ಮಕ್ಕಳಲ್ಲಿ ಕನ್ನಡ ಪ್ರೀತಿ ಮೂಡಿಸಿ: ಮುಂಡೋಡಿ
Team Udayavani, Nov 9, 2018, 3:12 PM IST
ಸುಳ್ಯ: ಸುವಿಚಾರ ಸಾಹಿತ್ಯ ವೇದಿಕೆ ಮತ್ತು ಕಸಾಪ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆದ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭ ಬುಧವಾರ ಅಂಬೆಟಡ್ಕ ಕನ್ನಡ ಭವನದಲ್ಲಿ ನಡೆಯಿತು. ಮೂವರು ಸಾಧಕರನ್ನು ಸಮ್ಮಾನಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಶಾಲೆಯಲ್ಲಿ ಆಂಗ್ಲ ಭಾಷಾ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿ ವ್ಯಹರಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಹೆತ್ತವರು ಪ್ರೋತ್ಸಾಹ ನೀಡಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ಮಾತನಾಡಿ, ಡಿ. 9ರಂದು ತೊಡಿಕಾನದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು. ಸುಗಮ ಸಂಗೀತ ಕ್ಷೇತ್ರದ ಸಾಧಕ ಕೆ.ಆರ್. ಗೋಪಾಲಕೃಷ್ಣ, ನೃತ್ಯ ಸಂಗೀತ ಕ್ಷೇತ್ರದ ಸಾಧಕಿ ವಿದ್ಯಾಶ್ರೀ ರಾಧಾಕೃಷ್ಣ, ಜಾನಪದ ಕ್ಷೇತ್ರದ ಸಾಧಕ ರಮೇಶ್ ಮೆಟ್ಟಿನಡ್ಕ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಗಿರಿಜಾ ಎಂ.ವಿ., ತಾಲೂಕು ಕಸಾಪ ಕಾರ್ಯದರ್ಶಿ ತೇಜಸ್ವಿ ಕಡಪಾಲ ಉಪಸ್ಥಿತರಿದ್ದರು. ಗಿರಿಜಾ ನಾಯಕ್ ಪ್ರಾರ್ಥಿಸಿದರು. ಸುವಿಚಾರ ಸಾಹಿತ್ಯ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ಉಷಾ ಪೇರಾಲು ವಂದಿಸಿದರು. ವಸಂತ ಏನೆಕಲ್ಲು ನಿರೂಪಿಸಿದರು.
ಮಾತೃ ಭಾಷೆಯನ್ನು ಬೆಳೆಸಿ
ಆಂಗ್ಲಭಾಷೆಯ ಮೇಲೆ ಅತಿಯಾದ ವ್ಯಾಮೋಹ ಸಲ್ಲದು. ಇಂತಹ ಮನಸ್ಥಿತಿಯಿಂದ ಹೆತ್ತವರು ಹೊರ ಬಂದು, ಕನ್ನಡ ಭಾಷೆಯಂತಹ ಮಾತೃಭಾಷೆಗೆ ಮಕ್ಕಳು ಮನಸ್ಸು ನೀಡಲು ಪ್ರೇರಕ ಶಕ್ತಿಯಾಗಬೇಕು. ಸುವಿಚಾರದಂತಹ ಸಾಹಿತ್ಯ ವೇದಿಕೆಗಳ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕೆ.ಆರ್. ಗೋಪಾಲಕೃಷ್ಣ, ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ರಮೇಶ್ ಮೆಟ್ಟಿನಡ್ಕ ಅವರನ್ನು ಸಮ್ಮಾನಿಸಲಾಯಿತು.