ಸಚಿವ ಕೃಷ್ಣ ಬೈರೇಗೌಡ ಅವರಿಗೆ: ಮನವಿ
Team Udayavani, Aug 25, 2018, 11:28 AM IST
ವಿಟ್ಲ : ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಮತ್ತು ಮೂಲ ಸೌಕರ್ಯ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರನ್ನು ದ.ಕ. ಜಿಲ್ಲೆಯ ಗ್ರಾ.ಪಂ. ಪ್ರತಿನಿಧಿಗಳ ಒಕ್ಕೂಟದ ಪ್ರತಿನಿಧಿಗಳ ಪರವಾಗಿ ಭೇಟಿ ಮಾಡಿದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ನೇತೃತ್ವದ ತಂಡ, ಅನೇಕ ವರ್ಷಗಳಿಂದ ಪಂಚಾಯತ್ರಾಜ್ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ವಿನಂತಿಸಿತು.
ಬೇಡಿಕೆಗಳು
ರಮೇಶ್ ಕುಮಾರ್ ಅವರ ವರದಿಯಂತೆ ತಿದ್ದುಪಡಿಗೊಂಡಿರುವ 2016ರ ನಿಯಮಗಳು ಸಂಪೂರ್ಣಅನುಷ್ಠಾನಗೊಂಡು 21 ಇಲಾಖೆಗಳು ಪಂಚಾಯತ್ ರಾಜ್ನಡಿಯಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು, ಪಂ.ಗೆ ಕೂಡಲೇ ಸರಕಾರದಿಂದ ಡಾಟಾ ಎಂಟ್ರಿ ನೇಮಕ ಮಾಡುವುದು ಮತ್ತು ಆದಾಯ ಹೆಚ್ಚಿರುವ ಪಂ.ಗೆ ಹೆಚ್ಚಿನ ಸಿಬಂದಿ ನೀಡಬೇಕು, ಉದ್ಯೋಗ ಖಾತರಿ ಹಣ ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು, ಪಂಚತಂತ್ರದಲ್ಲಿ ಬಿಟ್ಟು ಹೋದ ಕಟ್ಟಡ ನಂಬ್ರವನ್ನು ಸೇರಿಸಲು ಇನ್ನೊಂದು ಬಾರಿ ಅವಕಾಶ ನೀಡಬೇಕು, ತುರ್ತು ಸಂದರ್ಭ ಅಧ್ಯಕ್ಷರ ವಿವೇಚನೆಯಿಂದ ಖರ್ಚು ಮಾಡುವ ಕನಿಷ್ಠ ರೂ. 10,000ಕ್ಕೆ ಹೆಚ್ಚಿಸಬೇಕು, ಪಂ. ಅಧ್ಯಕ್ಷ / ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕು, ಕನಿಷ್ಠ ಹತ್ತು ಲಕ್ಷ ಅಭಿವೃದ್ಧಿ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು, ಎಲ್ಲ ಇಲಾಖೆಗಳು ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ಸೇರಿದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕ್ರಮ ವಹಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.