಶಲತೆಯ ಅರಿವು ಜನಸಾಮಾನ್ಯರಿಗಿರಲು ಹೇಗೆ ಸಾಧ್ಯ? ರಾಷ್ಟ್ರ ರಾಜಧಾನಿ ದೆಹಲಿಯ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರ್‌. ಆರ್‌. ಹಾಸ್ಪಿಟಲ್‌ ಸಹಿತ ದೇಶದಾದ್ಯಂತ ಅನೇಕ ಸುಸಜ್ಜಿತ ಸೇನಾ ಆಸ್ಪತ್ರೆಗಳನ್ನು ಮುನ್ನಡೆಸುತ್ತಿರುವ ಸೇನಾ ಮೆಡಿಕಲ್‌ ಕೋರ್‌ನ ಸೇನೆಯ ನಿಯಮದಂತೆ ತಾರುಣ್ಯದಲ್ಲೇ ನಿವೃತ್ತರಾಗುವ ತಾಂತ್ರಿಕ ಸಿಬ್ಬಂದಿಯ ಅನುಭವ ವ್ಯರ್ಥ ವಾಗಬಾರದಲ್ಲವೇ? ಯಂತ್ರೋಪಕರಣಗಳನ್ನು, ಶಸ್ತ್ರಾಸ್ತ್ರಗಳನ್ನು ಸುಸ್ಥಿತಿಯಲ್ಲಿಡುವ,ರಿಪೇರಿ,ಕಾಯಕಲ್ಪ ಮಾಡುವ ನೂರಾರು ನುರಿತ ತಾಂತ್ರಿಕ ಸೈನ್ಯ ಸಿಬ್ಬಂದಿಯನ್ನು ಹೊಂದಿದ ಸೇನೆಯ ಕೋರ್‌ ಆಫ್ ಇಲೆಕ್ಟ್ರಿಕಲ್‌ ಮೆಕ್ಯಾನಿಕಲ್‌ ಎಂಜಿನಿಯರ್‌ ನಡೆಸುತ್ತಿರುವ ವರ್ಕ್‌ಶಾಪ್‌ಗ್ಳ ಕಲ್ಪನೆಯೂ ನಾಗರಿಕರಿಗೆ ಇರಲಾರದು. ಸೇನೆಯ ಆರ್ಟಿಲರಿ ಗನ್‌, ಆರ್ಮ್ಡ್‌ ಟ್ಯಾಂಕ್‌ಗಳ ತಂತ್ರಜ್ಞರು ನಿವೃತ್ತಿಯ ನಂತರ ಸೆಕ್ಯುರಿಟಿ ಗಾರ್ಡ್‌ ಆಗಿರಲು ಮಾತ್ರ ಯೋಗ್ಯರೇ? ಸೇನಾ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹಲವು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ, ಅದರಲ್ಲೂ ಕೆಲವರು ಡಾಕ್ಟರೇಟ್‌ ಪದವಿ ಪಡೆದ ಜೆಸಿಓ ಇನ್‌ಸ್ಟ್ರಕ್ಟರ್ಸ್‌ ಎನ್ನುವ ಕುರಿತು ಕೆಲವರಿಗೆ ಮಾತ್ರ ತಿಳಿದಿರಬಹುದು. ಇತ್ತೀಚೆಗೆ ಸೇನೆಯ ಶಿಕ್ಷಣ ವಿಭಾಗದ ನಿವೃತ್ತ ಜೆಸಿಓ ಇನ್‌ಸ್ಟ್ರಕ್ಟರ್‌ ಓರ್ವರು ಪ್ರತಿಷ್ಠಿತ ಶಾಲೆಯೊಂದರಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರ ಅರ್ಹತೆಯತೆಯನ್ನು ಪ್ರಶ್ನಿಸುವ ಅನವಶ್ಯಕ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯಿತು. ನಾಗರಿಕ ಆಡಳಿತದಲ್ಲಿರುವಂತೆ ಸೇನೆಯ ವಿವಿಧ ವಿಭಾಗಗಳಲ್ಲೂ ವಿವಿಧ ತಾಂತ್ರಿಕ-ತಾಂತ್ರಿಕೇತರ ಸಿಬ್ಬಂದಿ ಇರುವ ಕುರಿತು ಅರಿವಿಲ್ಲದಿರುವವರು ಎಲ್ಲಾ ಮಾಜಿ ಸೈನಿಕರನ್ನು ನಿವೃತ್ತಿಯ ನಂತರ ಸೆಕ್ಯುರಿಟಿ ಗಾರ್ಡ್‌ ಆಗಲು ಮಾತ್ರ ಯೋಗ್ಯರೆಂಬಂತೆ ಮಾತನಾಡುವುದು ಹಿರಿಯ ಮಾಜಿ ಯೋಧರ ಮನಸ್ಸನ್ನು ಘಾಸಿಗೊಳಿಸುತ್ತದೆ.

