ಅತಿವೃಷ್ಟಿ, ಅನಾವೃಷ್ಟಿಯ ಮಧ್ಯೆ ಹೈರಾಣಾದ ಕೃಷಿಕ
Team Udayavani, Nov 11, 2018, 12:30 AM IST
ಹಳ್ಳಿಗಳಲ್ಲಿ ಜಮೀನ್ದಾರರು ಜಮೀನ್ದಾರರಾಗೇ ಇದ್ದಾರೆ, ಬಡವರ ಭೂಮಿಗಳು ಒಡೆದು ಚೂರಾಗಿವೆ. ಇರುವ ಅಲ್ಪ ಭೂಮಿಯಲ್ಲೇ ಸಣ್ಣ ಹಿಡುವಳಿದಾರರಾಗಿ ಹೊಟ್ಟೆ ತುಂಬಿಸಿಕೊಳ್ಳಲು ಇವರ ತಂದೆ ತಾಯಿಗಳು ಪಡುತ್ತಿರುವ ಪಾಡು ನೋಡಿದರೆ ಕರುಳು ಕಿತ್ತುಬರುವ ನೋವು ತರಿಸುತ್ತದೆ.
ಆವತ್ತು ಎಂದಿನಂತೆ ತರಕಾರಿ ಮಾರುಕಟ್ಟೆಗೆ ಹೋಗಿ ಅಲ್ಲಿ ಸೊಪ್ಪು ಮಾರುವವನ ಹತ್ತಿರ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದಾಗ ಆತನಿಂದ ಬಂದ ಉತ್ತರ ಕೇವಲ 20ರೂ! ಒಂದು ಕಟ್ಟಿಗೆ ಯಾಕಪ್ಪ ಇಷ್ಟು ರೇಟು? ಎಂದಾಗ, ಏನ್ ಮಾಡೋದು ಸ್ವಾಮಿ ರೈತ ಬೆಳಿತಾನೆ.. ತಂದುಬಿಟ್ಟು ಇಲ್ಲಿ ಹಾಕಿ ಹೋಗ್ತಾನೆ ಕೂತ್ಕೊಂಡು ಮಾರಿದ್ರೆ ಗೊತ್ತಾಗೋದು ನಮ್ಮ ಕಷ್ಟ! ಅಂದ. ಆಗ ಗೊತ್ತಾಯಿತು ಇವನು ಪಕ್ಕಾ ದಲ್ಲಾಳಿ ಎಂದು. ಮಾತು ಮುಂದುವರಿಸಿದ ಆತ “ರೈತರ ಸಾಲ ಮನ್ನಾ ಮಾಡಿದ್ದಾರೆ ಅವರು ಚೆನ್ನಾಗಿದ್ದಾರೆ ನಾವು ಕೊಂಡು ಮಾರೋರು ಬೀದಿಗೆ ಬಿದ್ದಿದ್ದೇವೆ’ ಎಂದ. ಹಾಗಂತ ಅತನೇನೂ ತಾನು ಹೇಳಿದ ಬೆಲೆ ಬಿಟ್ಟು ಕೆಳಗೆ ಇಳಿಯಲಿಲ್ಲ. ಇಲ್ಲಿ ಒಂದಂತೂ ಸ್ಪಷ್ಟ, ರೈತನು ಮಾರುಕಟ್ಟೆಗೆ ಬಂದು ಕುಳಿತು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದ ದಿನಗಳು ಮರೆಗೆ ಸರಿದು ತುಂಬಾ ವರ್ಷಗಳಾದವು. ಬಹುರಾಷ್ಟ್ರೀಯ ಮಾರಕಟ್ಟೆಯ ಹೊಡೆತಕ್ಕೆ ಸಿಕ್ಕಿ ನಲುಗಿ ಹೋದ ರೈತರ ಕಷ್ಟ ಯಾವ ಸರ್ಕಾರದ ಕಿವಿಗೂ ಬಿದ್ದಿಲ್ಲ, ಇಂದು ಸರ್ಕಾರ ರಚಿಸುವುದು, ಆಮೇಲೆ ಅದನ್ನು ಉಳಿಸಿಕೊಳ್ಳುವುದೇ ಸರ್ಕಾರಗಳಿಗೆ ದಿನ ಬೆಳಗಾದರೆ ಒಂದು ದೊಡ್ಡ ಕೆಲಸವಾಗಿರುವಾಗ ಸ್ಥಿರವಾದ ಅಭಿವೃದ್ಧಿ ಕನಸಿನ ಮಾತು ಎಂಬಂತಾಗಿದೆ. ವರ್ಷಕ್ಕೆ ನಾಲ್ಕು ಬೈ ಎಲೆಕ್ಷನ್, ನನ್ನ ಮಂತ್ರಿ ಮಾಡಿಲ್ಲ ಅಂತಾ ಬಂಡಾಯ, ಅದನ್ನು ಶಮನ ಮಾಡೋಕೆ ಒಬ್ಬ ಟ್ರಬಲ್ ಶೂಟರ್, ಅದರ ಮೇಲೆ ಒಂದು ಹೈಕಮಾಂಡ್ ಮಾರ್ಗದರ್ಶನ, ಐದು ವರ್ಷಗಳ ಅವಧಿಯಲ್ಲಿ ಕೇವಲ ಸರ್ಕಾರವನ್ನು ಸರಿದೂಗಿಸಿಕೊಂಡು ಹೋಗುವುದೇ ಒಂದು ದೊಡ್ಡ ಕೆಲಸವಾಗಿರುವಾಗ ಇನ್ನು ಅಭಿವೃದ್ಧಿಯ ಮಾತೆಲ್ಲಿ?
ಅದರಲ್ಲೂ ರಾಜ್ಯದಲ್ಲಿ ಈ ವರ್ಷವಂತೂ ಪ್ರಕೃತಿಯ ರುದ್ರ ನರ್ತನಕ್ಕೆ ಬಲಿಯಾದವರು ಅನೇಕ. ಸಾಕಷ್ಟು ಜನ ಬೀದಿಗೆ ಬಿದ್ದಿದ್ದು ಸುಳ್ಳಲ್ಲ. ಈ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ನಾಡು ಈ ಬಾರಿ ಘನಘೋರ ಅತಿವೃಷ್ಟಿಗೆ ಬಲಿಯಾಯ್ತು.
ಬಿತ್ತಿದ ಬೆಳೆಗೆ ಉತ್ತಮ ಮಳೆಯಾಯ್ತು ಎಂಬ ಖುಷಿಯಲ್ಲಿದ್ದ ಜನರಿಗೆ ಆಗಿದ್ದು ಮಾತ್ರ ನಿರಾಸೆ. ಅತಿಯಾದ ಮಳೆಯಿಂದಾಗಿ ಈ ವರ್ಷದ ಬೆಳೆಗಳು ಸರಿಯಾಗಿ ಫಸಲು ನೀಡುವುದಿಲ್ಲ ಎಂಬುದು ರೈತರಿಗೆ ಈಗಾಗಲೇ ಖಾತ್ರಿಯಾಗಿದೆ. ಮಾಡಿದ ಸಾಲಕ್ಕೆ ಬಡ್ಡಿಯನ್ನಾದರೂ ತೀರಿಸಿದರೆ ಸಾಕು ಎಂದು ಏದುಸಿರುಬಿಡುತ್ತಿದ್ದಾರೆ. ಸಾಲ ಮನ್ನಾ ಘೋಷಣೆಯಾಗಿದೆ ಅಷ್ಟೇ, ಋಣಮುಕ್ತ ಪತ್ರ ಇನ್ನೂ ರೈತರ ಮನೆ ಬಾಗಿಲಿಗೆ ಬಂದಿಲ್ಲ. ರೈತರ ಆತ್ಮಹತ್ಯೆಗಳು ನಿಂತಿಲ್ಲ, ಸಿಕ್ಕ ಅಲ್ಪ ಫಸಲಿಗೂ ಉತ್ತಮ ಬೆಲೆಯಿಲ್ಲ, ಮಾರುಕಟ್ಟೆಯಲ್ಲಿ ದಲ್ಲಾಳಿಗಳದ್ದೇ ಆರ್ಭಟ. ಕಡಿಮೆ ಬೆಲೆಗೆ ಅವರಿಗೆ ಸುರಿದು ಮನೆ ಕಡೆ ಮುಖ ಮಾಡಬೇಕು, ಅದು ಸಿಗದಿದ್ದರೆ ರಸ್ತೆಗೆ ಸುರಿದು ಬರಬೇಕು. ಈ ಸಮಸ್ಯೆ ಇವತ್ತಿನದಲ್ಲ, ಹಿಂದಿನಿಂದಲೂ ಇದೇ ಗೋಳು. ರೈತರಿಗೆ ಯಾವಾಗ ಅಚ್ಛೇ ದಿನಗಳು ಬರುವುದು ಎಂದು ಕಾದು ನೋಡಬೇಕಾಗಿದೆ.
ರೈತರ ಮಕ್ಕಳು ಕೃಷಿಯನ್ನು ನಂಬದೇ ಬೆಂಗಳೂರಿ ನಂತಹ ಬೃಹತ್ ನಗರಗಳಲ್ಲಿ ಕಂಪನಿ, ಕಾರ್ಖಾನೆಗಳಲ್ಲಿ ಕೂಲಿ ಕಾರ್ಮಿಕರಾಗುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಉತ್ತರ ಕರ್ನಾಟಕ ಜಿಲ್ಲೆಗಳ ಸಾಕಷ್ಟು ಯುವಜನರು ಹೊಟ್ಟೆಪಾಡಿಗಾಗಿ ತಮ್ಮ ಕುಟುಂಬವನ್ನು ತೊರೆದು ಮೆಟ್ರೋಪಾಲಿಟಿನ್ ನಗರಗಳಿಗೆ, ಹೊರ ರಾಜ್ಯಗಳಾದ ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಗುಳೆ ಹೋಗುತ್ತಿರುವುದು. ಅಲ್ಲಿ ಕೈಗೆ ಸಿಗುವ ಸಂಬಳ ಅಷ್ಟಕ್ಕಷ್ಟೆ. ಊರಲ್ಲಿ ಸಮಾರಂಭಗಳು ಇದ್ದಾಗ ಕಾಣಿಸಿ ಕೊಳ್ಳುವ ನಾಯಕರಿದ್ದಾರೆಯೇ ಹೊರತು ಜನರ ನಡುವೆ ನಿಂತು ಸಮಸ್ಯೆಯನ್ನಾಲಿಸುವ ಜನಸೇವಕರಾರೂ ಇಲ್ಲ.
