ಪೇಜಾವರ ಶ್ರೀ ಎಸ್ಕಾರ್ಟ್ ವಾಹನಕ್ಕೆ ಕಾರು ಢಿಕ್ಕಿ
Team Udayavani, Nov 19, 2018, 9:55 AM IST
ಹೊಸಕೋಟೆ: ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರ ಪೊಲೀಸ್ ಬೆಂಗಾವಲು ವಾಹನಕ್ಕೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಚಿಂತಾಮಣಿ ರಸ್ತೆಯ ಕರಪ್ಪನಹಳ್ಳಿ ಗೇಟ್ ಬಳಿ ರವಿವಾರ ಸಂಭವಿಸಿದೆ.
ಕಾರಿನಲ್ಲಿದ್ದ ಚಿಂತಾಮಣಿಯ ಎಸ್ಎಲ್ವಿ ಜ್ಯುವೆಲರಿ ಮಾಲಕ ಕೆ.ಎಲ್.ರಾಮಕೃಷ್ಣಯ್ಯ (85), ಪತ್ನಿ ಸ್ವರ್ಣಲೋಚನಮ್ಮ (80) ಮೃತಪಟ್ಟವರು.
ಸಂಬಂಧಿಕರ ವಿವಾಹ ಪ್ರಯುಕ್ತ ರಾಮಕೃಷ್ಣಯ್ಯ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಬೈಕನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಎದುರುಗಡೆಯಿಂದ ಬರುತ್ತಿದ್ದ ನಂದಗುಡಿ ಠಾಣೆಗೆ ಸೇರಿದ ಪೊಲೀಸ್ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದಿದೆ. ಆಗ ರಾಮಕೃಷ್ಣಯ್ಯ ಮತ್ತು ಸ್ವರ್ಣಲೋಚನಮ್ಮ ಮೃತಪಟ್ಟಿದ್ದಾರೆ. ಬೈಕ್ ಸವಾರ ಹೊಸಕೋಟೆಯ ನಟರಾಜ್, ಕಾರು ಚಾಲಕ ಚಿಂತಾಮಣಿಯ ನಾಗೇಂದ್ರ, ರಾಮಕೃಷ್ಣಯ್ಯ ಸೊಸೆ ನಳಿನಾಕುಮಾರಿ ಗಾಯಗೊಂಡಿದ್ದು, ಅವರನ್ನು ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ವಾಹನದಲ್ಲಿದ್ದ ಎಎಸ್ಐ ಶಂಭಯ್ಯ ಎಂಬವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಮಾನವೀಯತೆ ಮೆರೆದ ಸ್ವಾಮೀಜಿ
ಅಪಘಾತ ಸಂಭವಿಸಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಬರುವವರೆಗೂ ಪೇಜಾವರ ಶ್ರೀಗಳು ಸ್ಥಳದಲ್ಲಿಯೇ ಇದ್ದು ಮಾನವೀಯತೆ ಮೆರೆದರು. ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಟಿ.ಪಿ. ಶಿವಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.