ಪುನರ್ವಸತಿ ಆದ್ಯತೆಯಾಗಲಿ 
ಪ್ರತಿ ವರ್ಷ ಸರಾಸರಿ ಸುಮಾರು 60,000 ಯೋಧರು ಸೇನೆಯಿಂದ ನಿವೃತ್ತರಾಗುತ್ತಾರೆ. ವರ್ಷದಿಂದ ವರ್ಷಕ್ಕೆ ಸರಕಾರಿ ನೌಕರಿಯ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಸಾವಿರಾರು ಮಾಜಿ ಯೋಧರು ಪುನರ್ವಸತಿಗಾಗಿ ಪರದಾಡಬೇಕಾಗುತ್ತದೆ. ಒಲ್ಲದ ಮನಸ್ಸಿನಿಂದ ಉನ್ನತ ಕೌಶಲವಿದ್ದಾಗ್ಯೂ ಸೆಕ್ಯುರಿಟಿ ಗಾರ್ಡ್‌ಗಳಾಗಿ ದುಡಿಯಬೇಕಾಗುತ್ತದೆ. ಅನುಭವಿ ಹಾಗೂ ರಕ್ಷಣೋಪಕರಣಗಳ ತಂತ್ರಜ್ಞಾನ ಹೊಂದಿದ ಮಾಜಿ ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಬಹುದಾದ ರಕ್ಷಣಾ ಉತ್ಪಾದನೆಯ ಕ್ಷೇತ್ರದಲ್ಲಿ ನಮ್ಮ ಖಾಸಗಿ ಉದ್ಯಮಗಳು ಇನ್ನೂ ಶೈಶಾವಸ್ಥೆಯಲ್ಲಿದೆ. ಜನ ಸಾಮಾನ್ಯರಿಗಷ್ಟೆ ಅಲ್ಲ ಉದ್ಯಮ ರಂಗದ ನೇತಾರರು ಕೂಡಾ ಮಾಜಿ ಸೈನಿಕರ ಕಾರ್ಯ ಕೌಶಲ್ಯದ ಕುರಿತು ಹೆಚ್ಚೇನೂ ತಿಳಿದಿರುವುದಿಲ್ಲ ಎನ್ನುವುದು ವಿಷಾದಕರ. ಇದರಿಂದಾಗಿ ಮಾಜಿ ಯೋಧರು ಒಂದೆಡೆ ಪುನರ್ವಸತಿಯ ಸಮಸ್ಯೆ ಎದುರಿಸಬೇಕಾಗುತ್ತಿದೆಯಾದರೆ ಇನ್ನೊಂದೆಡೆ ಅವರ ಅನುಭವ ಸರಿಯಾಗಿ ಉಪಯೋಗವಾಗದೆ ವ್ಯರ್ಥವಾಗುತ್ತಿದೆ.