ಹಳ್ಳಿಗಳಲ್ಲಿ ಜಮೀನಾªರರು ಜಮೀನಾªರರಾಗೇ ಇದ್ದಾರೆ, ಬಡವರ ಭೂಮಿಗಳು ಒಡೆದು ಚೂರಾಗಿವೆ. ಇರುವ ಅಲ್ಪ ಭೂಮಿಯಲ್ಲೇ ಸಣ್ಣ ಹಿಡುವಳಿದಾರರಾಗಿ ಹೊಟ್ಟೆ ತುಂಬಿಸಿಕೊಳ್ಳಲು ಇವರ ತಂದೆ ತಾಯಿಗಳು ಪಡುತ್ತಿರುವ ಪಾಡು ನೋಡಿದರೆ ಕರುಳು ಕಿತ್ತುಬರುವ ನೋವು ತರಿಸುತ್ತದೆ. ನಮ್ಮಂತೆ ನಮ್ಮ ಮಕ್ಕಳಾಗದಿರಲಿ ಎಂದು ಶಿಕ್ಷಣ ಕೊಡಿಸಿ ಉತ್ತಮ ವಿದ್ಯಾವಂತರ ನ್ನಾಗಿಸುವುದು ಹರಸಾಹಸವೇ ಸರಿ. ಬಹಳಷ್ಟು ಜನ ನಾವು ರೈತರ ಮಕ್ಕಳು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದ್ದ ಮನೆಮಠ ಮತ್ತು ಕೃಷಿಭೂಮಿಗಳನ್ನು ಮಾರಿ ಪಟ್ಟಣ ಸೇರಿಬಿಟ್ಟಿದ್ದಾರೆ. ಊರ ಗೋಮಾಳದ ಜಾಗಗಳಲ್ಲಿ ಕಾರ್ಖಾನೆಗಳು ತಲೆ ಎತ್ತುತ್ತಿವೆ, ಫಲವತ್ತಾದ ಕೃಷಿಭೂಮಿಗಳು ಸೈಟುಗಳಾಗುತ್ತಿವೆ. ರಾತ್ರಿ ಇದ್ದ ಕೆರೆಗಳು ಬೆಳಗಾಗವುದರೊಳಗೆ ನಾಪತ್ತೆಯಾಗುತ್ತಿವೆ. ದೇಶದ ಕೃಷಿ ಕ್ಷೇತ್ರ ಯಾಂತ್ರಿಕವಾಗಿದೆ, ಸಾಂಪ್ರದಾಯಿಕ ವಿಧಾನ ಹೋಗಿ ವೈಜ್ಞಾನಿಕ ವಿಧಾನ ಬಂದಿದೆ, ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ, ನಿಜ. ಆದರೆ ಅದೆಲ್ಲದರಿಂದ ಕೃಷಿಕರಿಗೆ ಯಾವುದೇ ಲಾಭಗಳಾಗುತ್ತಿಲ್ಲ. ಹೊಟ್ಟೆ ಬಟ್ಟೆಗೆ ಸಾಕುಮಾಡಿಕೊಳ್ಳುವುದೇ ಸರಿಯಾಗಿದೆ. ಕೃಷಿ ವಿಸ್ತರಣಾ ಕೇಂದ್ರಗಳು ಅದೆಷ್ಟು ಕೃಷಿಯನ್ನು ವಿಸ್ತರಿಸಿವೆಯೋ ದೇವರೆ ಬಲ್ಲ!
ಒಟ್ಟಿನಲ್ಲಿ ಕೃಷಿಕರಿಗೆ, ಅವರ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಇದರಿಂದ ಅವರು ಹತಾಶರಾಗಿ ಹೋಗಿದ್ದಾರೆ. ಪ್ರತಿ ಗ್ರಾಮಗಳಿಗೂ ಹೋಗಿ ಸರ್ಕಾರದ ಅಧಿಕಾರಿಗಳು ಅಧ್ಯಯನ ನಡೆಸಲಿ. ಆಗ ಗೊತ್ತಾಗುತ್ತೆ ಅಸಲಿಯತ್ತು. ಕೃಷಿಯೇ ನಮ್ಮ ತಾಯಿ, ಕೃಷಿ ನಮ್ಮ ದೇಶದ ಮಣ್ಣಿನ ಉಸಿರು. ಅಂತಹ ಕೃಷಿಗೆ, ಕೃಷಿಕರಿಗೆ ಸರಿಯಾದ ಪ್ರೋತ್ಸಾಹ ಸಿಗದೇ ನರಳುತ್ತಿರುವುದು ವಿಷಾದನೀಯ.
ಕುಮಾರಸ್ವಾಮಿ ವಿರಕ್ತಮಠ