ರಕ್ಷಣಾ ಉದ್ಯಮವನ್ನು ಖಾಸಗಿ ವಲಯಕ್ಕೆ ತೆರೆಯುವ ಕೆಲಸ ಬಹಳ ಹಿಂದೆಯೇ ನಡೆಯಬೇಕಿತ್ತು. ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳನ್ನು ವಿದೇಶಗಳಿಂದ ಖರೀದಿಸುವಾಗ ಅವುಗಳನ್ನು ದೇಶೀಯವಾಗಿ ನಿರ್ಮಿಸಬೇಕೆನ್ನುವ ಶರತ್ತು ವಿಧಿಸುವ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ಮುಂದಿನ ವರ್ಷಗಳಲ್ಲಿ ರಕ್ಷಣಾ ವಲಯದ ಉದ್ಯಮ ಬೆಳೆದಂತೆ ಅವುಗಳಲ್ಲಿ ಮಾಜಿ ಸೈನಿಕರನ್ನು ಬಳಸಿಕೊಳ್ಳುವಂತಾಗಬಹುದು. ಖಾಸಗಿ ಉದ್ಯಮಿಗಳಿಗೆ ಸೇನೆಯ ಅರ್ಹ, ನಿಪುಣ ಸಿಬ್ಬಂದಿಯನ್ನು ತಮ್ಮ ಉದ್ದಿಮೆಗಳಲ್ಲಿ ನೇಮಕ ಮಾಡುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ. ಇಂದು ದೇಶ ರಕ್ಷಣೆಯಷ್ಟೆ ಅಲ್ಲ ಅಗತ್ಯ ಬಿದ್ದಲ್ಲಿ ರೈಲ್ವೆ, ವೈದ್ಯಕೀಯ, ಸಂಪರ್ಕ, ವಿಮಾನಯಾನ, ದೊಡ್ಡ ದೊಡ್ಡ ಸೇತುವೆ ನಿರ್ಮಾಣದಂತಹ ಸರಕಾರದ ಯಾವುದೇ ನಾಗರಿಕ ಸೇವೆ ನಿರ್ವಹಣೆ ಮಾಡುವ ಸಾಮರ್ಥ್ಯ ನಮ್ಮ ಸೇನೆಗಿದೆ. ಆ ಎಲ್ಲಾ ಸೇವೆ ನೀಡಲು ಅಗತ್ಯವಿರುವ ಕಾರ್ಯದಕ್ಷತೆ ಹೊಂದಿದ ಸಿಬ್ಬಂದಿ ನಮ್ಮ ಸೇನೆಯ ಮೂರೂ ಅಂಗಗಳಲ್ಲಿದ್ದಾರೆ. ಮೂಲಭೂತವಾಗಿ ಎಲ್ಲರೂ ಸೈನಿಕನಾಗಿದ್ದರೂ ಅಲ್ಲಿ ಶಿಕ್ಷಕ, ಗುಮಾಸ್ತ, ತಂತ್ರಜ್ಞರೂ ಇದ್ದಾರೆ. ನಿವೃತ್ತಿಯ ನಂತರ ಅವರಿಗೆ ನಾಗರಿಕ ಮತ್ತು ಖಾಸಗಿ ಸೇವೆಗಳಲ್ಲಿ ಇನ್ನಷ್ಟು ಅವಕಾಶಗಳು ದೊರೆಯುವಂತಾಗಲಿ. ನಾಗರಿಕರು ಈ ಕುರಿತು ಅರಿಯಲಿ ಮತ್ತು ಸೈನಿಕರ ಕುರಿತಾದ ಪೂರ್ವಾಗ್ರಹಗಳನ್ನು ತೊರೆಯಲಿ. ಸೈನಿಕರಿಗೆ ಅನುಕಂಪದ ಅಗತ್ಯವಿಲ್ಲ, ನಾಗರಿಕ ಸಮಾಜದಲ್ಲಿ ಅವರಿಗೆ ಯಥೋಚಿತ ಗೌರವ ದೊರೆಯಲಿ.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.